ಬಿತ್ತನೆ ಶೇಂಗಾ ಬೆಲೆ ಹೆಚ್ಚಳಕ್ಕೆ ಆಕ್ರೋಶ
30 ಕೆಜಿ ಪ್ಯಾಕೆಟ್ಗೆ ಏಕಾಏಕಿ ದರ ಏರಿಕೆ ಮಾಡಿದ್ದಕ್ಕೆ ಕಿಡಿ •ರಸ್ತೆ ತಡೆ ನಡೆಸಿ ಅಸಮಾಧಾನ
Team Udayavani, Jul 3, 2019, 3:43 PM IST
ಪರಶುರಾಂಪುರ: ಬಿತ್ತನೆ ಶೇಂಗಾ ಬೀಜ ದರ ಹೆಚ್ಚಿಸಿದ್ದನ್ನು ವಿರೋಧಿಸಿ ರೈತರು ರೈತ ಸಂಪರ್ಕ ಕೇಂದ್ರದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಪರಶುರಾಂಪುರ: ಬಿತ್ತನೆ ಶೇಂಗಾ ಬೀಜದ ಮಾರಾಟ ದರ ಹೆಚ್ಚಳ ಮಾಡಲಾಗಿದೆ ಎಂದು ಆರೋಪಿಸಿ ಪರಶುರಾಂಪುರ ಹೋಬಳಿ ವ್ಯಾಪ್ತಿಯ ಗ್ರಾಮಗಳ ರೈತರು ಮಂಗಳವಾರ ಇಲ್ಲಿನ ರೈತ ಸಂಪರ್ಕ ಕೇಂದ್ರಕ್ಕೆ ಬೀಗ ಹಾಕಿ ಪಾವಗಡ-ಚಳ್ಳಕೆರೆ ಮುಖ್ಯ ರಸ್ತೆಯಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
ರೈತ ಸಂಪರ್ಕ ಕೇಂದ್ರದಲ್ಲಿ ಸರ್ಕಾರ ಸಣ್ಣ, ಅತಿ ಸಣ್ಣ ಹಾಗೂ ಐದು ಎಕರೆಯೊಳಗಿನ ರೈತರಿಗೆ ತಲಾ ಐದು ಪ್ಯಾಕೆಟ್ ಬಿತ್ತನೆ ಶೇಂಗಾ ಬೀಜ ವಿತರಣೆ ಮಾಡಲಾಗುತ್ತಿತ್ತು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಈ ಹಿಂದೆ 30 ಕೆಜಿಯ ಪ್ಯಾಕೆಟ್ ಒಂದಕ್ಕೆ 1380 ರೂ., ಸಾಮಾನ್ಯ ವರ್ಗದವರಿಗೆ 1590 ರೂ.ಗಳನ್ನು ಪಡೆಯಲಾಗುತ್ತಿತ್ತು. ಆದರೆ ಮಂಗಳವಾರ ದಿಢೀರನೇ ಹೊಸ ದರ ನಿಗದಿಪಡಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 30 ಕೆಜಿ ಪ್ಯಾಕೆಟ್ಗೆ 1680 ರೂ. ಹಾಗೂ ಇತರೆಯವರಿಗೆ 1890 ರೂ.ಗಳನ್ನು ನಿಗದಿಪಡಿಸಿ ಮಾರಾಟ ಮಾಡಲಾಗುತ್ತಿದೆ. ಇದರಿಂದ ಆಕ್ರೋಶಗೊಂಡ ರೈತರು ರೈತ ಸಂಪರ್ಕ ಕೇಂದ್ರಕ್ಕೆ ಬೀಗ ಜಡಿದರಲ್ಲದೆ ರಸ್ತೆ ತಡೆ ನಡೆಸಿದರು.
ದಿಢೀರನೆ 30 ಕೆಜಿ ಪ್ಯಾಕೆಟ್ಗೆ 300 ರೂ. ಗಳನ್ನು ಹೆಚ್ಚಿಸಿರುವುದು ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಆರೋಪಿಸಿದ ರೈತರು ವಾಹನಗಳನ್ನು ತಡೆಗಟ್ಟಿ ರಸ್ತೆ ತಡೆ ಮಾಡಿದರು. ಇದರಿಂದ ವಾಹನ ಸಂಚಾರಕ್ಕೆ ತೊಂದರೆಯುಂಟಾಯಿತು.
ಪ್ರತಿಭಟನಾ ಸ್ಥಳಕ್ಕೆ ಚಳ್ಳಕೆರೆ ತಹಶೀಲ್ದಾರ್ ಎಂ. ಮಲ್ಲಿಕಾರ್ಜುನ ಹಾಗೂ ಸಹಾಯಕ ಕೃಷಿ ನಿರ್ದೇಶಕ ಮಾರುತಿ ಭೇಟಿ ನೀಡಿ ಪ್ರತಿಭಟನಾನಿರತರೊಂದಿಗೆ ಚರ್ಚಿಸಿದರು. ಸರ್ಕಾರದ ನಿರ್ದೇಶನದನ್ವಯ ಹೊಸ ದರದಂತೆ ಬಿತ್ತನೆ ಶೇಂಗಾ ಬೀಜವನ್ನು ವಿತರಿಸಲಾಗುತ್ತಿದೆ. ರೈತರ ಮನವಿಯ ಹಿನ್ನೆಲೆಯಲ್ಲಿ ಕೂಡಲೇ ದರ ಕಡಿತಗೊಳಿಸುವ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ. ಇನ್ನೆರಡು ದಿನಗಳ ಕಾಲ ಬಿತ್ತನೆ ಶೇಂಗಾ ಬೀಜ ಮಾರಾಟವನ್ನು ಸ್ಥಗಿತಗೊಳಿಸುವಂತೆ ಕೃಷಿ ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ತಾಪಂ ಸದಸ್ಯ ಸಮರ್ಥರಾಯ, ಮುಖಂಡರಾದ ಚನ್ನಕೇಶವ, ಕೃಷಿ ಅಧಿಕಾರಿ ಗಿರೀಶ, ಪಿಎಸ್ಐ ಶಿವಕುಮಾರ, ರೈತರಾದ ಜಂಪಣ್ಣ, ಭಾಷಾ, ಕರಿಯಣ್ಣ, ಈರಣ್ಣ, ರಘು ಡಿ.ಎಚ್., ಅನಿಲ್ಕುಮಾರ್, ನಾಗರಾಜ್, ರೈತ ಸಂಘಟನೆಗಳ ಪದಾಧಿಕಾರಿಗಳು ಹಾಗೂ ನೋರಾರು ರೈತರು ಇದ್ದರು.