ಮಲೇರಿಯಾ: ಶೀಘ್ರ ಪತ್ತೆ; ಸಂಪೂರ್ಣ ಚಿಕಿತ್ಸೆ
Team Udayavani, Jul 4, 2018, 2:35 AM IST
ಮಣಿಪಾಲ: ಸಾಂಕ್ರಾಮಿಕ ರೋಗಗಳಲ್ಲಿ ಒಂದಾದ ಮಲೇರಿಯಾ ಹಲವು ವರ್ಷಗಳ ಹಿಂದೆ ಮಾರಣಾಂತಿಕ ಕಾಯಿಲೆಯಾಗಿತ್ತು. ಆರೋಗ್ಯ ಇಲಾಖೆಯ ಕೆಲವೊಂದು ಪರಿಣಾಮಕಾರಿ ಕ್ರಮಗಳಿಂದಾಗಿ ಮಲೇರಿಯಾ ಪತ್ತೆಯಾದರೂ, ಕಳೆದೊಂದು ದಶಕದಿಂದ ಸಾವು ಸಂಭವಿಸಿಲ್ಲ. ಚಿಕಿತ್ಸೆಯ ಮೂಲಕ ಎಲ್ಲರೂ ಗುಣಮುಖರಾಗಿದ್ದಾರೆ. ಉಡುಪಿ ಜಿಲ್ಲೆಯ ಸ್ಥಳೀಯ ನಿವಾಸಿಗಳಲ್ಲಿ ಶೇ. 20ರ ಪ್ರಮಾಣದಲ್ಲಿ ಪತ್ತೆಯಾದರೆ, ಹೊರ ರಾಜ್ಯ, ಹೊರ ಜಿಲ್ಲೆಯಿಂದ ವಲಸೆ ಬಂದ ಕೂಲಿಕಾರ್ಮಿಕರಲ್ಲಿ ಮಲೇರಿಯಾ ಶೇ.80ರಷ್ಟು ಕಂಡುಬರುತ್ತಲಿದೆ. ಮಳೆಯಾಗುವ ಜೂನ್, ಜುಲೈ, ಆಗಸ್ಟ್ನಲ್ಲಿ ಮಲೇರಿಯಾ ಪ್ರಮಾಣ ಹೆಚ್ಚಿರುತ್ತದೆ. ಕಟ್ಟಡ ನಿರ್ಮಾಣ ಕಾರ್ಯದ ಪ್ರದೇಶದಲ್ಲಿ ನೀರು ನಿಲ್ಲುವ ಕಾರಣ ಆ ಭಾಗದಲ್ಲಿ ಮಲೇರಿಯಾ ಪ್ರಕರಣ ಹೆಚ್ಚುತ್ತಲಿದೆ. ಉಡುಪಿ ನಗರದಲ್ಲಿ 10 ಲಿಂಕ್ ಕಾರ್ಯಕರ್ತರನ್ನು ಸಜ್ಜುಗೊಳಿಸಿ ಎಲ್ಲ 35 ವಾರ್ಡ್ಗಳಲ್ಲೂ ಮನೆಮನೆಗಳಿಗೆ ಭೇಟಿ ಇತ್ತು ರಕ್ತ ಪರೀಕ್ಷೆ, ತುರ್ತು ಚಿಕಿತ್ಸೆ ನೀಡಿ ಮಲೇರಿಯಾ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಲೇರಿಯಾ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.
2020ರಲ್ಲಿ ಉಡುಪಿ – ಮಲೇರಿಯಾ ‘0’ ಗುರಿ
‘ಶೀಘ್ರ ಪತ್ತೆ, ಸಂಪೂರ್ಣ ಚಿಕಿತ್ಸೆ’ಯ ಮೂಲಕ ಮಲೇರಿಯಾ ವಿರುದ್ಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ರೋಗ ಪತ್ತೆಯಾದ ಕೂಡಲೇ ಚಿಕಿತ್ಸೆ ಪ್ರಾರಂಭಿಸಿ ಗುಣವಾಗುವವರೆಗೂ ಇಲಾಖೆ ನಿಗಾ ವಹಿಸುತ್ತದೆ. 2025ನೇ ಇಸವಿ ಒಳಗೆ ಭಾರತ ದೇಶದಲ್ಲಿ ಮಲೇರಿಯಾವನ್ನು (ವಾರ್ಷಿಕ ಪರೋಪಜೀವಿ ಅನುಪಾತ) ‘0’ ಗೆ ತರಲು ಉದ್ದೇಶಿಸಲಾಗಿದ್ದು, ಕರ್ನಾಟಕದಲ್ಲಿ 2022ಕ್ಕೆ. ಅದರಲ್ಲೂ ಉಡುಪಿ ಜಿಲ್ಲೆಯಲ್ಲಿ 2020ಕ್ಕೆ ಮಲೇರಿಯಾ ‘0’ಗೆ ತರಲು ಆರೋಗ್ಯ ಇಲಾಖೆ ಉದ್ದೇಶ ಇರಿಸಿಕೊಂಡಿದೆ. ಅದಕ್ಕಾಗಿ ವರ್ಷದಿಂದ ವರ್ಷಕ್ಕೆ ವಿಶೇಷ ಕಾರ್ಯಾಚರಣೆಗಳನ್ನು ಇಲಾಖೆ ನಡೆಸುತ್ತಿದೆ.
