Politics: ಮುನಿಯಪ್ಪ ಬೆಂಬಲಿಗರಿಗೆ ಭವಿಷ್ಯದ ಆತಂಕ
Team Udayavani, Apr 12, 2024, 5:28 PM IST
ಕೋಲಾರ: ಲೋಕಸಭಾ ಟಿಕೆಟ್ ಘೋಷಣೆ ಸಂಬಂಧ ಜಿಲ್ಲಾ ಕಾಂಗ್ರೆಸ್ನಲ್ಲಿ ಇತ್ತೀಚಿಗೆ ನಡೆದ ಘಟನಾವಳಿಗಳು ಹಾಲಿ ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಬೆಂಬಲಿಗರಲ್ಲಿ ರಾಜಕೀಯ ಭವಿಷ್ಯ ಕುರಿತಂತೆ ಆತಂಕ ಮೂಡಿಸಿದೆ. ಕೆ.ಎಚ್.ಮುನಿಯಪ್ಪ ದೇವನಹಳ್ಳಿಯಲ್ಲಿ ತಮ್ಮ ರಾಜಕೀಯ ನೆಲೆಯನ್ನು ಹುಡುಕಿಕೊಂಡಿರುವುದ ರಿಂದ ಕೋಲಾರ ಜಿಲ್ಲೆಯಲ್ಲಿ ಅವರ ಬೆಂಬಲಿಗರು ಅತಂತ್ರರಾಗಿಬಿಟ್ಟಿದ್ದಾರೆ.
ಲೋಕಸಭಾ ಚುನಾವಣೆ ನೆಪದಲ್ಲಿ ಕೋಲಾರ ರಾಜಕಾರಣವನ್ನು ಪುನಃ ಪ್ರವೇಶಿಸಬೇಕೆಂಬ ಮುನಿಯಪ್ಪರ ಪ್ರಯತ್ನ ಶಾಸಕರ ರಾಜೀನಾಮೆ ನಾಟಕದಿಂದಾಗಿ ವಿಫಲಗೊಂಡಿದೆ. ಈ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ನೆಲೆ ಕಳೆದುಕೊಂಡಂತವರಾಗಿದ್ದಾರೆ.
ಕಾಂಗ್ರೆಸ್ ಗುಂಪುಗಳ ಸೃಷ್ಟಿ: ಕೋಲಾರ ಜಿಲ್ಲೆಯ ಜನತಾ ಪರಿವಾರದ ಮುಖಂಡರು ಕಾಂಗ್ರೆಸ್ ಸೇರ್ಪಡೆಯಾದ ನಂತರ ಉಂಟಾಗಿದ್ದ ಹಳೇ ಮತ್ತು ಹೊಸ ಕಾಂಗ್ರೆಸ್ ಗುಂಪುಗಳು ಅನೇಕ ರೂಪಾಂತಗಳನ್ನು ಪಡೆದುಕೊಂಡು ಈಗ ರಮೇಶ್ ಕುಮಾರ್ ಹಾಗೂ ಕೆ.ಎಚ್.ಮುನಿಯಪ್ಪ ಬಣಗಳಾಗಿ ಹಗ್ಗಜಗ್ಗಾಟಕ್ಕಿಳಿವೆ. ಲೋಕಸಭಾ ಕ್ಷೇತ್ರದಲ್ಲಿ ಸತತ 7 ಬಾರಿ ಗೆದ್ದು 2019ರಲ್ಲಿ 8ನೇ ಗೆಲುವಿಗೆ ಪ್ರಯತ್ನಿಸಿದ್ದ ಕೆ.ಎಚ್. ಮುನಿಯಪ್ಪರನ್ನು ಕೋಲಾರ ಜಿಲ್ಲಾ ಕಾಂಗ್ರೆಸ್ನಿಂದ ಹೊರ ಹಾಕಬೇಕು ಎಂಬ ಉದ್ದೇಶದಿಂದಲೇ ರಮೇಶ್ ಕುಮಾರ್ ಮತ್ತವರ ಗುಂಪು ಬಿಜೆಪಿಯ ಎಸ್. ಮುನಿಸ್ವಾಮಿ ಗೆಲುವಿಗೆ ಸಹಕರಿಸಿತ್ತು. ಸತತ ಗೆಲುವಿನ ನಂತರ ಸೋತು ಹೈರಾಣಾಗಿದ್ದ ಕೆ.ಎಚ್.ಮುನಿಯಪ್ಪ ಕೋಲಾರ ಜಿಲ್ಲೆ ರಾಜಕಾರಣ ದಿಂದ ದೂರವೇ ಉಳಿದಿದ್ದರು. ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ದೇವನಹಳ್ಳಿಯಿಂದ ಪಕ್ಷವು ಟಿಕೆಟ್ ನೀಡಿತ್ತು. ಅಲ್ಲಿ ಗೆಲುವನ್ನು ದಾಖಲಿಸಿದ ಕೆ.ಎಚ್.ಮುನಿಯಪ್ಪ ಹಾಲಿ ಆಹಾರ ಸಚಿವರಾಗಿ ಅಧಿಕಾರ ಚಲಾಯಿಸುತ್ತಿದ್ದಾರೆ.
