ಬಿಎಸ್ವೈ ಜನತೆಕಣ್ಣೊರೆಸುವ ಮುಖ್ಯಮಂತ್ರಿ: ಕಟೀಲ್
Team Udayavani, Oct 3, 2020, 3:05 PM IST
ಬರಗೂರು: ಜನತೆಯ ಕಣ್ಣೀರು ಒರೆಸುವ ನಮ್ಮ ಯಡಿಯೂರಪ್ಪರವರು ಮುಖ್ಯಮಂತ್ರಿಯಾಗಿ ಹೊರ ಹೊಮ್ಮಿರುವುದು ನಮ್ಮ ಸೌಭಾಗ್ಯವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಹೇಳಿದರು.
ಶಿರಾ ತಾಲೂಕು ಹುಲಿಕುಂಟೆ ಹೋಬಳಿಯ ಬರಗೂರಿನಲ್ಲಿ ನಡೆದ ಬರಗೂರು ಹಾಗೂ ನಾದೂರು ಮಹಾ ಶಕ್ತಿ ಕೇಂದ್ರಗಳ ಬೂತ್ ಸಮಿತಿಗಳ ಸಭೆ ಉದ್ಘಾಟಿಸಿ ಮಾತನಾಡಿದರು. ಕರ್ನಾಟಕದ ಕಲ್ಯಾಣದಲ್ಲಿ ಶಿರಾ ತಾಲೂಕಿನ ಕಲ್ಯಾಣದ ಚಿಂತನೆ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪರದ್ದಾಗಿದೆ. 2018ರಲ್ಲಿ ಜನರಿಗೆ ಸ್ಪಂದಿಸುವ, ರೈತರ ಪರವಾಗಿ ಹೋರಾಡುವ ಚಿಂತಕ ಯಡಿಯೂರಪ್ಪರಿಗೆ ಮತದಾರರು ಬಹುಮತ ಕೊಟ್ಟು 104 ಸ್ಥಾನಗಳನ್ನು ಗಳಿಸುವ ಮೂಲಕ ರಾಜ್ಯದ ಮುಖ್ಯ ಮಂತ್ರಿಯಾದರು.ಆಗ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದವರು ಯಾವುದೇ ಕಾರಣಕ್ಕೂ ಮುಖ್ಯ ಮಂತ್ರಿಯಾಗ ಬಾರದೆಂದುಅಪವಿತ್ರವಾದ ಒಳಒಪ್ಪಂದ ಮಾಡಿಕೊಂಡು ಅಧಿಕಾರ ನಡೆಸಿ ಒಂದೇ ವರ್ಷದಲ್ಲಿಅಧಿಕಾರ ಕಳೆದುಕೊಂಡರು ಎಂದು ವ್ಯಂಗ್ಯ ವಾಡಿದರು.
ಚಿತ್ರದುರ್ಗ ಸಂಸದ ಎ.ನಾರಾಯಣಸ್ವಾಮಿ ಮಾತನಾಡಿ, ಈ ಸಭೆಯಲ್ಲಿ ಭಾಗವಹಿಸಿರುವ ಅಪಾರ ಸಂಖ್ಯೆಯ ಜನರನ್ನು ಗಮನಿಸಿದರೆ ಇದು ಕಾರ್ಯಕರ್ತರ ಬೂತ್ ಮಟ್ಟದ ಸಭೆ ಎಂದು ಕಾಣುತ್ತಿಲ್ಲ. ಮುಂಬರುವ ಚುನಾವಣಾ ಪ್ರಚಾರ ಸಭೆಯಂತೆ ರಾರಾಜಿಸುತ್ತಿರುವುದು ಚುನಾವಣೆಯ ಗೆಲುವಿನ ಸಂಕೇತವಾಗಿದ್ದು ಇಲ್ಲಿನ ಕಾರ್ಯಕರ್ತರ ಪರಿಶ್ರಮ ಫಲಶೃತಿಗೊಳ್ಳುವುದರಲ್ಲಿ ಸಂಶಯವಿಲ್ಲ ಎಂದರು. ಕಾಂಗ್ರೆಸ್, ಜೆಡಿಎಸ್ ಪಕ್ಷ ತೊರೆದ ಹಲವು ಕಾರ್ಯಕರ್ತರು ರಾಜ್ಯಾಧ್ಯಕ್ಷ ನಳೀನ್ಕುಮಾರ್ ಕಟೀಲ್ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಮೈಸೂರು ಸಂಸದ ಪ್ರತಾಪ್ಸಿಂಹ, ಶಿರಾ ತಾಲೂಕು ಮುಖಂಡ ಎಸ್.ಆರ್.ಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ರಾಜ್ಯ ಉಪಾಧ್ಯಕ್ಷ ಎಂ.ಬಿ. ನಂದೀಶ್ ಇತರರು ಇದ್ದರು.