ಕೊಳೆಗೇರಿ ಕುಟುಂಬಗಳಿಗೆ ಐನೂರು ಮನೆ ನಿರ್ಮಾಣ
Team Udayavani, Mar 18, 2018, 7:20 AM IST
ಉಡುಪಿ: ಕೊಳಗೇರಿ ಜನರಿಗೂ ಸೂರು ಕಲ್ಪಿಸುವ ಉದ್ದೇಶದಿಂದ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಉಡುಪಿ ನಗರದ ಕೊಳೆಗೇರಿಯಲ್ಲಿ 500 ಮನೆಗಳ ನಿರ್ಮಾಣಕ್ಕೆ ಫಲಾನುಭವಿಗಳನ್ನು ಗುರುತಿಸುವ ಕಾರ್ಯ ಮಾಡಲಾಗಿದೆ. ಕೊಳಗೇರಿ ಅಭಿವೃದ್ಧಿ ಮಂಡಳಿಯ “ಎಲ್ಲರಿಗೂ ಸೂರು’ ಯೋಜನೆ ಮೂಲಕ ಈ ಯೋಜನೆ ಜಾರಿಯಾಗಲಿದೆ.
ಯೋಜನೆ ಸ್ಥಳ ಎಲ್ಲಿ?
ಉಡುಪಿ ನಗರಸಭೆ ವ್ಯಾಪ್ತಿಯ ಘೋಷಿತ ನಾಲ್ಕು ಕೊಳಗೇರಿ ಸ್ಥಳಗಳನ್ನು ಗುರುತಿಸಲಾಗಿದ್ದು, ಅಲ್ಲಿ ಮನೆಗಳು ನಿರ್ಮಾಣವಾಗಲಿದೆ. 500 ಫಲಾನುಭವಿಗಳ ಪಟ್ಟಿಯನ್ನು ಶಿವಮೊಗ್ಗ ಉಪವಿಭಾಗದ ಕೊಳಗೇರಿ ಅಭಿವೃದ್ಧಿ ಮಂಡಳಿಯವರು ಸರ್ವೇ ಕಾರ್ಯ ನಡೆಸಿ ತಯಾರಿಸಿದ್ದಾರೆ.
ಕಾಮಗಾರಿ ಟೆಂಡರ್ ಮೂರ್ನಾಲ್ಕು ದಿನದ ಹಿಂದೆ ಆಗಿದ್ದು, ಇಲಾಖೆಯಿಂದ ವರ್ಕ್ ಆರ್ಡರ್ ಬಂದ ಕೂಡಲೇ ಮನೆ ನಿರ್ಮಾಣ ಕಾಮಗಾರಿಯು ಶುರುವಾಗಲಿದೆ. ಒಂದೂವರೆ ವರ್ಷದಲ್ಲಿ ಪೂರ್ಣ 18 ತಿಂಗಳೊಳಗೆ ಗುತ್ತಿಗೆದಾರರು ಮನೆ ನಿರ್ಮಿಸಿ ಕೊಡಬೇಕಿದೆ. ಮನೆಗಳ ನಿರ್ಮಾಣದ ಬಳಿಕ ನಗರಾಭಿವೃದ್ಧಿ ಅಥವಾ ಇತರ ಇಲಾಖೆ ಮೂಲಕ ಅನುದಾನ ಪಡೆದುಕೊಂಡು ಕುಡಿಯುವ ನೀರು, ರಸ್ತೆ, ಒಳಚರಂಡಿ ಮೊದಲಾದ ಮೂಲಸೌಕರ್ಯ ಕಲ್ಪಿಸುವ ಯೋಜನೆಯೂ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
28.6 ಕೋ.ರೂ. ಯೋಜನೆ
500 ಮನೆಗಳ ನಿರ್ಮಾಣಕ್ಕೆ ಒಟ್ಟು 28.6 ಕೋ.ರೂ. ಮೊತ್ತ ಮೀಸಲಿರಿಸಲಾಗಿದೆ. ಒಂದು ಮನೆಗೆ ತಲಾ 5,15,364 ರೂ. ವ್ಯಯವಾಗಲಿದೆ. ಸಾಮಾನ್ಯ ವರ್ಗದ ಫಲಾನುಭವಿಗಳು ಮನೆ ನಿರ್ಮಾಣ ಮೊತ್ತದ ಶೇ. 15ರಷ್ಟು ಅಂದರೆ 77,305 ರೂ. ಹಾಗೂ ಪರಿಶಿಷ್ಟ ಜಾತಿ/ಪಂಗಡದವರು 51,536 ರೂ. ಹಣವನ್ನು ಫಲಾನುಭವಿಗಳು ಕಡ್ಡಾಯವಾಗಿ ಡಿಡಿಯಲ್ಲಿ ಪಾವತಿ ಮಾಡಬೇಕು. ಕೇಂದ್ರ, ರಾಜ್ಯದ ಅನುದಾನಗಳನ್ನು ಹೊರತುಪಡಿಸಿ ಬ್ಯಾಂಕ್ ಸಾಲ ಮಾಡಬೇಕಾಗುತ್ತದೆ. ಅದನ್ನು ಫಲಾನುಭವಿಗಳೇ ಕಟ್ಟಬೇಕು.