ಕೋಲಾರ ರಾಜಕೀಯ ಪ್ರವೇಶ ವಿಫಲ: ಸಚಿವರಾದರೂ ಕೋಲಾರ ರಾಜಕೀಯವನ್ನು ಮತ್ತೇ ಪ್ರವೇಶಿಸಿ, ಜಿಲ್ಲೆಯನ್ನು ಕೈವಶ ಮಾಡಿಕೊಳ್ಳಬೇಕೆಂದು ಕೆ.ಎಚ್.ಮುನಿಯಪ್ಪರ ಪ್ರಯತ್ನ ನಡೆಸುತ್ತಲೇ ಇದ್ದರು. ಲೋಕಸಭಾ ಚುನಾವಣೆಯಲ್ಲಿ ಅಳಿಯ ಚಿಕ್ಕಪೆದ್ದನ್ನರಿಗೆ ಕೋಲಾರ ಟಿಕೆಟ್ ಕೊಡಿಸುವ ಮೂಲಕ ಮತ್ತೇ ಕೋಲಾರ ರಾಜಕಾರಣ ಪ್ರವೇಶಿಸಲು ಆಸಕ್ತರಾಗಿದ್ದರು. ಆದರೆ, ವಿರೋಧಿ ಬಣ ಇದನ್ನು ಶತಾಯಗತಾಯ ವಿರೋಧಿಸುವ ಮೂಲಕ ಕೆ.ಎಚ್. ಮುನಿಯಪ್ಪರ ಆಸೆಯನ್ನು ಭಗ್ನಗೊಳಿಸಿತ್ತು. ಸದ್ಯಕ್ಕೆ ಕೋಲಾರ ಕಾಂಗ್ರೆಸ್ನಲ್ಲಿ ಮೇಲುಗೈ ಸಾಧಿಸಿರುವ ರಮೇಶ್ಕುಮಾರ್ ಬಣವು ಭವಿಷ್ಯದಲ್ಲಿಯೂ ಕೆ.ಎಚ್.ಮುನಿಯಪ್ಪ ಮತ್ತವರ ಕುಟುಂಬದ ಸದಸ್ಯರು ಹೊಸದಾಗಿ ಜಿಲ್ಲೆ ರಾಜಕಾರಣ ಪ್ರವೇಶಿಸುವುದು ಕಷ್ಟದ ಸಂಗತಿಯಾಗಲಿದೆ. ಹಾಲಿ ಕೆ.ಜಿ.ಎಫ್ ಕ್ಷೇತ್ರದಲ್ಲಿ ಶಾಸಕಿಯಾಗಿರುವ ಕೆ.ಎಚ್. ಮುನಿಯಪ್ಪರ ಪುತ್ರಿ ರೂಪಕಲಾ ತಮ್ಮ ಕ್ಷೇತ್ರಕ್ಕೆ ತಾವು ಸೀಮಿತರಾಗಿದ್ದಾರೆ. ಜಿಲ್ಲೆಯ ರಾಜಕಾರಣದಲ್ಲಿ ಮೂಗು ತೂರಿಸುತ್ತಿಲ್ಲ.
