ಸಿಎಎ, ಎನ್ಆರ್ಸಿ ವಿರುದ್ಧ ಜೆಡಿಎಸ್ ಬೃಹತ್ ಪ್ರತಿಭಟನೆ
Team Udayavani, Dec 29, 2019, 3:00 AM IST
ಹಾಸನ: ಪೌರತ್ವ ತಿದ್ದುಪಡಿ ಕಾನೂನು (ಸಿಎಎ)ವಾಪಸ್ ಪಡೆಯುವಂತೆ ಹಾಗೂ ಎನ್ಆರ್ಸಿ ಜಾರಿ ಮಾಡಬಾರದು ಎಂದು ಒತ್ತಾಯಿಸಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ನೇತೃತ್ವದಲ್ಲಿ ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಆವರಣದಕ್ಕೆ ಆಗಮಿಸಿ ಧರಣಿ ನಡೆಸಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಗಿರೀಶ್ ಅವರಿಗೆ ಮನವಿ ಸಲ್ಲಿಸಿದರು.
ಪೌರತ್ವ ತಿದ್ದುಪಡಿ ಕಾನೂನು ದೇಶಾದ್ಯಂತ ಜನರಲ್ಲಿ ಗೊಂದಲ, ಭೀತಿಯನ್ನುಂಟು ಮಾಡಿದೆ. ಈ ಕಾನೂನಿನಿಂದ ಈ ದೇಶದಲ್ಲಿ ಹುಟ್ಟಿ ಬೆಳೆದ ನಾಗರಿಕರು ಮತ್ತೂಮ್ಮೆ ನಾವು ಭಾರತದ ಪೌರರು ಎಂದ ಸಾಬೀತುಪಡಿಸುವ ಸನ್ನಿವೇಶ ಎದುರಾಗಿದೆ. ದೇಶದ ನಾಗರಿಕರಲ್ಲದವರನ್ನು ನಿರಾಶ್ರಿತರ ಶಿಬಿರಗಳಲ್ಲಿ ಬಂಧನದಲ್ಲಿರಿಸುವ ಹೇಳಿಕೆಗಳು ಆತಂಕವನ್ನುಂಟು ಮಾಡಿವೆ. ಆದ್ದರಿಂದ ತಿದ್ದುಪಡಿ ಕಾನೂನನ್ನು ವಾಪಸ್ ಪಡೆಯಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಭಯದ ವಾತಾವರಣ ಸೃಷ್ಟಿ: ಕೇಂದ್ರ ಸರ್ಕಾರದ ಈ ಮತೀಯ ಧೋರಣೆಯನ್ನು ಹತ್ತಿಕ್ಕುವ ಹುನ್ನಾರದಿಂದ ಬಹುತೇಕ ನಾಗರಿಕರಲ್ಲಿ ಭಯದ ವಾತಾವರಣ, ಶಂಕೆ, ಆತಂಕ, ಗೊಂದಲ ಮತ್ತು ಅಘಾತವನ್ನುಂಟು ಮಾಡಿದೆ. ಪೌರತ್ವ ಕಾನೂನು ತಿದ್ದುಪಡಿ ಮತ್ತು ಉದ್ದೇಶಿತ ಎನ್ಆರ್ಸಿಯಿಂದ ಜನರ ಮನದಲ್ಲಿ ಉಂಟಾಗಿರುವ ದುಗುಡ, ದುಮ್ಮಾನಗಳನ್ನು ನಿವಾರಿಸುವಲ್ಲಿ ಸಮಂಜಸವಾದ ಸಮಜಾಯಿಷಿಯಾಗಲೀ ಅಥವಾ ಹೇಳಿಕೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನೀಡಿಲ್ಲ.
ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಹಾಗೂ ರಾಜ್ಯಾದ್ಯಂತ ಪೌರತ್ವ ಕಾನೂನುಯ ತಿದ್ದುಪಡಿ ಮತ್ತು ಉದ್ದೇಶಿತ ಎನ್ಆರ್ಸಿ ವಿರುದ್ಧ ವ್ಯಾಪಕವಾಗಿ ಪ್ರತಿಭಟನೆಗಳು ನಡೆಯುತ್ತಿವೆ ಎಂದರು. ಪೊಲೀಸರ ಗೋಲಿಬಾರ್, ಲಾಠಿ ಚಾರ್ಜ್ ಮತ್ತು ದಬ್ಟಾಳಿಕೆಯಿಂದ ಪ್ರತಿಭಟನೆಗಳು ನಡೆಯುತ್ತಿದ್ದು, ಪ್ರತಿಭಟನೆಗಳು ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ ಎಂದು ಮನವಿಯಲ್ಲಿ ಎಚ್ಚರಿಸಿದರು.
