ಅಂಗನವಾಡಿ ನೌಕರರ ಬೇಡಿಕೆ ಈಡೇರಿಸಲು ಒತ್ತಾಯ
Team Udayavani, Jan 1, 2020, 3:23 PM IST
ಗಜೇಂದ್ರಗಡ: ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕರ ಸಂವಿಧಾನಾತ್ಮಕ ಹೋರಾಟಗಳ ಮೇಲಿನ ನಿಷೇಧಾಜ್ಞೆ ಹಿಂಪಡೆಯಲು ಮತ್ತು ಅಂಗನವಾಡಿ ನೌಕರರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಶಾಲಾಪೂರ್ವ ಶಿಕ್ಷಣವನ್ನು ಅಂಗನವಾಡಿಗಳಿಗೆ ಉಳಿಸಲು ಹಾಗೂ ಇತರ ಬೇಡಿಕೆಗಳಿಗೆ ಒತ್ತಾಯಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದ ರಾಜ್ಯಾಧ್ಯಕ್ಷೆ ವರಲಕ್ಷ್ಮೀ ನೇತೃತ್ವದಲ್ಲಿ ಡಿ. 10ರಂದು ತುಮಕೂರಿನಿಂದ ಬೆಂಗಳೂರಿಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಸರ್ಕಾರ ಸಂವಿಧಾನ ಬದ್ಧವಾದ ಹೋರಾಟ ಹತ್ತಿಕ್ಕುವ ಉದ್ದೇಶದಿಂದ ಅಂಗನವಾಡಿ ಕಾರ್ಯಕರ್ತೆಯರು ಬೆಂಗಳೂರು ನಗರ ಪ್ರವೇಶಿಸದಂತೆ ನಿಷೇಧಾಜ್ಞೆ ಜಾರಿಗೊಳಿಸಿ ವ್ಯಕ್ತಿಗತವಾಗಿ ವರಲಕ್ಷ್ಮೀ ಮತ್ತು ಬಡ ತಾಯಂದಿರ ಮೇಲೆ ದೋಷಾರೋಪಣೆ ಹೊರಿಸಿದ್ದು ಪ್ರಜಾಪ್ರಭುತ್ವ ವಿರೋಧಿ ನಿಲುವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾನೂನಿನ ಬಲವಿಲ್ಲದೇ, ಸೇವಾ ನಿಯಮ, ಕೆಲಸದ ಭದ್ರತೆಯಿಲ್ಲದೇ ದಿನವಿಡೀ ದುಡಿದು ಸರ್ಕಾರದ ಎಲ್ಲ ಜನಪ್ರಿಯ ಯೋಜನೆಗಳನ್ನು ತಳಮಟ್ಟದಲ್ಲಿ ಜಾರಿಗೊಳಿಸುವ ಅಂಗನವಾಡಿ ಕಾರ್ಯಕರ್ತೆಯರ ಸಂವಿಧಾನದತ್ತವಾದ ಹಕ್ಕು ಕಸಿಯದೇ ರಕ್ಷಿಸಬೇಕಾದದ್ದು ಸರ್ಕಾರದ ಕರ್ತವ್ಯ. ಹೀಗಾಗಿ ಪ್ರಜಾತಂತ್ರ ವ್ಯವಸ್ಥೆಗೆ ಮತ್ತು ಎಲ್ಲ ವಿಭಾಗಗಳ ಜನ ಚಳವಳಿಗೆ ಅಪಮಾನಕರ ಆಗುವಂತಹ ಈ ಆದೇಶಗಳನ್ನು ಕೂಡಲೇ ವಾಪಸ್ಸು ಪಡೆಯಬೇಕು ಎಂದು ಒತ್ತಾಯಿಸಿದರು.