ಕೆ.ಎಚ್.ಕೈಮೀರಿ ಗೌತಮ್ ಅಭ್ಯರ್ಥಿ: ಕೋಲಾರ ಜಿಲ್ಲಾ ಕಾಂಗ್ರೆಸ್ನಲ್ಲಿ ಹೈಕಮಾಂಡ್ನಂತ ವರ್ತಿಸುತ್ತಿದ್ದ ಕೆ.ಎಚ್.ಮುನಿಯಪ್ಪ ಬಹುತೇಕ ತಮ್ಮ ಬೆಂಬಲಿಗರಿಗೆ ಕಾಂಗ್ರೆಸ್ನ ಆಯಕಟ್ಟಿನ ಜಾಗಗಳ ಹುದ್ದೆಗಳ ಜವಾಬ್ದಾರಿ ಕೊಡಿಸಿದ್ದಾರೆ. ಕೋಲಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸೇರಿದಂತೆ ಬಹುತೇಕ ಬ್ಲಾಕ್ಗಳ ಮತ್ತು ಜಾತಿ ವಿಭಾಗಗಳ ಅಧ್ಯಕ್ಷರು ಕೆ.ಎಚ್.ಮುನಿಯಪ್ಪ ಬೆಂಬಲಿಗರೇ ಆಗಿದ್ದಾರೆ. ಕೆ.ಎಚ್.ಮುನಿಯಪ್ಪ ಲೋಕಸಭಾ ಚುನಾವಣೆಯ ಮೂಲಕ ಮತ್ತೇ ಕೋಲಾರ ರಾಜಕಾರಣದ ರಂಗಪ್ರವೇಶ ಮಾಡುತ್ತಾರೆ ಎಂಬ ಭಾವಿಸಿದ್ದ ಬೆಂಬಲಿಗರಿಗೆ ವಿರೋಧಿ ಬಣ ನಿರಾಸೆ ಮಾಡಿದೆ. ಕೆ.ಎಚ್.ಮುನಿಯಪ್ಪರ ಅಣತಿ ಇಲ್ಲದೆ ಅವರದೇ ಎಡಗೈ ಸಮುದಾಯದ ಕೆ.ವಿ.ಗೌತಮ್ ಅಭ್ಯರ್ಥಿಯಾಗಿಬಿಟ್ಟಿದ್ದಾರೆ. ಚುನಾವಣಾ ಪ್ರಚಾರ ಕಾರ್ಯಗಳಲ್ಲಿ ಕೆ.ಎಚ್.ಮುನಿಯಪ್ಪ ಮತ್ತವರ ಬೆಂಬಲಿಗರನ್ನು ದೂರ ಇಟ್ಟರೆ ನಾವು ಚುನಾವಣೆ ನಡೆಸುತ್ತೇವೆ ಎಂಬ ಅಲಿಖಿತ ಆದೇಶವನ್ನು ಅಭ್ಯರ್ಥಿ ಗೌತಮ್ ಪಾಲಿಸುವಂತೆ ಕೆ.ಎಚ್.ಮುನಿಯಪ್ಪ ವಿರೋಧಿ ಶಾಸಕರ ಬಣ ಸೂಚಿಸಿದೆ.
ಇಕ್ಕಟ್ಟಿನಲ್ಲಿ ಗೌತಮ್: ಕೋಲಾರ ಲೋಕಸಭಾ ಅಭ್ಯರ್ಥಿಯಾಗಿರುವ ಕೆ.ವಿ.ಗೌತಮ್ ಅತ್ತ ದರಿ ಇತ್ತ ಪುಲಿ ಎಂಬಂತ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಆದರೂ, ನಾಮಪತ್ರ ಸಲ್ಲಿಕೆಗೆ ಕೆ.ಎಚ್.ಮುನಿಯಪ್ಪರನ್ನು ಆಹ್ವಾನಿಸಿಕೊಂಡಿದ್ದರು. ಆನಂತರ ಪ್ರಜಾಧ್ವನಿ ಯಾತ್ರೆಗೆ ಗೈರಾದ್ದರು. ಈ ಕೊರತೆಯನ್ನು ತುಂಬಿಕೊಳ್ಳಲು ಮತ್ತೇ ಕೆ.ಎಚ್.ಮುನಿಯಪ್ಪರನ್ನು ಅವರ ಮನೆಯಲ್ಲಿ ಭೇಟಿಯಾಗಿದ್ದರು. ಇದು ಸಹಜವಾಗಿಯೇ ಕೆ.ಎಚ್.ಮುನಿಯಪ್ಪ ವಿರೋಧಿ ಗುಂಪಿಗೆ ಅಸಮಾಧಾನ ಮೂಡಿಸಿದೆ. ಬಿಡುವಿರದ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕಿದ್ದ ಗೌತಮ್ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ. ನಡೆಯುತ್ತಿರುವ ಪ್ರಚಾರ ಕಾರ್ಯಗಳಲ್ಲಿ ಕೆ.