ಶಾಸಕರ ಕಚೇರಿ, ಮನೆ ಎದುರು ಧರಣಿಗೆ ನಿರ್ಧಾರ
Team Udayavani, Sep 13, 2020, 3:35 PM IST
ಸಾಂದರ್ಭಿಕ ಚಿತ್ರ
ಮೈಸೂರು: ರೈತ ವಿರೋಧಿ ಮತ್ತು ಕಾರ್ಮಿಕ ವಿರೋಧ ಕಾಯ್ದೆಯ ವಿರುದ್ಧ ಅಧಿವೇಶನದಲ್ಲಿ ಎಲ್ಲಾ ಶಾಸಕರು ಧ್ವನಿಎತ್ತಬೇಕು ಎಂದು ಆಗ್ರಹಿಸಿ ಸೆ.16 ರಂದು ಎಲ್ಲಾ ಶಾಸಕರ ಕಚೇರಿ ಮತ್ತುಮನೆ ಎದುರು ಪ್ರತಿಭಟಿಸುವುದಾಗಿ ರೈತ, ದಲಿತ ಮತ್ತು ಕಾರ್ಮಿಕ ಐಕ್ಯತಾ ಹೋರಾಟ ಸಮಿತಿ ಎಚ್ಚರಿಸಿದೆ.
ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಶನಿವಾರ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ರೈತ ಸಂಘದಅಧ್ಯಕ್ಷ ಬಡಗಲಪುರ ನಾಗೇಂದ್ರ, ಬೆಂಗಳೂರಿನಲ್ಲಿ ಸೆ. 21ರಿಂದ ಆರಂಭವಾಗುವ ಅಧಿವೇಶನದಲ್ಲಿ ರೈತ ವಿರೋಧಿ ಕಾಯ್ದೆಗಳಾದ ಭೂ ಸುಧಾರಣಾ ಕಾಯ್ದೆ,ಎಪಿಎಂಸಿ ತಿದ್ದುಪಡಿ ಕಾಯ್ದೆ, ಕಾರ್ಮಿಕ ವಿರೋಧಿ ಕಾನೂನಿನ ವಿರುದ್ಧ ಶಾಸಕರು ಧ್ವನಿ ಎತ್ತಬೇಕು. ಈ ನಿಟ್ಟಿನಲ್ಲಿ ಶಾಸಕರಗಮನ ಸೆಳೆಯಲು ತೀರ್ಮಾನಿಸಿ ಅವರ ಕಚೇರಿ ಮತ್ತು ಮನೆ ಎದುರು ಪ್ರತಿಭಟಿ ಸಲು ಉದ್ದೇಶಿಸಲಾಗಿದೆ ಎಂದರು.
ಸೆ.21ರಂದು ಬೆಂಗಳೂರಿನ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನೆ ಮತ್ತು ಚಳವಳಿ ಹಮ್ಮಿಕೊಳ್ಳಲಾಗಿದ್ದು, ಅಂದು ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲಾಗುವುದು. ಇದಕ್ಕೂ ಸರ್ಕಾರ ಬಗ್ಗದಿದ್ದಾಗ ಪ್ರತಿ ಜಿಲ್ಲಾ ಕೇಂದ್ರದಲ್ಲಿಯೂ ಪ್ರತಿಭಟನೆ ಹಮ್ಮಿಕೊಳ್ಳುವ ಜೊತೆಗೆ, ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವನದಲ್ಲಿಯೇ ಜನತಾ ಅಧಿವೇಶನ ನಡೆಸಲಾಗುವುದು. ಸರ್ಕಾರದ ಅಧಿವೇಶನಕ್ಕೆಪರ್ಯಾಯವಾಗಿ ಜನತಾ ಅಧಿವೇಶನ ನಡೆಯಲಿದೆ. ಇಲ್ಲಿ ಒಂದೊಂದು ದಿನ ಒಂದೊಂದು ಕಾಯ್ದೆ ಕುರಿತು ಚರ್ಚಿಸಲಾಗುವುದು. ನಾವು ಈಗಾಗಲೇಸರ್ಕಾರಕ್ಕೆ ಮನವಿ ಪತ್ರ ಮತ್ತು ಎಚ್ಚರಿಕೆ ಪತ್ರ ನೀಡಿ ಆಗಿದೆ. ಆದರೆ, ಈ ಬಗ್ಗೆ ಸರ್ಕಾರ ಯಾವುದೇ ರೀತಿಯಲ್ಲಿ ಸ್ಪಂದಿಸಿಲ್ಲ ಎಂದು ಕಿಡಿಕಾರಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ದಸಂಸ ಜಿಲ್ಲಾಸಂಚಾಲಕ ಆಲಗೂಡು ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.