ರಾಗಿ ಬೆಳೆಗೆ ಸಮಗ್ರ ಪೋಷಕಾಂಶ ಬಳಸಿ
Team Udayavani, Sep 13, 2020, 4:49 PM IST
ತಿಪಟೂರು: ತಾಲೂಕಿನ ಪ್ರಮುಖ ಆಹಾರ ಬೆಳೆ ರಾಗಿಯನ್ನು ಪ್ರಸ್ತುತ 17,990 ಹೆಕ್ಟೆರ್ನಲ್ಲಿ ಬಿತ್ತಲಾಗಿದ್ದು, ರಸಗೊಬ್ಬರವನ್ನು ಕಡಿಮೆ ಮಾಡಿ ಸಾವಯವ ಗೊಬ್ಬರವನ್ನು ಬಳಸುವುದರಿಂದ ಅತಿಹೆಚ್ಚು ಇಳುವರಿಯನ್ನು ಪಡೆಯಬಹುದಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಡಾ. ಎನ್.ಕೆಂಗೇಗೌಡ ತಿಳಿಸಿದರು.
ತಾಲೂಕಿನ ಅರಳಗುಪ್ಪೆ ಗ್ರಾಮದ ರಾಗಿ ನಾಟಿ ತಾಕಿಗೆ ಭೇಟಿ ನೀಡಿ ರೈತರೊಂದಿಗೆ ತಾಂತ್ರಿಕಮಾಹಿತಿ ನೀಡಿದ ಅವರು, ಸಾರಜನಕ, ರಂಜಕ, ಪೊಟ್ಯಾಶ್ಗಳಲ್ಲಿ ಪೋಷಕಾಂಶಗಳಿದ್ದು, ಡಿಎಪಿ ಅಥವಾ ಎಂಒಪಿಯನ್ನು ಬಿತ್ತನೆ ಸಂದರ್ಭದಲ್ಲಿ ಬಳಸಿ ಉಳಿಕೆ ಅರ್ಧ ಭಾಗದ ಸಾರಜನಕವನ್ನು30-35 ದಿನಗಳ ನಂತರ 20 ಕೆ.ಜಿ ಯೂರಿಯಾ ರಸಗೊಬ್ಬರದ ಮೂಲಕ ಮೇಲು ಗೊಬ್ಬರವಾಗಿ ಕೊಡಬೇಕು. ಹೆಚ್ಚು ಯೂರಿಯಾ ರಸಗೊಬ್ಬರ ಬಳಕೆಯಿಂದ ಹುಲುಸಾಗಿ ಬೆಳೆದರೂ ರೋಗ ಕೀಟಗಳಿಗೆ ತುತ್ತಾಗುವ ಹಾಗೂ ಗಾಳಿಗೆ ಮಲಗಿ ಕಟಾವು ಕಷ್ಟಕರವಾಗಿ ಇಳುವರಿ ಕುಸಿಯುತ್ತದೆ. ಪ್ರತಿ ಎಕರೆಗೆ 5 ಕೆ.ಜಿ ಸತುವಿನ ಸಲ್ಪೇಟ್, 4 ಕೆ.ಜಿ ಬೋರಾನ್ ಲಘು ಪೋಷಕಾಂಶಗಳನ್ನು ಇಲಾಖೆಯಲ್ಲಿ ಸಹಾಯಧನದಡಿ ನೀಡಲಾಗುತ್ತಿದೆ. ಬಿತ್ತನೆಯಾದ 20ದಿನಗಳ ನಂತರ ಪ್ರತಿ 10 ದಿನಗಳಿಗೊಮ್ಮೆ ಅಂತರಬೇಸಾಯ ಕೈಗೊಳ್ಳಬೇಕು. ರಾಗಿ ಬೆಳೆಯಲ್ಲಿ ಅಕ್ಕಡಿ ಬೆಳೆಯಾಗಿ ತೊಗರಿ ಅಥವಾ ಅವರೆಬೆಳೆಗಳನ್ನು ಬೆಳೆಯುವುದರಿಂದ ರೈತರಆದಾಯ ಅಧಿಕವಾಗಲಿದೆ. ಹೆಸರು ಅಥವಾ ಅಲಸಂದೆ ಬೆಳೆದ ನಂತರ ರಾಗಿ ಬೆಳೆ ಬೆಳೆಯುವುದರಿಂದ ಮಣ್ಣಿನ ಫಲವತ್ತತೆ ಸುಧಾರಿಸಿ ಅಧಿಕ ರಾಗಿ ಇಳುವರಿ ಪಡೆಯಬಹುದು. ರಾಗಿ ಎಲೆ ಮೇಲೆ ಬೆಂಕಿರೋಗದ ಲಕ್ಷಣಗಳಾದ ಕಂದು ಬಣ್ಣದ ಕಣ್ಣಿನಾಕಾರದ ಚುಕ್ಕೆಗಳು ಹೆಚ್ಚು ಕಂಡುಬಂದಲ್ಲಿಕಾರ್ಬನ್ ಡೈಸಿಮ್ 1 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರಸಿ ಸಿಂಪಡಿಸಿ. ಬಿತ್ತನೆಯಾದ 40-45 ದಿನಗಳು ನಂತರ ಗರಿಗಳನ್ನು ಮೇಯಿಸುವುದರಿಂದ ಕವಲುಗಳು ಹೊಡೆದು ಇಳುವರಿ ಅಧಿಕವಾಗಲಿದೆ ಎಂದು ಹೇಳಿದರು.