ರಾಜ್ಯ ಜೆಡಿಎಸ್ ಅಧ್ಯಕ್ಷ ಎಚ್.ಕೆ. ಕುಮಾರಸ್ವಾಮಿ, ಶಾಸಕರಾದ ಕೆ.ಎಂ.ಶಿವಲಿಂಗೇಗೌಡ, ಸಿ.ಎನ್.ಬಾಲಕೃಷ್ಣ, ಕೆ.ಎಸ್.ಲಿಂಗೇಶ್, ಮಾಜಿ ಶಾಸಕ ಬಿ. ಕರೀಗೌಡ, ಹುಡಾ ಮಾಜಿ ಅಧ್ಯಕ್ಷ ಕೆ.ಎಂ.ರಾಜೇಗೌಡ, ನಗರಸಭೆ ಮಾಜಿ ಅಧ್ಯಕ್ಷರಾದ ಚನ್ನವೀರಪ್ಪ, ಸೈಯದ್ ಅಕºರ್, ಸಿ.ಆರ್. ಶಂಕರ್, ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್. ದ್ಯಾವೇಗೌಡ, ಎಪಿಎಂಸಿ ಅಧ್ಯಕ್ಷ ಮಂಜೇಗೌಡ, ಮುಖಂಡರಾದ ದೇವರಾಜೇಗೌಡ, ಬಿಳಿಚೌಡಯ್ಯ, ಮುಸ್ಲಿಂ ಮುಖಂಡರಾದ ಇರ್ಷಾದ್ ಪಾಪಾ ಅಮೀರ್ ಜಾನ್, ಸಮೀರ್ ಹಾಗೂ ಜಿಪಂ ಸದಸ್ಯರುಗಳು ಹಾಗೂ ನಗರಸಭೆ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಗೋಲಿಬಾರ್ನಲ್ಲಿ ಸಾವು : ಹಾಸನ ಜಿಲ್ಲೆಯಿಂದಲೂ ಪರಿಹಾರ
ಹಾಸನ: ಪೌರತ್ವ ತಿದ್ದುಪಡಿ ಕಾನೂನು ವಿರೋಧಿಸಿ ಮಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಪೊಲೀಸರು ನಡೆಸಿದ ಗೋಲಿಬಾರ್ಗೆ ಬಲಿಯಾದ ಇಬ್ಬರ ಕುಟುಂಬದವರಿಗೆ ಹಾಸನ ಜಿಲ್ಲೆಯಲ್ಲಿ ಚಂದಾ ಎತ್ತಿ ಪರಿಹಾರ ನೀಡಲಾಗುವುದು ಎಂದು ಜೆಡಿಎಸ್ ಮುಖಂಡ ಮಾಜಿ ಸಚಿವ ಎಚ್.ಡಿ.ರೇವಣ್ಣ ಘೋಷಿಸಿದರು.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪೌರತ್ವ ತಿದ್ದುಪಡಿ ಕಾನೂನು ವಾಪಸ್ ಪಡೆಯಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆದ ಪ್ರತಿಭಟನೆಯ ವೇಳೆ ಮಾತನಾಡಿದ ಅವರು, ಗೋಲಿಬಾರ್ನಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಘೋಷಿಸಿದ್ದ ತಲಾ 10 ಲಕ್ಷ ರೂ. ಪರಿಹಾರವನ್ನು ವಾಪಸ್ ಪಡೆದಿದೆ. ಸರ್ಕಾರ ಪರಿಹಾರ ಪರಿಹಾರ ನೀಡಲಾಗಷ್ಟು ದಿವಾಳಿಯಾಗಿದ್ದರೆ ನಾವೇ ಹಾಸನ ಜಿಲ್ಲೆಯಲ್ಲಿ ಜನರಿಂದ ಹಣ ಸಂಗ್ರಹಿಸಿ ಮೃತರ ಕುಟುಂಬಗಳಿಗೆ ಕನಿಷ್ಠ 5 ಲಕ್ಷ ರೂ. ನೀಡಲಾಗುವುದು ಎಂದು ಹೇಳಿದರು.