ಎಲ್ಲೆಲ್ಲಿ ? ಎಷ್ಟೆಷ್ಟು ?
- ನ್ಯೂ ಕಾಲನಿ 158
- ಬಲರಾಮ ನಗರ 130
- ವಿಷ್ಣುಮೂರ್ತಿ ನಗರ 120
- ಕೊಡವೂರು ಪಾಳೆಕಟ್ಟೆ 92
ಮನೆಯಲ್ಲಿ ಏನೇನಿರುತ್ತೆ?
353 ಚ.ಅಡಿಯ ಆರ್ಸಿಸಿ ಮನೆ ನಿರ್ಮಾಣವಾಗಲಿದೆ. 1 ಹಾಲ್, 1 ಬೆಡ್ರೂಮ್, 1 ಬಾತ್ರೂಮ್, ಕಿಚನ್ ಹೊಂದಿರಲಿದೆ.
ಫಲಾನುಭವಿಗಳಿಗೆ ಮಾನದಂಡ
ಫಲಾನುಭವಿಗಳು ಕೊಳಗೇರಿ ನಿವಾಸಿಗಳೇ ಆಗಿರಬೇಕು. ಹಕ್ಕುಪತ್ರ ಇರಬೇಕು. ಬಿಪಿಎಲ್ ಕಾರ್ಡ್ ಹೊಂದಿರಬೇಕು. ತೆರಿಗೆ ಪಾವತಿ ಮಾಡುವವರಾಗಿರಬೇಕು. ಆಧಾರ್ ಕಾರ್ಡ್ ಇರಬೇಕು. ಇಷ್ಟು ದಾಖಲೆಗಳಿದ್ದರೆ ಅವರು ಫಲಾನುಭವಿಗಳಾಗಬಹುದು ಎಂದು ಕೊಳಗೇರಿ ಅಭಿವೃದ್ಧಿ ಮಂಡಳಿಯ ಉಡುಪಿ ವಿಭಾಗಾಧಿಕಾರಿ ಕೃಷ್ಣ ಅವರು ತಿಳಿಸಿದ್ದಾರೆ.
ಅನುದಾನ ಸಾಮಾನ್ಯ ವರ್ಗಕ್ಕೆ ಪ.ಜಾತಿ/ಪಂಗಡಕ್ಕೆ
ಕೇಂದ್ರ ಸರಕಾರ 1,50,000 ರೂ. 1,50,000 ರೂ.
ರಾಜ್ಯ ಸರಕಾರ 1,20,000 ರೂ. 1,80,000 ರೂ.
ಬ್ಯಾಂಕ್ ಸಾಲ 1,68,059 ರೂ. 1,33,828 ರೂ.
ಫಲಾನುಭವಿ ಕಟ್ಟಲು 77,305 ರೂ. 51,536 ರೂ.
ಒಟ್ಟು 5,15,364 ರೂ. 5,15,364 ರೂ.
– ಚೇತನ್ ಪಡುಬಿದ್ರಿ