ಇಂದು ವಿಶ್ವ ಸಾಗರ ದಿನಾಚರಣೆ : ಕಡಲು ಮಾಲಿನ್ಯರಹಿತವಾಗಿರಲಿ
Team Udayavani, Jun 8, 2018, 2:10 AM IST
ಸಮುದ್ರ ಮಾಲಿನ್ಯ ತಡೆಗಟ್ಟಲು ಮತ್ತು ಆ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಜೂ. 8ರಂದು ವಿಶ್ವ ಸಾಗರ ದಿನ ಆಚರಿಸಲಾಗುತ್ತದೆ. ಮಂಗಳೂರು ವ್ಯಾಪ್ತಿಯ ಕಡಲ ಕಿನಾರೆ ಮತ್ತು ಕಡಲಿನಲ್ಲಿ ಮಾಲಿನ್ಯ ನಿಯಂತ್ರಿಸುವ ಕುರಿತು ಸಾರ್ವಜನಿಕರು, ಪ್ರವಾಸಿಗರು, ಸ್ಥಳೀಯರು ಎಚ್ಚೆತ್ತೆಕೊಳ್ಳಲಿ ಎಂಬುದು ಈ ಸುದಿನ ಸಾಂದರ್ಭಿಕ ವರದಿಯ ಉದ್ದೇಶ.
ಮಹಾನಗರ: ಇಂದು (ಜೂ. 8) ವಿಶ್ವ ಸಾಗರ ದಿನ. ಸಮುದ್ರ ಮಾಲಿನ್ಯ ತಡೆಗಟ್ಟುವ ನೆಲೆಯಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ. ದೇಶದೆಲ್ಲೆಡೆ ಸ್ವಚ್ಛ ಸುಂದರ ಭಾರತ ನಿರ್ಮಾಣದ ಗುರಿ ಹೊಂದಿರುವಾಗಲೇ, ನಮ್ಮ ನೆರೆಯ ಸಮುದ್ರವನ್ನು ಕೂಡ ಸ್ವಚ್ಛ ಹಾಗೂ ಮಾಲಿನ್ಯ ರಹಿತವಾಗಿ ರೂಪಿಸುವ ಮಹಾನ್ ಸಂಕಲ್ಪ ನಮ್ಮದಾಗಬೇಕು. ದಕ್ಷಿಣ ಕನ್ನಡ ಜಿಲ್ಲೆಯ ತಲಪಾಡಿಯಿಂದ ಉಡುಪಿ ಜಿಲ್ಲೆಯ ಶಿರೂರು ತನಕ ಹೆಚ್ಚಾ ಕಡಿಮೆ 168 ಕಿ.ಮೀ. ಉದ್ದದ ಕರಾವಳಿ ತೀರವಿದೆ. ಈ ಪೈಕಿ, ಉಳ್ಳಾಲ, ಸೋಮೇಶ್ವರ, ಪಣಂಬೂರು, ಸಸಿಹಿತ್ಲು, ಕಾಪು, ಮಲ್ಪೆ, ಮರವಂತೆ ಸೇರಿದಂತೆ ಹಲವು ಭಾಗಗಳು ಪ್ರವಾಸೋದ್ಯಮದ ಮೂಲಕವೇ ಪ್ರಸಿದ್ಧಿ ಪಡೆದಿವೆ. ಕಡಲಿನ ಸೌಂದರ್ಯವೇ ಇಲ್ಲಿ ಪ್ರವಾಸಿಗರ ಸ್ವರ್ಗವಾಗಿದೆ.
ಸ್ವಚ್ಛ ಕಡಲು ಆದ್ಯತೆಯಾಗಲಿ
ಸ್ವಚ್ಛ ಕಡಲು ನಮ್ಮ ಆದ್ಯತೆಯಾಗಬೇಕು. ಕಡಲಿನ ದಡವೂ ಸ್ವಚ್ಛವಾಗಬೇಕು. ಕಡಲಿನಲ್ಲಿ ಸಂಚರಿಸುವ ಮೀನುಗಾರಿಕಾ ದೋಣಿಗಳು ಸಮುದ್ರ ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡಬೇಕಿದೆ. ಈಗ ಮೀನುಗಾರಿಕಾ ದೋಣಿಗಳು ಈ ನಿಟ್ಟಿನಲ್ಲಿ ಪೂರಕ ಕ್ರಮಗಳನ್ನು ಕೈಗೊಂಡಿದ್ದರೂ ಕೂಡ ಇನ್ನಷ್ಟು ಪರಿಪೂರ್ಣ ಜಾಗೃತಿ ಮೂಡಬೇಕಿದೆ. ಬೋಟುಗಳು ಮಾಲಿನ್ಯ ರಹಿತವಾಗಿ ಮೀನುಗಾರಿಕೆಗೆ ನಡೆಸಿದರೆ ದೊಡ್ಡ ಆತಂಕವನ್ನು ನಿವಾರಿಸಿದಂತಾಗುತ್ತದೆ. ಇನ್ನು ನವಮಂಗಳೂರು ಬಂದರಿಗೆ ಆಗಮಿಸುವ ಬೃಹತ್ ಗಾತ್ರದ ಹಡಗುಗಳು ಕೂಡ ಇದೇ ಮಾದರಿಯನ್ನು ಅನುಸರಿಸಬೇಕು.
