ವಿಕಾಸ ಸೌಹಾರ್ದ ಬ್ಯಾಂಕಿನಿಂದ ಉತ್ತಮ ಸೇವೆ
ಬೆಳಗ್ಗೆ 10 ರಿಂದ ರಾತ್ರಿ 8ರ ವರೆಗೂ ಗ್ರಾಹಕರಿಗೆ ನಗದು ವ್ಯವಹಾರ ಸೌಲಭ್ಯ
Team Udayavani, Apr 20, 2019, 5:19 PM IST
ಶೃಂಗೇರಿ: ಕೆರೆಮನೆಯಲ್ಲಿ ನಡೆದ ಹೊಸಪೇಟೆ ವಿಕಾಸ ಸೌಹಾರ್ದ ಸಹಕಾರಿ ಬ್ಯಾಂಕ್ನವಾರ್ಷಿಕ ಸಮಾಲೋಚನಾ ಸಭೆಯ ಸಮಾರೋಪ ಸಮಾರಂಭದಲ್ಲಿ ಬ್ಯಾಂಕ್ನ ಅಧ್ಯಕ್ಷ ವಿಶ್ವನಾಥ ಹಿರೇಮಠ್ ಮಾತನಾಡಿದರು.
ಶೃಂಗೇರಿ: ಸಮಕಾಲಿನ ಬ್ಯಾಂಕುಗಳಿಗಿಂತ ವಿಶೇಷವಾಗಿ ಸೇವೆ ಸಲ್ಲಿಸಲು ನಿರ್ಧರಿಸಿದ ಆಡಳಿತ ಮಂಡಳಿ ವರ್ಷದ 365 ದಿನವೂ ಬ್ಯಾಂಕಿಂಗ್ ಸೇವೆ ನೀಡುತ್ತಿದೆ ಎಂದು ಹೊಸಪೇಟೆ ವಿಕಾಸ ಸೌಹಾರ್ದ ಸಹಕಾರಿ ಬ್ಯಾಂಕ್ ಅಧ್ಯಕ್ಷ ವಿಶ್ವನಾಥ ಹಿರೇಮಠ್ ಹೇಳಿದರು.
ಮೆಣಸೆ ಗ್ರಾಪಂನ ಕೆರೆಮನೆ ದಿನೇಶ್ ಮನೆಯಲ್ಲಿ ಶುಕ್ರವಾರ ಮೂರು ದಿನದಿಂದ ನಡೆಯುತ್ತಿದ್ದ ಹೊಸಪೇಟೆ ವಿಕಾಸ ಸೌಹಾರ್ದ ಸಹಕಾರಿ ಬ್ಯಾಂಕ್ನ ವಾರ್ಷಿಕ ಸಮಾಲೋಚನಾ ಸಭೆಯ ಸಮಾರೋಪ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸ್ಪರ್ಧಾತ್ಮಕ ಪ್ರಪಂಚದಲ್ಲಿ ನಾವು ವಿಭಿನ್ನವಾಗಿ ಜನರಿಗೆ ಅಗತ್ಯವಿರುವ ಸೇವೆ ನೀಡುವ ಮೂಲಕ ಸಾರ್ವಜನಿಕರ ವಿಶ್ವಾಸ ಪಡೆದಿದ್ದೇವೆ. 22 ವರ್ಷದ ಇತಿಹಾಸ ಹೊಂದಿರುವ ಬ್ಯಾಂಕ್ ಶೇರುದಾರರಿಗೆ ಉತ್ತಮ ಸೇವೆ ನೀಡುತ್ತಿದೆ. ಬೆಳಗ್ಗೆ 10 ರಿಂದ ರಾತ್ರಿ 8 ರವರೆಗೂ ಗ್ರಾಹಕರಿಗೆ ನಗದು ವ್ಯವಹಾರದ ಸೇವೆ ನೀಡುತ್ತಿದೆ. ಶೇರುದಾರರಿಗೆ ಉತ್ತಮ ಡಿವಿಡೆಂಡ್ ನೀಡುತ್ತಿದೆ. ವಾಣಿಜ್ಯ ಬ್ಯಾಂಕಿನಲ್ಲಿರುವಂತೆ ಎಲ್ಲಾ
ಸೇವೆಯೂ ನಮ್ಮ ಬ್ಯಾಂಕಿನಲ್ಲಿ ದೊರೆಯುತ್ತಿದೆ. ನಾಲ್ಕು ಜಿಲ್ಲೆಯಲ್ಲಿ 7 ಶಾಖೆಯನ್ನು ಹೊಂದಿರುವ
ವಿಕಾಸ ಬ್ಯಾಂಕ್ ಬಳ್ಳಾರಿ ಜಿಲ್ಲೆಯಲ್ಲಿ ಹೊಸಪೇಟೆ,
ಬಳ್ಳಾರಿ, ಕೊಟ್ಟೂರು ಮತ್ತು ತೋರಣಗಲ್ಲು, ರಾಯಚೂರು ಜಿಲ್ಲೆಯ ಸಿಂಧನೂರು, ಕೊಪ್ಪಳ ಜಿಲ್ಲೆಯ ಗಂಗಾವತಿ, ಧಾರವಾಡ ಜಿಲ್ಲೆಯ ಹುಬ್ಬಳ್ಳಿಯಲ್ಲಿ ಶಾಖೆ ಹೊಂದಿದೆ. ವಾರ್ಷಿಕ
665 ಕೋಟಿ ರೂ.ವ್ಯವಹಾರ ನಡೆಸುತ್ತಿದ್ದು, 401
ಕೋಟಿ ರೂ. ಠೇವಣಿ ಇದೆ. ಕಳೆದ ಸಾಲಿನಲ್ಲಿ 8.85
ಕೋಟಿ ರೂ. ಲಾಭ ಗಳಿಸಿದ್ದು, ಶೇರುದಾರರಿಗೆ ಶೇ.20 ಡಿವಿಡೆಂಡ್ ನೀಡಲಾಗಿದೆ ಎಂದರು.
