ರಾತ್ರಿ ದಿಢೀರನೇ 14 ಮಕ್ಕಳು ಅಸ್ವಸ್ಥ
Team Udayavani, Nov 19, 2021, 2:32 PM IST
ಎಚ್.ಡಿ.ಕೋಟೆ: ತಾಲೂಕಿನ ಮಹದೇಶ್ವರ ಕಾಲೋ ನಿಯ 14 ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದು, ಮಕ್ಕಳನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಕ್ಕಳು ನಿತ್ರಾಣಗೊಳ್ಳಲು ಸೇವಿಸಿದ ಆಹಾರ ಅಥವಾ ನೀರು ವಿಷಮಯವಾಗಿರಬೇಕೆಂಬ ಶಂಕೆ ಇದೆ.
ಶಾಲೆಯಲ್ಲಿ ಬುಧವಾರ ಮಧ್ಯಾಹ್ನ ಮಕ್ಕಳು ಸೇವಿಸಿದ ಆಹಾರವೇ ಕಾರಣ ಎಂದು ಪೋಷಕರು ದೂರಿದ್ದು, ವಿಷಯ ತಿಳಿಯುತ್ತಿದ್ದಂತೆಯೇ ತಾಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್ ತಂಡ ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿತು. ಬುಧವಾರ ರಾತ್ರಿಯಿಂದಲೂ ಜ್ವರ ವಾಂತಿಯಿಂದ ಮಕ್ಕಳು ಬಳಲುತ್ತಿದ್ದರೂ ಗುರುವಾರ ಮಧ್ಯಾಹ್ನದ ತನಕ ಮಕ್ಕಳಿಗೆ ಚಿಕಿತ್ಸೆ ಕೊಡಿಸಲು ಪೋಷಕರು ಮುಂದಾಗಲಿಲ್ಲ.
ಗ್ರಾಮದಲ್ಲಿಯೇ ಇರಿಸಿಕೊಂಡು ಕಾಲಹರಣ ಮಾಡುತ್ತಿದ್ದರು. ಗುರುವಾರ ವೈದ್ಯರ ತಂಡ ಗ್ರಾಮದ ಶಾಲೆಗೆ ತೆರಳಿ ಮಾಹಿತಿ ಪಡೆಯುತ್ತಿದ್ದ ವೇಳೆ ಶಾಲೆಯ ಮುಂದೆ ಜಮಾವಣೆಗೊಂಡ ಗ್ರಾಮಸ್ಥರು, ಮಕ್ಕಳ ಈ ಸ್ಥಿತಿಗೆ ಶಾಲೆಯಲ್ಲಿ ಸೇವಿಸಿದ ಅಹಾರವೇ ಕಾರಣ ಎಂದು ಶಿಕ್ಷಕರ ಜೊತೆ ಮಾತಿನ ವಾಗ್ಧಾಳಿಗಿಳಿದರು.
ಇದನ್ನೂ ಓದಿ;- ಮಹಿಳಾ ಸಮಾನತೆ, ಕನ್ನಡದ ಪ್ರಾಮಾಣಿಕ ಸೇವೆಗೆ ಅವಕಾಶ ನೀಡಿ: ಶಾರದಾ ಭಟ್
ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಡಾ.ರವಿಕುಮಾರ್, ಮಧ್ಯಾಹ್ನ ಸೇವಿಸಿದ ಆಹಾರ ರಾತ್ರಿ ದುಷ್ಪರಿಣಾಮ ಬೀರುವುದಿಲ್ಲ, ಆಹಾರ ಸೇವಿಸಿದ 3 ತಾಸಿನ ಒಳಗೆ ತೊಂದರೆಯಾಗಿದ್ದರೆ ಆಹಾರ ಇರಬಹುದೆಂದು ಅಂದಾಜಿಸಬಹುದಿತ್ತು. ಹೀಗಾಗಿ ಗ್ರಾಮಸ್ಥರು ವಿನಾ ಕಾರಣ ಶಿಕ್ಷಕರನ್ನು ಆರೋಪಿಸುವುದು ಬೇಡ ಎಂದು ಮನವೊಲಿಸಿದರು.
ಬಳಿಕ ಗ್ರಾಮದಲ್ಲಿನ ಕಲುಷಿತ ನೀರಿನ ಸೇವೆಯಿಂದಲೂ ಇಂತಹ ಅವಘಡ ಸಂಭವಿಸುವ ಸಾಧ್ಯತೆ ಇದೆ. ಹೀಗಾಗಿ ನೀರಿನ ಮಾದರಿ ಕಲೆಹಾಕಿ ಪರೀಕ್ಷೆಗೆ ಕಳುಹಿಸುವ ಭರವಸೆ ನೀಡಿದ್ದಾರೆ. ಅತ್ತ ನಿತಾ÷ಣಗೊಂಡಿದ್ದ 14 ಮಕ್ಕಳನ್ನು ತುರ್ತುವಾಹನದಲ್ಲಿ ಎಚ್.ಡಿ.ಕೋಟೆ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಪೈಕಿ ಒಂದೆರಡು ಮಕ್ಕಳು ತೀವ್ರ ನಿತ್ರಾಣಗೊಂಡಿದ್ದು, ಚಿಕಿತ್ಸೆಗೆ ಚೇತರಿಸಿಕೊಳ್ಳದೇ ಇದ್ದರೆ ಅವರನ್ನು ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಬೇಕಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ.
ಈ ಪೈಕಿ ಒಂದು ಮಗುವಿಗೆ ಮೂರ್ಚೆರೋಗವಿದ್ದು, ಆ ಮಗು ತೀವ್ರವಾಗಿ ನಿತ್ರಾಣಗೊಂಡಿದೆ. ಮಕ್ಕಳಿಗೆ ಯಾವುದೇ ಪ್ರಾಣಪಾಯ ಇಲ್ಲ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಮಕ್ಕಳನ್ನು ತುರ್ತು ವಾಹನದಲ್ಲಿ ಆಸ್ಪತ್ರೆಗೆ ಕರೆತರುತ್ತಿದ್ದಂತೆಯೇ ಪೋಷಕರು ತಮ್ಮ ತಮ್ಮ ಮಕ್ಕಳನ್ನು ತುರ್ತುವಾಹನದಿಂದ ಇಳಿಸಿಕೊಂಡು ಹೆಗಲ ಮೇಲೆ ಹೊತ್ತು ಆಸ್ಪತ್ರೆ ಒಳಗೆ ತರಾತುರಿಯಲ್ಲಿ ದೌಡಾಯಿಸುತ್ತಿದ್ದ ದೃಶ್ಯ ಮನ ಕಲಕುವಂತಿತ್ತು.