ನರಹಂತಕ ಚಿರತೆ ಹಾವಳಿಗೆ ಬೆಚ್ಚಿದ ಜನತೆ
Team Udayavani, Jan 14, 2020, 3:00 AM IST
ಜಿಲ್ಲೆಯಲ್ಲಿ ಮತ್ತೆ ಚಿರತೆ ಹಾವಳಿ ಮಿತಿಮೀರಿದ್ದು, ಮೂರು ತಿಂಗಳಲ್ಲಿ ಬಾಲಕ ಸೇರಿ ಮೂವರು ಬಲಿಯಾಗಿದ್ದಾರೆ. ಚಿರತೆ ಹಿಡಿಯಲು ಅರಣ್ಯಾಧಿಕಾರಿಗಳ ತಂಡ ಹಗಲು ರಾತ್ರಿ ಎನ್ನದೇ ಶ್ರಮಿಸುತ್ತಿದ್ದು, ಹುಲಿ ಸಂರಕ್ಷಣಾ ಘಟಕದ ಪಡೆ, ಅರಿವಳಿಕೆ ತಜ್ಞರು ಸೇರಿ 60ಕ್ಕೂ ಹೆಚ್ಚು ಸಿಬ್ಬಂದಿ ಚಿರತೆ ಸಂಚರಿಸುವ ಗ್ರಾಮಗಳ ಸುತ್ತ ಬೀಡು ಬಿಟ್ಟಿದ್ದರೂ ಚಿರತೆ ಅರಣ್ಯಾಧಿಕಾರಿಗಳ ಕಣ್ಣಿಗೆ ಬಿದ್ದಿಲ್ಲ…
ತುಮಕೂರು: ನಗರ ಸೇರಿ ಜಿಲ್ಲೆಯ ಕೆಲವೆಡೆ ಚಿರತೆ ಕಾಟ ತೀವ್ರವಾಗಿದೆ. ತುಮಕೂರು, ಗುಬ್ಬಿ, ಕುಣಿಗಲ್ ತಾಲೂಕುಗಳ ಗಡಿಭಾಗದಲ್ಲಿ ಚಿರತೆ ಕಾಟಕ್ಕೆ ಜನರು ಬೆಚ್ಚಿ ಬೀಳುವಂತಾಗಿದೆ. ಹೊಲ ತೋಟಕ್ಕೂ ಹೋಗದೆ ಜಾನುವಾರು ಮೇಯಿಸಲು ಹೋಗದ ಸ್ಥಿತಿ ಉಂಟಾಗಿದೆ. ಗ್ರಾಮಗಳಿಗೆ ಪ್ರವೇಶಿಸಿ ದನ, ಕರು, ನಾಯಿ, ಕುರಿ, ಕೋಳಿ ತಿಂದು ಹಸಿವು ನೀಗಿಸಿಕೊಳ್ಳುತ್ತಿದ್ದ ಚಿರತೆ ಕಳೆದ 3 ತಿಂಗಳಿನಿಂದ ಮೂವರ ಮೇಲೆ ದಾಳಿ ಮಾಡಿ ಭೀತಿ ಮೂಡಿಸಿದೆ.
ಮೂವರು ಬಲಿ: ತುಮಕೂರು ತಾಲೂಕಿನ ಬನ್ನಿಕುಪ್ಪೆಯಲ್ಲಿ 2019ರ ಅ.17ರಂದು ವೃದ್ಧೆ ಲಕ್ಷ್ಮಮ್ಮ, ನ.29ರಂದು ಕುಣಿಗಲ್ ತಾಲೂಕಿನ ದೊಡ್ಡಮಳಲವಾಡಿ ಗ್ರಾಮದ ಆನಂದಯ್ಯ, 2020ರ ಜ.9ರಂದು ಗುಬ್ಬಿ ತಾಲೂಕು ಸಿ.ಎಸ್.ಪುರ ಬಳಿಯ ಮಣಿಕುಪ್ಪೆ ಗ್ರಾಮದಲ್ಲಿ ಬಾಲಕ ಎಂ.ಎಸ್.ಸಮರ್ಥಗೌಡನ ಮೇಲೆ ನರಹಂತಕ ಚಿರತೆ ದಾಳಿ ಮಾಡಿ ಕೊಂದು ಹಾಕಿದೆ. ಚಿರತೆ ಸೆರೆ ಹಿಡಿಯಲು ಅರಣ್ಯ ಸಿಬ್ಬಂದಿ ಹಗಲು-ರಾತ್ರಿ ಎನ್ನದೇ ಕೊರೆಯುವ ಚಳಿಯಲ್ಲೂ ನಿರಂತರ ಕಾರ್ಯಾಚರಣೆ ಮಾಡುತ್ತಿದ್ದರೂ ಚಾಲಾಕಿ ಚಿರತೆ ಸಿ.ಸಿ ಟಿವಿ ಕ್ಯಾಮರಾ ಕಣ್ಣಿಗೆ ಬಿದ್ದರೂ ಸಿಬ್ಬಂದಿ ಕಣ್ಣಿಗೆ ಬೀಳುತ್ತಿಲ್ಲ. 11 ವರ್ಷದಿಂದ ವಿವಿಧ ಪ್ರಾಣಿಗಳ ದಾಳಿಯಿಂದ 21ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ.
