ಬಿಜೆಪಿಗೆ ಮತದಾರರ ಬೆಂಬಲ: ಕರಡಿ ವಿಶ್ವಾಸ
Team Udayavani, May 2, 2019, 4:29 PM IST
ಕೊಪ್ಪಳ: ಪ್ರಧಾನಿ ನರೇಂದ್ರ ಮೋದಿ ಐದು ವರ್ಷದಲ್ಲಿ ಜನಪರ ಆಡಳಿತ ನೀಡಿದ್ದು, ವಿಶ್ವವೇ ಅವರನ್ನು ಜನ ಮೆಚ್ಚಿದ ನಾಯಕ ಎಂದು ಬಣ್ಣಿಸಿದೆ. ಮತ್ತೂಮ್ಮೆ ಅವರು ಪ್ರಧಾನಿ ಹುದ್ದೆಯನ್ನೇರಲಿದ್ದು, ನಾನೂ ಕ್ಷೇತ್ರದ ಮತದಾರರ ಆಶೀರ್ವಾದದಿಂದ ಸಂಸದನಾಗಿ ಆಯ್ಕೆಯಾಗಲಿದ್ದೇನೆ ಎಂದು ಸಂಸದ ಸಂಗಣ್ಣ ಕರಡಿ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಶಿವಶಾಂತವೀರ ಮಂಗಲ ಭವನದಲ್ಲಿ ಬಿಜೆಪಿ ಜಿಲ್ಲಾ ಘಟಕದಿಂದ ಬುಧವಾರ ಆಯೋಜಿಸಿದ್ದ ಲೋಕಸಭೆ ಚುನಾವಣೆ ಅವಲೋಕನ ಸಭೆಯಲ್ಲಿ ಮಾತನಾಡಿದರು. ಕಳೆದ ಲೋಕಸಭೆ ಚುನಾವಣೆಯಲ್ಲಿ ನೀವೆಲ್ಲ ಭರವಸೆಯಿಟ್ಟು ನೀಡಿದ ಮತಕ್ಕೆ ಚ್ಯುತಿಯಾಗದಂತೆ ಮೋದಿ ಆಡಳಿತ ನಡೆಸಿದ್ದಾರೆ. ನಮ್ಮ ಕ್ಷೇತ್ರವೂ ಸಾಕಷ್ಟು ಅಭಿವೃದ್ಧಿಯಾಗಿದೆ. ಅದರಂತೆ ಈ ಬಾರಿಯೂ ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಮಗೆ ಸಾಕಷ್ಟು ಬೆಂಬಲ ವ್ಯಕ್ತವಾಗಿದೆ. ಎಲ್ಲ ಜಾತಿ, ಧರ್ಮದ ಯುವಕರು ಪಕ್ಷಭೆೇದ ಮರೆತು ಬಿಜೆಪಿ ಬೆಂಬಲಿಸಿದ್ದಾರೆ. ನಿಮ್ಮೆಲ್ಲರ ಆಶೀರ್ವಾದದಿಂದ ನಾನು ಗೆಲ್ಲಲಿದ್ದು, ಮೋದಿ ಮತ್ತೂಮ್ಮೆ ಪ್ರಧಾನಿಯಾಗಲಿದ್ದಾರೆ ಎಂದರು.
ಶಾಸಕ ಹಾಲಪ್ಪ ಆಚಾರ್ ಮಾತನಾಡಿ, ಮತದಾನ ಮುಗಿಸಿ ಫಲಿತಾಂಶಕ್ಕಾಗಿ ಕಾಯುತ್ತಿದ್ದೇವೆ. ನಮಗೆ ಅಧಿಕ ಮತ ಪಡೆಯುವ ಕ್ಷೇತ್ರಗಳ ಕುರಿತು ಅವಲೋಕನ ನಡೆಸಲು ಈ ಸಭೆ ಕರೆದಿದ್ದೇವೆ. ಕಳೆದ ಲೋಕಸಭಾ ಅವಧಿಯಲ್ಲಿ ಬಂದ ಫಲಿತಾಂಶವೇ ಈ ಬಾರಿಯೂ ಮರುಕಳಿಸಲಿದೆ. ಕಾಂಗ್ರೆಸ್ನವರು ಹಣ ಖರ್ಚು ಮಾಡಿ ಚುನಾವಣೆ ಎದುರಿಸಿರಬಹುದು. ನಾವು ಸಂಘಟನೆ ಮೂಲಕ ಕೆಲಸ ಮಾಡಿದ್ದೇವೆ. ಮೋದಿ ಅವರ ಜನಪರ ಆಡಳಿತವೇ ದೇಶದಲ್ಲಿ ಮತ್ತೂಮ್ಮೆ ಮೋದಿ ಪ್ರಧಾನಿಯಾಗಬೇಕೆಂಬ ಅಲೆಯೆದ್ದಿದೆ. ಮತ್ತೂಮ್ಮೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ ಮಾತನಾಡಿ, ಈ ಬಾರಿ ಲೋಕಸಭೆಯ ಚುನಾವಣೆಯಲ್ಲಿ ಪ್ರತಿಯೊಬ್ಬ ಕಾರ್ಯಕರ್ತರು ಶ್ರಮಿಸಿದ್ದಾರೆ. ದೇಶದ ಸ್ವಾಭಿಮಾನ, ಸಮಗ್ರ ಅಭಿವೃದ್ಧಿಗೆ ಮತ್ತೂಮ್ಮೆ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡಲು ಶ್ರಮಿಸಿದ್ದಾರೆ ಎಂದರು.
ಮೃತ್ಯುಂಜಯ ಜಿನಗಾ, ಕೆ. ಶರಣಪ್ಪ, ತಿಪ್ಪೆರುದ್ರಸ್ವಾಮಿ ಅವರು ಮಾತನಾಡಿದರು. ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ. ಚಂದ್ರಶೇಖರ್, ಮುಖಂಡರಾದ ಅಮರೇಶ ಕರಡಿ, ಎಚ್. ಗಿರಿಗೌಡ, ರಾಜು ಬಾಕಳೆ, ಚಂದ್ರು ಹಲಗೇರಿ, ಚಂದ್ರು ಕವಲೂರು, ಹೇಮಲತಾ ನಾಯಕ್, ವಾಣಶ್ರೀ ಮಠದ್, ಶೋಭಾ ನಗರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.