ಕುದಿಯುತ್ತಿರುವ ಭೂಮಿಗೆ ಬಾಲಕ ಬಲಿ; ಆರ್ ಬಿಐ ತ್ಯಾಜ್ಯ ಕಾರಣ: HDK
Team Udayavani, Apr 17, 2017, 1:21 PM IST
ಮೈಸೂರು: ಇಲ್ಲಿನ ಶ್ಯಾದನಹಳ್ಳಿಯಲ್ಲಿ ಕುದಿಯುತ್ತಿರುವ ಭೂಮಿಗೆ ಬಿದ್ದು ಸಾವನ್ನಪ್ಪಿರುವ ಬಾಲಕ ಹರ್ಷಲ್ ಮೃತದೇಹ ಸ್ವಗ್ರಾಮಕ್ಕೆ ಸೋಮವಾರ ತಲುಪಿದೆ. ಏತನ್ಮಧ್ಯೆ ಬಾಲಕನ ಸಾವಿಗೆ ಆರ್ ಬಿಐ ಸುರಿದಿರುವ ರಾಸಾಯನಿಕ ತ್ಯಾಜ್ಯವೇ ಕಾರಣ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಗಂಭೀರವಾಗಿ ಆರೋಪಿಸಿದ್ದಾರೆ.
ಮೈಸೂರಿನ ಕೆಆರ್ ಆಸ್ಪತ್ರೆಯಲ್ಲಿ ಹರ್ಷಲ್ ಮರಣೋತ್ತರ ಪರೀಕ್ಷೆ ಮುಕ್ತಾಗೊಂಡಿದೆ. ಬಳಿಕ ಹರ್ಷಲ್ ಮೃತದೇಹವನ್ನು ಸ್ವಗ್ರಾಮ ಶ್ಯಾದನಹಳ್ಳಿಗೆ ಕೊಂಡೊಯ್ಯಲಾಗಿದೆ. ಅಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ವರದಿ ತಿಳಿಸಿದೆ.
ಅನಾಹುತಕ್ಕೆ ಆರ್ ಬಿಐ ತ್ಯಾಜ್ಯ ಕಾರಣ; ಕುಮಾರಸ್ವಾಮಿ ಆರೋಪ
ಮೈಸೂರಿನ ಶ್ಯಾದನಹಳ್ಳಿಯಲ್ಲಿ ಕುದಿಯುತ್ತಿರುವ ಭೂಮಿಗೆ ಬಿದ್ದು ಬಾಲಕ ಸಾವನ್ನಪ್ಪಿರುವ ಘಟನೆಗೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ಬಾಲಕ ಸಾವನ್ನಪ್ಪಿರುವ ಘಟನಾ ಸ್ಥಳದಿಂದ 300 ಮೀಟರ್ ದೂರದಲ್ಲಿ ಆರ್ ಬಿಐ ಕಚೇರಿ ಇದೆ. ಆರ್ ಬಿಐ ನೋಟು ಮುದ್ರಣಕ್ಕೆ ರಾಸಾಯನಿಕ ಬಳಸುತ್ತೆ. ಹೀಗೆ ಬಳಕೆ ಮಾಡಿದ ರಾಸಾಯನಿಕ ತ್ಯಾಜ್ಯದಿಂದಲೇ ಬೆಂಕಿ ಹೊತ್ತುಕೊಂಡಿದ್ದು, ಇದರಿಂದಾಗಿಯೇ ಬಾಲಕ ಸಾವನ್ನಪ್ಪಿರುವುದಾಗಿ ಆರೋಪಿಸಿದ್ದಾರೆ.
ಆರ್ ಬಿಐ ರಾಸಾಯನಿಕ ತ್ಯಾಜ್ಯದಿಂದಾಗಿಯೇ ಬಾಲಕ ಸಾವನ್ನಪ್ಪಿದ್ದಾನೆ. ಈ ಬಗ್ಗೆ ಮಾಹಿತಿ ಕೋರಿದ್ದೇನೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.