ಅಲ್ಪಸಂಖ್ಯಾತರಿಗೆ ತೊಂದರೆಯಾಗಲು ಬಿಡೋಲ್ಲ: ಈ ದೇಶದಲ್ಲಿ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರಗಳು ತೊಲಗದಿದ್ದರೆ ದೇಶ ಹಾಗೂ ರಾಜ್ಯ ಉದ್ಧಾರ ಆಗುವುದಿಲ್ಲ. ರಾಜ್ಯದಲ್ಲಿ ಅಲ್ಪಸಂಖ್ಯಾತರಿಗೆ ತೊಂದರೆ ಆಗಲು ದೇವೇಗೌಡರು ಮತ್ತು ಎಚ್.ಡಿ.ಕುಮಾರಸ್ವಾಮಿ ಅವರು ಬಿಡುವುದಿಲ್ಲ ಎಂದ ಅವರು, ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾನೂನನ್ನು ವಾಪಸ್ ಪಡೆಯಲೇಬೇಕು ಎಂದು ಒತ್ತಾಯಿಸಿದರು.
ಸಿಎಎ ವಿರುದ್ಧ ಜನಾಂದೋಲನ: ರಾಜ್ಯ ಜೆಡಿಎಸ್ ಅಧ್ಯಕ್ಷ, ಮಾಜಿ ಸಚಿವ ಎಚ್.ಕೆ.ಕುಮಾರಸ್ವಾಮಿ ಮಾತನಾಡಿ, ಅಯೋಧ್ಯೆರ ರಾಮಮಂದಿರ ವಿವಾದ ಇತ್ಯರ್ಥ ಹಾಗೂ ಜಮ್ಮು – ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸಿದಾಗ ಕೇಂದ್ರ ಸರ್ಕಾರದ ಕ್ರಮವನ್ನು ದೇಶದ ಜನರು ಸ್ವಾಗತಿಸಿದರು. ಆದರೆ ಸಿಎಎ ವಿರುದ್ಧ ಜನಾಂದೋಲನ ಆರಂಭವಾಗಿದೆ. ದೇಶದಲ್ಲಿ ಬಡತನ, ನಿರುದ್ಯೋಗ ತಾಂಡವವಾಡುತ್ತಿದೆ. ಜಿಡಿಪಿ ದಿನೇ ದಿನೇ ಕುಸಿಯುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಬಿಜೆಪಿ ಮುಕ್ತ ಭಾರತ ನಿರ್ಮಾಣವಾಗುವುದರಲ್ಲಿ ಅನುಮಾನವಿಲ್ಲ ಎಂದು ಬಿಜೆಪಿ ಮುಖಂಡ ಸುಬ್ರಹ್ಮಣ್ಯಸ್ವಾಮಿ ಅವರೇ ಹೇಳಿದ್ದಾರೆ. ಕೇಂದ್ರ ಸರ್ಕಾರ ಪ್ರತಿಷ್ಠೆ ಬಿಟ್ಟು ಕಾನೂನು ವಾಪಸ್ ಪಡೆಯಬೇಕು ಎಂದು ಆಗ್ರಹಪಡಿಸಿದರು.
ಜಾತ್ಯತೀತ ತತ್ವಕ್ಕೆ ಕೊಡಲಿ ಏಟು: ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿ ಮಾತನಾ, ಯಾವುದೇ ಕಾನೂನು ಜಾರಿಗೆ ತರುವ ಮೊದಲು ಜನಾಭಿಪ್ರಾಯ ಪಡೆದು ಜನ ಜಾಗೃತಿ ಮೂಡಿಸಬೇಕು.ಆದರೆ ಬಹುಮತ ಇದೆಯೆಂದು ಕೇಂದ್ರ ಸರ್ಕಾರ ದುರುದ್ದೇಶದಿಂದ ಸಿಎಎ ಜಾರಿಗೆ ತಂದು ದೇಶದ ಜಾತ್ಯತೀತ ತತ್ವಕ್ಕೆ ಕೊಡಲಿ ಏಟು ಕೊಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ.ಶಿವಲಿಂಗೇಗೌಡ, ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಸಿ.ಎನ್.ಬಾಲಕೃಷ್ಣ, ಬೇಲೂರು ಕ್ಷೇತ್ರದ ಶಾಸಕ ಕೆ.ಎಸ್.ಲಿಂಗೇಶ್, ಮುಸ್ಲಿಂ ಧರ್ಮಗುರುಗಳಾದ ಜುಬೇರ್, ನಾಸೀರ್, ಅನ್ವರ್ ಸಾಬ್, ಮಾಜಿ ಶಾಸಕ ಬಿ.ವಿ.ಕರೀಗೌಡ ಅವರು ಮಾತನಾಡಿದರು.