ಚಾಲಕಿ ಚಿರತೆ: 40 ಡ್ರೋನ್ ಕ್ಯಾಮರಾ, 20 ಬೋನ್ ಇಟ್ಟು, ನಾಯಿ, ಕುರಿ, ಮೇಕೆ ಕಟ್ಟಿದ್ದರೂ ಚಿರತೆ ಬೋನಿಗೆ ಬೀಳದೆ ತಪ್ಪಿಸಿಕೊಳ್ಳುತಿತ್ತು. 25 ದಿನಗಳ ನಿರಂತರ ಕಾರ್ಯಾಚರಣೆ ನಂತರ ಅರಣ್ಯ ಅಧಿಕಾರಿಗಳ ಅರಣ್ಯ ಅಧಿಕಾರಿಗಳ ನಿದ್ದೆಗೆಡಿಸಿ ಜನರ ಭೀತಿಗೆ ಕಾರಣವಾಗಿರುವ ನರಹಂತಕ ಚಿರತೆ ಸೆರೆಹಿಡಿಯಬೇಕೆಂದು ಅರಣ್ಯ ಅಧಿಕಾರಿಗಳು ಕಳೆದ 4 ತಿಂಗಳಿನಿಂದಲೂ ನಿರಂತರ ಪ್ರಯತ್ನ ನಡೆಸುತ್ತಿದ್ದರೂ ಅಧಿಕಾರಿಗಳಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿದೆ. ಚಿರತೆ ಸಂಚರಿಸುವ ಗ್ರಾಮ ಗುರುತು ಮಾಡಿ ಬೋನ್ ಇಟ್ಟು ಸಿ.ಸಿ ಟಿವಿ, ಡ್ರೋನ್ ಕ್ಯಾಮರಾ ಅಳವಡಿಸಿದರೂ ಮೂವರ ಬಲಿ ಪಡೆದಿರುವ ಚಿರತೆ ಬೋನಿಗೆ ಬೀಳುತ್ತಿಲ್ಲ. ಚಾಲಾಕಿ ಚಿರತೆ ಬೋನ್ ಬಳಿ ಹೋದರೂ ಅದರೊಳಗಿರುವ ಪ್ರಾಣಿ ನೋಡಿದರೂ ಒಳಗೆ ಹೋಗುತ್ತಿಲ್ಲ ಎಂದು ಹೇಳುತ್ತಾರೆ ತುಮಕೂರು ವಲಯ ಅರಣ್ಯಾಧಿಕಾರಿ ನಟರಾಜ್.
ಕುಣಿಗಲ್ ತಾಲೂಕಿನ ಕೊತ್ತಗೆರೆ ಹೋಬಳಿಯ ಗಿಡದಪಾಳ್ಯದ ಸ್ವಾಮಿ ಎಂಬುವವರ ಮನೆ ಸಮೀಪ ಇಟ್ಟಿದ್ದ ಬೋನಿಗೆ ಮೇಕೆ ತಿನ್ನಲು ಬಂದ ಹೆಣ್ಣು ಚಿರತೆ ಬಿದ್ದಿತ್ತು. ಅರಿವಳಿಕೆ ನೀಡಲು ಆಗಮಿಸಿದ್ದ ತಜ್ಞ ಮುರುಳಿ ಇದೇ ನರಹಂತಕ ಚಿರತೆ ಎಂದು ಹೇಳಿದ್ದರು. ಇದರಿಂದ ಕಾರ್ಯಾಚರಣೆ ನಡೆಸಿದ್ದ ಅರಣ್ಯ ಅಧಿಕಾರಿಗಳು ಚಿರತೆ ಸಿಕ್ಕಿತ್ತಲ್ಲ ಎಂದು ಸಂತಸ ಪಟ್ಟಿದ್ದರು. ಆದರೆ ಜ.9ರಂದು ಗುಬ್ಬಿ ತಾಲೂಕು ಸಿ.ಎಸ್.ಪುರ ಬಳಿಯ ಮಣಿಕುಪ್ಪೆ ಗ್ರಾಮದಲ್ಲಿ ಬಾಲಕನ ಸಾವಿನ ಬಳಿಕ ಸೆರೆ ಸಿಕ್ಕ ಚಿರತೆ, ನರಹಂತಕ ಚಿರತೆ ಬೇರೆ ಬೇರೆ ಎಂಬುದು ದೃಢವಾಯಿತು.
ಜನರ ಒತ್ತಾಯ ತೀವ್ರ: ಜನರ ನಿದ್ದೆಗೆಡಿಸಿರುವ ನರಹಂತಕ ಚಿರತೆ ಸೆರೆಹಿಡಿಯಬೇಕು ಎಂದು ಜನರು ಅರಣ್ಯ ಅಧಿಕಾರಿಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ. ಹೆಬ್ಬೂರಿನಲ್ಲಿ ರೊಚ್ಚಿಗೆದ್ದ ಜನ ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿದ್ದಾರೆ. ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಚಿರತೆ ಹಿಡಿಯಲು 15 ದಿನಗಳ ಗಡುವು ನೀಡಿದ್ದರು.