ಅಪಾಯಕ್ಕೆ ಸಿಲುಕಿದ ಹಗಡುಗಳ ತೆರವು ಶೀಘ್ರವಾಗಲಿ
ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿ ನೀರಿನಲ್ಲಿ ಮುಳುಗುವ ದೋಣಿ, ಹಡಗು ತೆರವು ಮಾಡುವ ಕಾರ್ಯ ಕೂಡ ಆದಷ್ಟು ಬೇಗನೇ ಆಗಬೇಕು. ಯಾಕೆಂದರೆ, ಇತ್ತೀಚೆಗೆ ಕರಾವಳಿ ವ್ಯಾಪ್ತಿಯಲ್ಲಿ ನಡೆದ ಕೆಲವು ಹಡಗು ದುರಂತ ಘಟನೆಯಲ್ಲಿ ಮೊದಲಿಗೆ ಅದರಲ್ಲಿನ ತೈಲ ಸೋರಿಕೆಯಾಗಿ ನೀರಿಗೆ ಸೇರ್ಪಡೆಗೊಂಡ ಘಟನೆ ನಡೆದಿತ್ತು. ಇದೇ ನೀರು ಮೀನಿಗೆ ದೊರೆತು ಮತ್ತೆ ಅದು ಮನುಷ್ಯ ದೇಹ ಸೇರುವ ಅಪಾಯವೂ ಇದೆ. ಹೀಗಾಗಿ ಕಡಲಿನಲ್ಲಿ ಸ್ವಚ್ಛತೆ ಹಾಗೂ ಸಂರಕ್ಷಣೆ ಕುರಿತಾಗಿ ವಿಶೇಷ ಒತ್ತು ನೀಡಬೇಕಾದ ಆವಶ್ಯಕತೆ ಇದೆ.
ಸಮುದ್ರ ತೀರವೂ ಸ್ವಚ್ಛವಾಗಿರಲಿ
ಕರಾವಳಿಯ ಸಮುದ್ರ ತೀರಗಳು ಪ್ರವಾಸೋದ್ಯಮದ ಮುಖ್ಯ ತಾಣಗಳು. ಇಲ್ಲಿಗೆ ದೂರದೂರಿನಿಂದ ಜನರು ಆಗಮಿಸುತ್ತಾರೆ. ತಾಸುಗಟ್ಟಲೆ ಸಮುದ್ರ ತೀರದಲ್ಲಿ ಕಾಲ ಕಳೆಯುವ ಜನರು ತಿಂಡಿ – ತಿನಿಸು ತಿಂದು ಸಮುದ್ರ ದಡದಲ್ಲಿ ಹಾಕಿ ಹೋಗುವವರೂ ಇದ್ದಾರೆ. ಕೆಲವರಂತೂ ಇನ್ನೂ ಸ್ವಲ್ಪ ಮುಂದೆ ಹೋಗಿ ಸಮುದ್ರದ ನೀರಿಗೆ ಹಾಕುತ್ತಾರೆ. ಇಂತಹ ಚಟುವಟಿಕೆಗಳಿಗೆ ಮೊದಲು ಕಡಿವಾಣ ಬೀಳಬೇಕಿದೆ. ಬೀಚ್ ಗಳನ್ನು ಸ್ವಚ್ಛವಾಗಿಡುವ ಮೂಲಕ ಸಾಗರವನ್ನು ನಾವೇ ಸ್ವಚ್ಛವಾಗೊಡೋಣ.
