ಪರೋಪಕಾರಿ ಸೇವೆಯೊಂದೇ ಶಾಶ್ವತ: ಜಮಖಾನೆ
Team Udayavani, May 2, 2019, 3:41 PM IST
ರಾಣಿಬೆನ್ನೂರ: ‘ಪರೋಪಕಾರಂ ಇದಂ ಶರೀರಂ’ ಎಂಬಂತೆ ದೇಶ ಸೇವೆಯೇ ಈಶ ಸೇವೆಯಾಗಿದೆ, ಪರೋಪಕಾರಿಯ ಸಮಾಜ ಸೇವೆಯು ಶಾಶ್ವತವಾಗಿ ಉಳಿಯುತ್ತದೆ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಎಚ್.ಎ. ಜಮಖಾನೆ ಹೇಳಿದರು.
ಇಲ್ಲಿನ ಬಿಸಿಎಂ ಇಲಾಖೆಯಲ್ಲಿ ಏರ್ಪಡಿಸಿದ್ದ ನಿಲಯ ಮೇಲ್ವಿಚಾರಕ ಕೆಂಜೋಡೆಪ್ಪ ಭಜಂತ್ರಿ ಅವರ ಸೇವಾ ನಿವೃತ್ತಿಯ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಎಲ್ಲರೂ ಸಮಾಜಕ್ಕೆ ಒಳಿತಾಗುವ ಹಾಗೂ ಇತರರಿಗೆ ಮಾದರಿಯಾಗುವ ಉತ್ತಮ ಕೆಲಸ ಮಾಡಬೇಕು ಎಂದರು.
ದಿನನಿತ್ಯ ಕೋಟ್ಯಾಂತರ ಜನ ಹುಟ್ಟುತ್ತಾರೆ..ಲಕ್ಷಾಂತರ ಜನ ಸಾಯುತ್ತಾರೆ. ಈ ಮಧ್ಯೆ ಉತ್ತಮ ಜೀವನ ಮಾಡಿ, ದೇಶಕ್ಕೆ ಮಾದರಿ ಆದವರೂ ಇದ್ದಾರೆ, ದೇಶದ್ರೋಹಿ ಕೆಲಸ ಮಾಡಿದವರೂ ಇದ್ದಾರೆ. ಇದರಲ್ಲಿ ಆದರ್ಶರಾಗಿ ಬಾಳಿ ಬದುಕಿದವರ ಮಾರ್ಗದರ್ಶನದಲ್ಲಿಯೇ ಮುಂದುವರೆಯಬೇಕು ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ನಿಲಯ ಮೇಲ್ವಿಚಾರಕ ಕೆಂಜೊಡೆಪ್ಪ ಭಜಂತ್ರಿ, ನನ್ನ ಸುದೀರ್ಘ ಸೇವೆಯಲ್ಲಿ ಉತ್ತಮ ಕೆಲಸ ಮಾಡಿದ ತೃಪ್ತಿ ನನಗಿದೆ. ದೇವರವನ್ನು ಸ್ಮರಿಸಿ ಆತ್ಮಸಾಕ್ಷಿಯಾಗಿ ಕೆಲಸ ಮಾಡಿರುವೆ. ಜೀವನದಲ್ಲಿ ಅನೇಕ ಸಿಹಿ, ಕಹಿ ಘಟನೆಗಳನ್ನು ಅನುಭವಿಸಿದ್ದೇನೆ. ನನ್ನ ಸಹೋದ್ಯೋಗಿಗಳು ಸಹ ಉತ್ತಮ ಸೇವೆ ಸಲ್ಲಿಸುವ ಮೂಲಕ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಬೇಕು ಎಂದರು.
ಇದೇ ಸಂದರ್ಭದಲ್ಲಿ ಕೆಂಜೋಡೆಪ್ಪ ಭಜಂತ್ರಿ ದಂಪತಿಗೆ ವಿವಿಧ ಇಲಾಖೆ ಸಿಬ್ಬಂದಿ, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಇಲಾಖೆ ನಿಲಯ ಮೇಲ್ವಿಚಾರಕರು ಸನ್ಮಾನಿಸಿದರು.
ಕೆ.ಸಿ ಭಜಂತ್ರಿ, ಆರ್.ಎಂ.ಕನವಳ್ಳಿ, ಶಾಂತಪ್ಪ ಸಾವಕಾರ, ವೈ.ಐ. ಕೊರವರ, ರಾಜಶೇಖರ ಪಾರ್ವತೇರ, ಶಾಂತವ್ವ ಭಜಂತ್ರಿ, ಎಸ್.ಕೆ.ಹಾವನೂರ, ಎಚ್.ಎಚ್.ಓಲೇಕಾರ, ಗಿರೀಶ ಮೂಡಿಯವರ, ಶಶಿಭೂಷಣ ಕಡಕೋಳ, ಮಂಜುನಾಥ ಎಂ.ಕೆ., ಪ್ರಸಾದ ಆಲದಕಟ್ಟಿ, ಭೋಸ್ಲೆ ಸೇರಿದಂತೆ ಮತ್ತಿತರರು ಇದ್ದರು.