ಹುಲಿ ಸಂರಕ್ಷಣಾ ಪಡೆ ಕಾರ್ಯಾಚರಣೆ: ನರಹಂರಕ ಚಿರತೆ ಸೆರೆಹಿಡಿಯಲು ಹುಲಿ ಸಂರಕ್ಷಣಾ ಪಡೆ ಬಂಡೀಪುರ, ನಾಗರಹೊಳೆಯಿಂದ ಬಂದಿದ್ದು ಚಿರತೆ ಬೆನ್ನತ್ತಿದೆ. ಜೊತೆಗೆ ಅರಿವಳಿಕೆ ತಜ್ಞರ ತಂಡ, ಅರಣ್ಯ ಸಿಬ್ಬಂದಿ ಸೇರಿ 60ಕ್ಕೂ ಹೆಚ್ಚು ಸಿಬ್ಬಂದಿ ಮಣಿಕುಪ್ಪೆ, ಹೆಬ್ಬೂರು, ಚಿಕ್ಕದಳವಾಯಿ, ಸಿ.ಎಸ್.ಪುರದಲ್ಲಿ ಕೊಂಬಿಂಗ್ ಕಾರ್ಯದಲ್ಲಿ ತೊಡಗಿದ್ದಾರೆ. ಚಿರತೆ ಗುರುತು ಕಂಡ ಕಡೆ ಹೋಗಿ ಸುತ್ತಲ ಪ್ರದೇಶ ಜಾಲಾಡುತ್ತಿದ್ದಾರೆ. ಗ್ರಾಮಗಳ ಸುತ್ತ ಲಾಂಟಾನಾ, ಪೊದೆ ಬೆಳೆದಿದ್ದು, ಖಾಲಿ ಜಮೀನುಗಳಲ್ಲಿ ಯಥೇತ್ಛವಾಗಿ ಬೆಳೆದಿರುವುದರಿಂದ ಚಿರತೆ ಹಿಡಿಯಲು ಬಂದಿರುವ ಸಿಬ್ಬಂದಿಗೆ ತಲೆ ನೋವಾಗಿ ಪರಿಣಮಿಸಿದೆ.
ಹೆಜ್ಜೆ ಗುರುತು: ತುಮಕೂರು ತಾಲೂಕಿನ ಹೆಬ್ಬೂರಿನ ಬಳಿ ಚಿರತೆಯ ಒಡಾಡಿರುವ ಹೆಜ್ಜೆ ಗುರುತು ಪತ್ತೆಯಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಎಚ್.ಸಿ.ಗಿರೀಶ್ ತಿಳಿಸಿದ್ದು, ಅರಣ್ಯ ಅಧಿಕಾರಿಗಳ ತಂಡ ಹೆಬ್ಬೂರು ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಚಿರತೆ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ನರಹಂತಕ ಚಿರತೆ ಸೆರೆ ಹಿಡಿಯಲು ಇಲಾಖೆಯಿಂದ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ. 60 ಜನರ ತಂಡ ಹಗಲು-ರಾತ್ರಿ ಎನ್ನದೇ ಕಾರ್ಯಾಚರಣೆ ನಡೆಸುತ್ತಿದೆ. ಜನರಿಂದ ಚಿರತೆ ಇರುವ ಬಗ್ಗೆ ಮಾಹಿತಿ ಬಂದರೆ ತಕ್ಷಣ ಅಲ್ಲಿಗೆ ಸಿಬ್ಬಂದಿ ಹೋಗಿ ಪರಿಶೀಲಿಸುತ್ತಿದ್ದಾರೆ. ಶೀಘ್ರ ಸೆರೆಹಿಡಿಯುವ ವಿಶ್ವಾಸವಿದೆ.
-ಎಚ್.ಸಿ.ಗಿರೀಶ್, ಉಪ ಅರಣ್ಯ ಸಂರಕ್ಷಣಾಧಿಕಾರಿ ತುಮಕೂರು
ಚಿರತೆ ಓಡಾಡಿರುವ ಗ್ರಾಮಗಳ ಖಾಲಿ ಜಮೀನುಗಳಲ್ಲಿ ಪೊದೆ ಬೆಳೆದು ನಿಂತಿದೆ. ಇದರಿಂದ ಚಿರತೆ ಇದ್ದರೂ ಕಣ್ಣಿಗೆ ಬೀಳುವುದಿಲ್ಲ. ಆಹಾರ ಸಿಗದೆ ಈಗ ಮನುಷ್ಯರ ಮೇಲೆ ದಾಳಿ ಮಾಡುತ್ತಿದೆ. ಜನ ಒಬ್ಬಂಟಿಯಾಗಿ ಮನೆ ಬಿಟ್ಟು ಬರಬೇಡಿ. ಚಿರತೆ ಹಿಡಿಯಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ.
-ನಟರಾಜ್, ತುಮಕೂರು ವಲಯ ಅರಣ್ಯಾಧಿಕಾರಿ
* ಚಿ.ನಿ. ಪುರುಷೋತ್ತಮ್