ನಾರಾಯಣಪುರ ಬಲದಂಡೆ ನಾಲೆಗೆ ನೀರು ಬಿಡಿ
ಬೆಂಗಳೂರಲ್ಲಿ ಕೆಬಿಜೆಎನ್ಎಲ್ ಎಂಡಿ ಜಯರಾಮ ಅವರಿಗೆ ಮಾಜಿ ಶಾಸಕ ವಜ್ಜಲ್ ಮನವಿ
Team Udayavani, Mar 18, 2020, 6:19 PM IST
ಲಿಂಗಸುಗೂರು: ಬೆಂಗಳೂರಿನಲ್ಲಿ ಕೆಬಿಜೆಎನ್ಎಲ್ ಎಂಡಿ ಜಯರಾಮ ಅವರನ್ನು ಭೇಟಿ ಮಾಡಿದ ಮಾಜಿ ಶಾಸಕ ಮಾನಪ್ಪ ವಜ್ಜಲ್ ಬೇಸಿಗೆ ಬೆಳೆಗೆ ನೀರು ಹರಿಸುವಂತೆ ಮನವಿ ಮಾಡಿದರು.
ಲಿಂಗಸುಗೂರು: ನಾರಾಯಣಪುರ ಬಲದಂಡೆ, ರಾಂಪುರ ಏತ ನೀರಾವರಿ ನಾಲೆಗಳಿಗೆ ಮಾರ್ಚ್ ಅಂತ್ಯದವರೆಗೆ ನೀರು ಹರಿಸುವಂತೆ ಮಾಜಿ ಶಾಸಕ ಮಾನಪ್ಪ ವಜ್ಜಲ್ ಮಂಗಳವಾರ ಬೆಂಗಳೂರಿನಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮ ವ್ಯವಸ್ಥಾಪಕ ನಿರ್ದೇಶಕ ಜಯರಾಮ ಅವರಿಗೆ ಮನವಿ ಮಾಡಿದರು.
ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಧರಿಸಿದಂತೆ ಮಾ.19, 20 ಹಾಗೂ 21 ಮೂರು ದಿನಗಳ ಕಾಲ ನೀರು ಹರಿಸಿದರೂ ರೈತರ ಬೆಳೆಗೆ ನೀರು ಸಿಗುವುದಿಲ್ಲ. ಇದರಿಂದ ಭತ್ತ ಸೇರಿದಂತೆ ಬೆಳೆಗಳ ರಕ್ಷಣೆ ಸಾಧ್ಯವಾಗುವುದಿಲ್ಲ. ನಾರಾಯಣಪುರ ಜಲಾಶಯದಲ್ಲಿ ಆರ್ಟಿಪಿಎಸ್, ಕುಡಿಯುವ ನೀರು, ಆವಿಯಾಗುವ ನೀರು ಕಳೆದು ಲೆಕ್ಕ ಹಾಕಿದರೆ ಜಲಾಶಯದಲ್ಲಿ ಇನ್ನೂ 9 ಟಿಎಂಸಿ ನೀರು ಉಳಿಯುತ್ತದೆ. ಬೇಸಿಗೆ ಹಂಗಾಮಿನಲ್ಲಿ ಬೆಳೆದ ಭತ್ತ ಸೇರಿದಂತೆ ಬೆಳೆಗಳಿಗೆ ನೀರು ಪೂರೈಸಬೇಕೆಂದು ಆಗ್ರಹಿಸಿದರು.
ಕೆಬಿಜೆಎನ್ಎಲ್ ವ್ಯವಸ್ಥಾಪಕ ನಿರ್ದೇಶಕರು ಬೇಡಿಕೆಗೆ ಸ್ಪಂದಿಸಿದ್ದು, ನೀರಿನ ಲಭ್ಯತೆ ಅನುಗುಣವಾಗಿ ನೀರಾವರಿ ಯೋಜನೆ ನಾಲೆಗಳಿಗೆ ನೀರು ಬಿಡುವುದಾಗಿ ಭರವಸೆ ನೀಡಿದ್ದಾರೆ ಎಂದು ಮಾಜಿ ಶಾಸಕ ಮಾನಪ್ಪ ವಜ್ಜಲ್ ತಿಳಿಸಿದ್ದಾರೆ.
ಸುರಪುರ ಶಾಸಕ ನರಸಿಂಹ ನಾಯಕ (ರಾಜುಗೌಡ), ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠರ ನೇತೃತ್ವದಲ್ಲಿ ಕೆಬಿಜೆಎನ್ ಎಲ್ ವ್ಯವಸ್ಥಾಪಕ ನಿರ್ದೇಶಕರನ್ನು ಭೇಟಿ ಮಾಡಲಾಯಿತು ಎಂದು ಮಾಜಿ ಶಾಸಕ ವಜ್ಜಲ್ ತಿಳಿಸಿದ್ದಾರೆ.