ಕೈಗಾರಿಕಾ ವಸಾಹತು ಪ್ರಗತಿಗೆ ಸಚಿವ ಶೆಟ್ಟರ ಜತೆ ಚರ್ಚೆ
Team Udayavani, May 28, 2020, 7:49 AM IST
ಕೊಪ್ಪಳ: ಸಚಿವ ಜಗದೀಶ್ ಶೆಟ್ಟರ್ ಅವರನ್ನು ಭೇಟಿಯಾಗಲು ಸಂಸದ ಸಂಗಣ್ಣ ಕರಡಿ ಧಾರವಾಡ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದರು.
ಕೊಪ್ಪಳ: ಜಿಲ್ಲೆಯ ಬಸಾಪುರ ಬಳಿ ಕೈಗಾರಿಕಾ ಅಭಿವೃದ್ಧಿ ಪ್ರದೇಶ ಸ್ಥಾಪನೆಗೆ ಮೀಸಲಿಟ್ಟಿರುವ 104 ಎಕರೆ ಪ್ರದೇಶದಲ್ಲಿ, ಉದ್ಯಮಗಳಿಗೆ ನಿವೇಶನಗಳ ಹಂಚಿಕೆ, ದರ ನಿಗದಿ ಮತ್ತಿತರ ವಿಷಯಗಳ ಕುರಿತು ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಅವರೊಂದಿಗೆ ಸಂಸದ ಸಂಗಣ್ಣ ಕರಡಿ ಚರ್ಚಿಸಿದರು.
ಧಾರವಾಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಸಚಿವರನ್ನು ಭೇಟಿಯಾದ ಸಂಸದರು, ಹಿಂದೆ ತಾವು ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದ ವೇಳೆ ಬಸಾಪುರದಲ್ಲಿ 104 ಎಕರೆ ಪ್ರದೇಶದಲ್ಲಿ ಕೈಗಾರಿಕಾ ವಸಾಹತು ಅಭಿವೃದ್ಧಿಗೆ ಭೂಮಿ ಮೀಸಲಿಡಲಾಗಿದೆ. ಅದನ್ನು ಸೂಕ್ತ ದರ ನಿಗದಿಗೊಳಿಸಿ ಕೈಗಾರಿಕೋದ್ಯಮಿಗಳಿಗೆ ಹಂಚಿಕೆ ಮಾಡಲು ಕ್ರಮ ಕೈಗೊಳ್ಳುವುದು, ಯಲಬುರ್ಗಾ ತಾಲೂಕಿನ ಹಿರೇಮನ್ನಾಪುರ ಬಳಿ ಬೊಂಬೆ, ಆಟಿಕೆ ಸಾಮಾಗ್ರಿ ತಯಾರಿಕೆ ಉದ್ಯಮ ಸ್ಥಾಪನೆ, ಕೈಗಾರಿಕಾ ಅಭಿವೃದ್ಧಿ ಪರಿಶೀಲನೆಗಾಗಿ ಸಚಿವರು ಜಿಲ್ಲೆಗೆ ಭೇಟಿ ನೀಡುವಂತೆ ಆಹ್ವಾನಿಸಿದರು. ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್, ಮಾಜಿ ಶಾಸಕರಾದ ದೊಡ್ಡನಗೌಡ ಪಾಟೀಲ, ಕೆ. ಶರಣಪ್ಪ ವಕೀಲರು, ವೀರಣ್ಣ ಗಾಣಿಗೇರ ಇದ್ದರು.