ನೇಗತ್ತೂರು; ಒಂದೆಡೆ ಹಸು ಬಲಿ,ಮತ್ತೊಂದೆಡೆ ಹುಲಿ ಹೆಜ್ಜೆ:ಆತಂಕದಲ್ಲಿ ಗ್ರಾಮಸ್ಥರು
Team Udayavani, Mar 9, 2024, 8:30 PM IST
ಹುಣಸೂರು: ತಾಲೂಕಿನ ನಾಗರಹೊಳೆ ಉದ್ಯಾನದಂಚಿನ ಗ್ರಾಮಗಳಲ್ಲಿ ಹುಲಿ ರಾಯನ ಉಪಟಳನಿಂದ ಕಾಡಂಚಿನ ಗ್ರಾಮಸ್ಥರು ಹಾಗೂ ರೈತರು ಭಯಭೀತರಾಗಿದ್ದು, ಅರಣ್ಯದಂಚಿನ ನೇಗತ್ತೂರು ಗ್ರಾಮದಲ್ಲಿ ಹುಲಿ ಕಾಣಿಸಿಕೊಂಡಿದ್ದು ಗ್ರಾಮಸ್ಥರು ಹಾಗೂ ರೈತರಲ್ಲಿ ಆತಂಕ ಉಂಟುಮಾಡಿದೆ.
ನೇಗತ್ತೂರು ಗ್ರಾಮದ ಮಹೇಶ ತಮ್ಮ ಜಮೀನಿನಲ್ಲಿ ಬೆಳೆದಿರುವ ಕಲ್ಲಂಗಡಿ ಬೆಳೆಗೆ ನೀರು ಹಾಯಿಸಲು ಶುಕ್ರವಾರ ರಾತ್ರಿ ೯ರ ವೇಳೆಯಲ್ಲಿ ತೆರಳುತ್ತಿದ್ದಾಗ ಅವರ ಜಮೀನಿನಲ್ಲಿಯೆ ಹುಲಿ ಓಡಾಡುತ್ತಿರುವುದನ್ನು ಕಂಡು ಭಯದಿಂದ ಮನೆಯತ್ತ ವಾಪಸ್ ಆಗಿ ಮನೆಯವರಿಗೆ ಮಾಹಿತಿ ನೀಡಿದ್ದಾರೆ.
ಇದಲ್ಲದೆ ಕಳೆದೆಡರು ದಿನಗಳ ಹಿಂದಷ್ಟೆ ನೇಗತ್ತೂರು ಗ್ರಾಮದ ಲೇ. ಲೊಕೇಶ್ ರವರ ಪತ್ನಿ ನಾಗಮ್ಮರಿಗೆಸೇರಿದ ಹಸುವೊಂದನ್ನು ಹಾಡು ಹಗಲೇ ಅವರ ತೋಟದ ಜಮೀನಲ್ಲಿ ಮೇವು ಮೇಯುತ್ತಿದ್ದ ವೇಳೆ ದಾಳಿ ನಡೆಸಿ ಕೊಂದು ಹಾಕಿದೆ.
ಈ ಘಟನೆಯಿಂದ ಗ್ರಾಮಸ್ಥರು ಭಯ ಭೀತರಾಗಿದ್ದು ರಾತ್ರಿ ವೇಳೆ ಜಮೀನುಗಳಿಗೆ ತೆರಳಲು ಹಿಂಜರಿಯುತ್ತಿದ್ದಾರೆ. ಕಳೆದೊಂದು ವರ್ಷದಿಂದಲೂ ಈ ಭಾಗದಲ್ಲಿ ಹುಲಿ ಕಾಟ ಹೆಚ್ಚಾಗಿದ್ದು, ಅರಣ್ಯ ಇಲಾಖೆ ಕೊಂಬಿಂಗ್ ಕಾರ್ಯಾಚರಣೆ ನಡೆಸಿ ಹುಲಿ ಸೆರೆ ಹಿಡಿಯಬೇಕೆಂದು ನೇಗತ್ತೂರು ಗ್ರಾಮದ ಪ್ರಗತಿಪರ ರೈತ ಪ್ರವೀಣ್ ಆಗ್ರಹಿಸಿದ್ದಾರೆ.
ವರ್ಷದಿಂದ ಕಾಡುತ್ತಿರುವ ಹುಲಿ
ವರ್ಷದಿಂದೀಚೆಗೆ ಹನಗೋಡು, ನೇಗತ್ತೂರು, ಅಬ್ಬೂರು, ಶಿಂಡೇನಹಳ್ಳಿ, ಬಿ.ಆರ್.ಕಾವಲ್ ಸುತ್ತಮುತ್ತಲ ಗ್ರಾಮಗಳಲ್ಲಿ ಆಗಾಗ್ಗೆ ಹುಲಿ ಕಾಣಿಸುವುದು, ಹೆಜ್ಜೆ ಪತ್ತೆಯಾಗುವುದು ಸರ್ವೆ ಸಾಮಾನ್ಯವಾಗಿದ್ದು, ಇತ್ತೀಚೆಗೆ ಹನಗೋಡಿನ ಗೌಡಿಕೆರೆಯಲ್ಲಿ ಕರೆಕಡೆಯಿಂದ ರಸ್ತೆ ದಾಟಿರುವ ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿಗಳೇ ಹೆಜ್ಜೆ ಗುರುತು ಪತ್ತೆ ಹಚ್ಚಿದ್ದರಾದರೂ ಹುಲಿ ಪತ್ತೆಗೆ ಯಾವುದೇ ಕ್ರಮವಾಗಿರಲಿಲ್ಲ. ಇದೀಗ ನೇಗತ್ತೂರಿನಲ್ಲಿ ಕಾಣಿಸಿಕೊಂಡು ಜನ-ಜಾನುವಾರುಗಳನ್ನು ಕಾಡುತ್ತಿರುವ ಹುಲಿಯನ್ನು ಸೆರೆ ಹಿಡಿಯಬೇಕೆಂದು ರೈತರು ಅರಣ್ಯಾಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.