ಬ್ಯಾಂಕಿನ ನಿರ್ದೇಶಕ ಅಮೃತ ಜೋಷಿ ಮಾತನಾಡಿ, ಕಳೆದ ಆರು ವರ್ಷದಿಂದ ಬ್ಯಾಂಕಿನ ನಿರ್ದೇಶಕರು ಹಾಗೂ ಸಿಬ್ಬಂದಿಗಳ ಮುಂದಿನ ಆರ್ಥಿಕ ವರ್ಷದ ಕಾರ್ಯಸೂಚಿ ಸಭೆ ಮಾಡಲಾಗುತ್ತಿದೆ. ಈ ಸಭೆಯಲ್ಲಿ ಬ್ಯಾಂಕಿನ ಉನ್ನತಿಕರಣಕ್ಕಾಗಿ ಮಾಡಬೇಕಾದ ಕ್ರಮ, ಲೋಪ ದೋಷ ಮತ್ತಿತರ ಆಡಳಿತಾತ್ಮಕ ವಿಷಯಕ್ಕೆ ಸಂಬಂಧಿಸಿದಂತೆ ಸಮಗ್ರ ಚರ್ಚೆಯನ್ನು ಮುಕ್ತವಾಗಿ ನಡೆಸಲಾಗುತ್ತಿದೆ. ಇದು ಬ್ಯಾಂಕಿನ ಏಳಿಗೆಗೆ ತುಂಬಾ ಸಹಕಾರಿಯಾಗಿದೆ ಎಂದರು.
ನಿರ್ದೇಶಕ ರಾಜೇಶ್ ಹಿರೇಮಠ್ ಮಾತನಾಡಿ,
2022 ಕ್ಕೆ ಬ್ಯಾಂಕ್ ಬೆಳ್ಳಿ ಹಬ್ಬ ಆಚರಿಸುತ್ತಿದ್ದು,
ಇದರ ನೆನಪಿಗಾಗಿ ವೃದ್ಧಾಶ್ರಮವೊಂದನ್ನು ಆರಂಭಿಸಲು ಈಗಾಗಲೇ ಚಿಂತನೆ ನಡೆಸಿ ಒಂದು ಕೋಟಿ ರೂ.ಇದಕ್ಕಾಗಿ ಮೀಸಲು ಇಡಲಾಗಿದೆ. ವೃದ್ಧಾಶ್ರಮದ ಕಲ್ಪನೆಯೂ ವಿಭಿನ್ನವಾಗಿದೆ. ಇದರ ರೂಪುರೇಷೆಯನ್ನು ಸಿದ್ದಪಡಿಸಲಾಗುತ್ತಿದೆ ಎಂದರು.
ಸಭೆಯಲ್ಲಿ ಸಲಹೆಗಾರ ಬಿ.ಜೆ.ಕುಲಕರ್ಣಿ, ಬ್ಯಾಂಕಿನ ಸಿಬ್ಬಂದಿಗಳಾದ ಚಂದ್ರಾಹುಸೇನ್, ಪ್ರಸನ್ನ ಹಿರೇಮಠ್ , ಮಧುಶ್ರೀ, ಗವಿ ಸಿದ್ದಪ್ಪ, ಅಶ್ವಿನಿ ದೇಸಾಯಿ, ಪ್ರವೀಣ ಶಹಾಪುರ,ಚಿನ್ನಗೌಡ,
ನವ್ಯಶ್ರೀ ಮುಂತಾದವರು ಇದ್ದರು.