ಎಚ್.ಮುನಿಯಪ್ಪ ಬೆಂಬಲಿಗರಿಗೆ ಸ್ಥಾನವೇ ಸಿಗುತ್ತಿಲ್ಲ. ಪಕ್ಷದ ಕಾರ್ಯಕ್ರಮ ಎಂಬ ಕಾರಣಕ್ಕೆ ಸ್ವಯಂ ಪ್ರೇರಿತವಾಗಿ ಹೋಗಬೇಕಾಗಿದೆ. ಹೋದರು ಅಲ್ಲಿ ಮನ್ನಣೆ ಸಿಗುತ್ತಿಲ್ಲ. ಕೆಲವು ವಾರಗಳ ಹಿಂದಷ್ಟೇ ಕಾಂಗ್ರೆಸ್ ಭವನದಲ್ಲಿ ಕೆ.ಎಚ್.ಮುನಿಯಪ್ಪ ಬೆಂಬಲಿ ಎಂಬ ಕಾರಣಕ್ಕೆ ಪಕ್ಷದ ಜಿಲ್ಲಾ ಕಾರ್ಯಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್ ಮೇಲೆ ಹಲ್ಲೆ ನಡೆದಿತ್ತು. ಎರಡು ಗುಂಪಿನ ನಡುವೆ ತಳ್ಳಾಟ ನೂಕಾಟವಾಗಿ ಸುದ್ದಿಯಾಗಿತ್ತು.
ಅತಂತ್ರ ಬೆಂಬಲಿಗರು: ಕೆ.ಎಚ್.ಮುನಿಯಪ್ಪ ಕೋಲಾರ ರಾಜಕಾರಣ ಪ್ರವೇಶಿಸುವುದು ಸದ್ಯಕ್ಕೆ ದೂರದ ಮಾತಾಗಿದೆ. ಈ ಹಿನ್ನೆಲೆಯಲ್ಲಿ ಕೆ.ಎಚ್. ಮುನಿಯಪ್ಪ ಬೆಂಬಲಿಗರು ಭವಿಷ್ಯದಲ್ಲಿ ಪಕ್ಷದ ತಮ್ಮ ಹುದ್ದೆಗಳನ್ನು ಉಳಿಸಿಕೊಳ್ಳುವುದು ಕಷ್ಟದ ಕೆಲಸವೇ ಆಗಲಿದೆ. ಇದರದಿಂದ ಕೆ.ಎಚ್.ಮುನಿಯಪ್ಪ ಬಣದ ಕೆಲವು ಮುಖಂಡರು ಈಗಾಗಲೇ ಗೌತಮ್ ಪ್ರಚಾ ರದ ನೆಪದಲ್ಲಿ ಶಾಸಕರ ಗುಂಪಿನ ಸಖ್ಯ ಸಂಪಾದಿಸಿಕೊಳ್ಳುತ್ತಿದ್ದಾರೆ. ಎರಡು ಗುಂಪುಗಳನ್ನು ಸಮತೋಲನ ಮಾಡುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಕೆ.ಎಚ್. ಮುನಿಯಪ್ಪ ಬಣದಲ್ಲಿ ಗಟ್ಟಿಯಾಗಿ ಗುರುತಿಸಿಕೊಂಡಿರುವ ಹಾರ್ಡ್ ಕೋರ್ ಬೆಂಬಲಿಗರಿಗೆ ತಮ್ಮದೇ ಪಕ್ಷದಲ್ಲಿ ಉಸಿರುಗಟ್ಟಿಸುವಂತ ವಾತಾವರಣ ನಿರ್ಮಾಣವಾದಂತಾಗಿದೆ. ಪಕ್ಷದ ಜವಾಬ್ದಾರಿ ಹುದ್ದೆಗಳಲ್ಲಿದ್ದರೂ ಪ್ರಚಾರದ ಯಾವುದೇ ಜವಾಬ್ದಾರಿ ಹೊತ್ತುಕೊಳ್ಳದಂತ ಪರಿಸ್ಥಿತಿ ನಿರ್ಮಾಣವಾದಂತಾಗಿದೆ. ತಮ್ಮ ಕುಟುಂಬದವರಿಗೆ ಏನು ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿರುವ ಕೆ.ಎಚ್.