ಸಮುದಾಯದ ಜೀವನಾಡಿಗಳಾದ ಅಂಗನವಾಡಿ ರಕ್ಷಿಸಿ. 2019 ಮೇ 17ರ ಶಿಕ್ಷಣ ಇಲಾಖೆ ಸುತ್ತೋಲೆ ಹಿಂಪಡೆಯಿರಿ. ಉತ್ತಮ ಗುಣಮಟ್ಟದ ಉಚಿತ ಶಾಲಾಪೂರ್ವ ಶಿಕ್ಷಣವನ್ನು ಅಂಗನವಾಡಿಯಲ್ಲೇ ಪ್ರಾರಂಭಿಸಿ. ತಜ್ಞರ ಸಲಹೆಯ ಮೇರೆಗೆ ಸಮವಸ್ತ್ರ ಮತ್ತು ಪಠ್ಯದ ಕ್ರಮ ನಿಗದಿ ಮಾಡಬೇಕು. ಮಕ್ಕಳ ಮತ್ತು ತಾಯಂದಿರ ಆಹಾರ, ಆರೋಗ್ಯ, ಶಿಕ್ಷಣದ ಹಕ್ಕು ರಕ್ಷಿಸಬೇಕು. ಕೇಂದ್ರ ಸರ್ಕಾರದ ಹೊಸ ಶಿಕ್ಷಣ ನೀತಿಯ ಅವೈಜ್ಞಾನಿಕ ಅಂಶ ವಾಪಸ್ಸು ಪಡೆಯಬೇಕು. ಐಸಿಡಿಎಸ್ನಲ್ಲಿ ನೇರ ನಗದು ವರ್ಗಾವಣೆ ಹಿಂಪಡೆಯಬೇಕು. ನಿಷ್ಠ ಕೂಲಿ, ಸೇವಾಜೇಷ್ಟತೆ ಒದಗಿಸಿ ಮತ್ತು ಕೆಲಸದ ಖಾಯಂಮಾತಿ ಮಾಡಲು ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಕಚೇರಿ ಸಿಬ್ಬಂದಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಸಿಐಟಿಯು ಜಿಲ್ಲಾ ಮುಖಂಡ ಪೀರು ರಾಠೊಡ, ಸುವರ್ಣಾ ಇಂಡಿ, ಎಸ್. ಎಸ್. ಸಿಂಹಾಸನದ, ಆರ್.ಎಸ್. ಗದುಗಿನಮಠ, ಎನ್.ಕೆ. ಹಳಪ್ಪನವರ, ಎಂ.ಬಿ. ವಿಭೂತಿ, ಎಸ್.ಜಿ. ಬಟಕುರ್ಕಿ, ಎಂ.ಎನ್. ಹಡಪದ, ಎಂ.ಟಿ. ದಿವಾಣದ, ಎಸ್.ಎಫ್. ರಾಠೊಡ, ಎಸ್. ವಿ. ದೇಸಾಯಿ, ಎಸ್.ಬಿ. ಹಿರೇಮಠ, ಆರ್.ಎಫ್. ವಾಲಿ, ಎಸ್. ಎಸ್. ಗುರಿಕಾರ, ಡಿ.ಎಸ್. ಹಿರೇಮಠ, ಎಲ್.ಎಸ್. ಮಾರನಬಸರಿ, ವಿಜಯಲಕ್ಷ್ಮೀ ಪತ್ತಾರ, ವಿ.ಟಿ. ರಂಗ್ರೇಜಿ, ಎಲ್. ಎಸ್. ರಾಠೊಡ, ಎ.ಜಿ. ಹುಚ್ಚಯ್ಯನಮಠ, ಎಸ್.ಡಿ. ಸುಬೇದಾರ, ಎಸ್.ಬಿ. ಅಂಗಡಿ, ಎಸ್.ಎಲ್. ಕುಲಕರ್ಣಿ, ಎಸ್ .ವಿ. ಗುಡಗೇರಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Gadag; ನಮ್ಮದು ಬಡವರಿಗೆ ಬದುಕು ಕಟ್ಟಿ ಕೊಡುವ ಪ್ರಣಾಳಿಕೆ: ಬಸವರಾಜ ಬೊಮ್ಮಾಯಿ
Panchmasali ಸಮಾಜಕ್ಕೆ ಬಿಜೆಪಿಯಿಂದ ಅನ್ಯಾಯ: ವಚನಾನಂದ ಸ್ವಾಮೀಜಿ