‘ಪ್ಲಾಸ್ಟಿಕ್ ತ್ಯಾಜ್ಯ ತಡೆ, ಸುರಕ್ಷಿತ ಸಾಗರಕ್ಕೆ ಪ್ರೇರಣೆ’
‘ಪ್ಲಾಸ್ಟಿಕ್ ತ್ಯಾಜ್ಯ ತಡೆ ಹಾಗೂ ಸುರಕ್ಷಿತ ಸಾಗರಕ್ಕೆ ಪ್ರೇರಣೆ’ ಎನ್ನುವ ಘೋಷ ವಾಕ್ಯದೊಂದಿಗೆ ಈ ಬಾರಿ ಸಾಗರವನ್ನು ಪ್ಲಾಸ್ಟಿಕ್ ಮುಕ್ತವಾಗಿಸಿ ಸುಸ್ಥಿರ ಸಾಗರ ಸಂರಕ್ಷಣೆಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
2008ರಿಂದ ವಿಶ್ವ ಸಾಗರ ದಿನಾಚರಣೆ
ವಿಶ್ವ ಸಾಗರ ದಿನವನ್ನು ಮೊದಲಿಗೆ 1992ರಲ್ಲಿ ಅನ್ ಅಫೀಶಿಯಲ್ ಆಗಿ ಹಲವು ದೇಶಗಳಲ್ಲಿ ಎನ್.ಜಿ.ಒ. ಹಾಗೂ ಸಂಘ ಸಂಸ್ಥೆಗಳ ಮುಖಾಂತರ ಆಚರಿಸಲಾಯಿತು. ಅನಂತರ ವಿಶ್ವದಾದ್ಯಂತ ಸುಮಾರು 2,000 ಸಂಸ್ಥೆಗಳು ವಿಶ್ವ ಸಾಗರ ದಿನವನ್ನು ಪ್ರಚಾರ ಪಡಿಸುವ ಮೂಲಕ ವಿಶ್ವ ಸಂಸ್ಥೆಯ ಮನ್ನಣೆ ಪಡೆಯುವುದಕ್ಕೋಸ್ಕರ ಮೂರು ವರ್ಷಗಳ ಕಾಲ ಬೇಡಿಕೆ ಚಳುವಳಿಯ ರೀತಿಯಲ್ಲಿ ಈ ದಿನವನ್ನು ಆಚರಿಸಿದರು. ಇದರ ಫಲವಾಗಿ ವಿಶ್ವ ಸಂಸ್ಥೆ 2008ರಂದು ಇದಕ್ಕೆ ಅಂಗೀಕಾರವನ್ನಿಟ್ಟು ಜೂ. 8ರಂದು ವಿಶ್ವ ಸಾಗರ ದಿನವನ್ನಾಗಿ ಎಲ್ಲ ದೇಶಗಳಲ್ಲಿ ಆಚರಿಸುವ ಮೂಲಕ ಸಾಗರ ಸಂರಕ್ಷಣೆ ಕಾರ್ಯವನ್ನು ಮಾಡಲಾಗುತ್ತಿದೆ.
— ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
70 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ; ನಿರ್ವಹಣೆಯಿಲ್ಲದೆ ಸೊರಗಿದ ಮಲ್ಲಿಕಟ್ಟೆ ಪಾರ್ಕ್
ರಂಗ ಸಂಗಾತಿ 16ನೇ ವಾರ್ಷಿಕೋತ್ಸವ; ರಂಗಭಾಸ್ಕರ ಪ್ರಶಸ್ತಿಗೆ ನಟ ನವೀನ್ ಪಡೀಲ್ ಆಯ್ಕೆ
ಆಪತ್ಕಾಲಕ್ಕೆ ಆತಂಕ; “ರಕ್ತ’ ಅಭಾವ- ಬೇಡಿಕೆ ವಿಪರೀತ ಏರಿಕೆ!
Dakshina Kannada: ದ.ಕ. ಜಿಲ್ಲೆಗೆ ಮೂರೇ ತಿಂಗಳಲ್ಲಿ 1.23 ಕೋಟಿ ಪ್ರವಾಸಿಗರು !
Mangaluru University; ಲೋಕ ಸಮರದ ನೆಪ; ಘಟಿಕೋತ್ಸವ ಆಗದೆ ವಿ.ವಿ. ವಿದ್ಯಾರ್ಥಿಗಳು ಕಂಗಾಲು!
MUST WATCH
ಹೊಸ ಸೇರ್ಪಡೆ
Bengaluru: ಠಾಣೆಯಲ್ಲೇ ಮಹಿಳಾ ಪಿಎಸ್ಐಗೆ ಕಪಾಳಮೋಕ್ಷ, ಪೊಲೀಸರ ಮೇಲೆ ಹಲ್ಲೆ
Lok Sabha Polls: ದಾವಣಗೆರೆ ಮಾದರಿ ಕ್ಷೇತ್ರವನ್ನಾಗಿಸುವ ಕನಸಿದೆ: ಗಾಯತ್ರಿ ಸಿದ್ದೇಶ್ವರ
Tragedy: ಮೊಬೈಲ್ ಬೆಳಕಿನಲ್ಲಿ ಸಿಸೇರಿಯನ್ ಹೆರಿಗೆಗೆ ಮುಂದಾದ ವೈದ್ಯರು.. ತಾಯಿ, ಮಗು ಮೃತ್ಯು
Harassment: ಪಶ್ಚಿಮ ಬಂಗಾಳದ ರಾಜ್ಯಪಾಲರಿಂದ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ
Aranthodu: ಚಾಲಕನ ನಿಯಂತ್ರಣ ತಪ್ಪಿ ಹೋಟೆಲ್ ಗೆ ಢಿಕ್ಕಿ ಹೊಡೆದ ಕಾರು