ಮುನಿಯಪ್ಪ ಮೂವತ್ತೈದು ವರ್ಷಗಳಿಂದಲೂ ತಮ್ಮನ್ನೇ ನೆಚ್ಚಿಕೊಂಡಿರುವ ಬೆಂಬಲಿಗರ ಬೆಂಬಲಕ್ಕೆ ಬರಲಾಗದಂತಾಗಿದ್ದಾರೆ. ಇದು ಕೋಲಾರ ಜಿಲ್ಲೆಯ ಕೆ.ಎಚ್.ಮುನಿಯಪ್ಪ ಬೆಂಬಲಿಗರಲ್ಲಿ ರಾಜಕೀಯ ಭವಿಷ್ಯ ಕುರಿತಂತೆ ಆತಂಕ ಮನೆ ಮಾಡುವಂತಾಗಿದೆ. ಕೆಲವು ಮುಖಂಡರು ಪರ್ಯಾಯ ರಾಜಕೀಯ ಹಾದಿಯ ಕುರಿತು ಈಗಾಗಲೇ ಚಿಂತನ ಮಂಥನದಲ್ಲಿ ತೊಡಗಿರುವುದು ಕೋಲಾರ ಕಾಂಗ್ರೆಸ್ನ ಹೊಸ ರಾಜಕೀಯ ಬೆಳವಣಿಗೆಯಾಗಿದೆ.
ಒಗ್ಗೂಡಿಸಲು ಆಸಕ್ತಿ ತೋರದ ಕಾಂಗ್ರೆಸ್ ಹೈಕಮಾಂಡ್ : ಕೋಲಾರ ಜಿಲ್ಲಾ ಕಾಂಗ್ರೆಸ್ನ ಗುಂಪುಗಾರಿಕೆಯನ್ನು ಶಮನ ಮಾಡಲು ಹೈಕಮಾಂಡ್ ಆಸಕ್ತಿ ತೋರಿಸುತ್ತಿಲ್ಲ. ಕೋಲಾರದ ಎರಡೂ ಗುಂಪುಗಳಿಗೆ ರಾಜ್ಯದ ಇಬ್ಬರು ಪ್ರಮುಖರು ಪರೋಕ್ಷ ವಾಗಿ ಬೆನ್ನಿಗೆ ನಿಂತಿದ್ದಾರೆ. ಲೋಕ ಟಿಕೆಟ್ ಘೋಷಣೆ ಪ್ರಕರಣದಲ್ಲಿ ಇದು ಸ್ಪಷ್ಟವಾಗಿ ಬೆಳಕಿಗೆ ಬಂದಿತ್ತು. ಮುಂದಿನ ದಿನಗಳಲ್ಲಿಯೂ ಎರಡೂ ಗುಂಪುಗಳು ಒಗ್ಗೂಡಿ ಪಕ್ಷ ಕಟ್ಟುವಂತ ವಾತಾವರಣ ನಿರ್ಮಾಣ ವಾಗುವುದೇ ಇಲ್ಲ ಎನ್ನಲಾಗುತ್ತಿದೆ. ಇದರಿಂದ ಎರಡೂ ಗುಂಪಿನ ಮುಖಂಡರೇ ಪರಸ್ಪರ ಮುಖಾಮುಖೀಯಾಗಿ ಕುಳಿತು ತಮ್ಮ ಕಷ್ಟವನ್ನು ಬಗೆಹರಿಸಿಕೊಳ್ಳಬೇಕಿದೆ. ಆದರೆ, ಸದ್ಯಕ್ಕೆ ಕೋಲಾರ ಕಾಂಗ್ರೆಸ್ ನಲ್ಲಿ ಅಂತ ಪರಿಸ್ಥಿತಿ ಕಂಡು ಬರುತ್ತಿಲ್ಲ .
– ಕೆ.ಎಸ್.ಗಣೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bangarapet ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು
Kolar; ಮೋದಿ ಶನಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ
CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?
ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್ದು: ಕೃಷ್ಣಬೈರೇ ಗೌಡ
Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್