ಆರೋಗ್ಯ ಕೇಂದ್ರದ ಪಕ್ಕವೇ ಅಧಿಕ
ಉಡುಪಿಯ ಕೊಡವೂರು ಎ ಉಪಕೇಂದ್ರ ವ್ಯಾಪ್ತಿಯ ಮಲ್ಪೆ ಬಂದರು, ಕೊಳ, ಅಯ್ಯಪ್ಪನಗರ ಸುತ್ತಮುತ್ತ ಹೆಚ್ಚಿನ ಮಲೇರಿಯಾ ಪ್ರಕರಣ ಪತ್ತೆಯಾಗುತ್ತಿದೆ. ಉಡುಪಿ ನಗರದಲ್ಲಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಸುತ್ತಮುತ್ತವೇ ಅಧಿಕ ಮಲೇರಿಯಾ ಪ್ರಕರಣಗಳು ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ಹೇಳಿದೆ.
ಆಶಾ ಕಾರ್ಯಕರ್ತರಿಂದ ಸಮೀಕ್ಷೆ
ಮಲೇರಿಯಾ, ಡೆಂಗ್ಯೂ ರೋಗಗಳನ್ನು ಉಂಟು ಮಾಡಬಲ್ಲ ಸೊಳ್ಳೆಗಳ ಉತ್ಪತ್ತಿ ಪ್ರದೇಶ ಪತ್ತೆ ಹಚ್ಚಿ ನಾಶಪಡಿಸುವ ಕಾರ್ಯವಾಗಬೇಕು. ಈ ನಿಟ್ಟಿನಲ್ಲಿ ಆಶಾ ಮತ್ತು ಆರೋಗ್ಯ ಕಾರ್ಯಕರ್ತರು ಮನೆ, ಮನೆಗೆ ಭೇಟಿ ನೀಡಿ ಪರಿಸರವನ್ನು ಅವಲೋಕಿಸಿ ಅನಾಫಿಲಿಸ್, ಲಾರ್ವಾ ಸಮೀಕ್ಷೆ ಮಾಡಲಿದ್ದಾರೆ. ಡೆಂಗ್ಯೂ, ಮಲೇರಿಯಾ ನಿಯಂತ್ರಣಕ್ಕಾಗಿ ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.
2006ರಿಂದ ಈವರೆಗೆ ಮೃತಪಟ್ಟಿಲ್ಲ
ಮಲೇರಿಯಾದಲ್ಲಿ ಪ್ಲಾಸ್ಮೋಡಿಯಂ ವೈವ್ಯಾಕ್ಸ್ (ಪಿವಿ) ಮತ್ತು ಪ್ಲಾಸ್ಮೋಡಿಯಂ ಫಾಲ್ಸಿಫಾರಂ (ಪಿಎಫ್) ಎನ್ನುವ 2 ವಿಧ ಇದೆ. ವೈವಾಕ್ಸ್ ಪತ್ತೆಯಾದರೆ 14 ದಿನಗಳ ಚಿಕಿತ್ಸೆ ಮಾಡಲೇಬೇಕು. ಫಾಲ್ಸಿಫಾರಂ ಪತ್ತೆಯಾದರೆ 3 ದಿನದ ಚಿಕಿತ್ಸೆ ನೀಡಲಾಗುತ್ತದೆ. ಪಿಎಫ್ನಲ್ಲಿ ಜ್ವರ ಮಿದುಳಿಗೆ ಆವರಿಸುವ ಸಂಭವ ಇರುವ ಕಾರಣ ಸಾವು ಉಂಟಾಗುವ ಸಾಧ್ಯತೆ ಇರುತ್ತದೆ. ಮಲೇರಿಯಾ ನಿಯಂತ್ರಣಾ ವಿಭಾಗದವರು ಶೀಘ್ರ ಪತ್ತೆ, ಸಂಪೂರ್ಣ ಚಿಕಿತ್ಸೆಯ ನಿಗಾ ಇರಿಸುವ ಕಾರಣದಿಂದ ಇತ್ತೀಚಿನ ವರ್ಷಗಳಲ್ಲಿ ಮಲೇರಿಯಾ ರೋಗದಿಂದ ಸಾವಿನ ಪ್ರಕರಣ ವರದಿಯಾಗಿಲ್ಲ. ಅಂಕಿ-ಅಂಶಗಳ ಪ್ರಕಾರ 2006ರಿಂದ 2018ರ ವರೆಗೆ ಮಲೇರಿಯಾದಿಂದ ಮೃತಪಟ್ಟ ಉದಾಹರಣೆ ಇಲ್ಲ ಎಂದು ಮಲೇರಿಯಾ ನಿಯಂತ್ರಣಾಧಿಕಾರಿ ಹೇಳಿದ್ದಾರೆ.
ಪರಿಣಾಮಕಾರಿ ಅನುಷ್ಠಾನ ಅಗತ್ಯ
ಮಲೇರಿಯಾ ಹಬ್ಬುವ ಹೈರಿಸ್ಕ್ ಸ್ಥಳಗಳನ್ನು ಗುರುತಿಸಿ ಯೋಜನೆ ರೂಪಿಸಿಕೊಳ್ಳುತ್ತಿದ್ದೇವೆ. ಆ ಭಾಗದ ಕೆಲಸಗಾರರು, ಜನರ ರಕ್ತ ಪರೀಕ್ಷೆ ಮಾಡಿಸಲಾಗುತ್ತದೆ. ಪ್ಲಾಸ್ಮೋಡಿಯಂ ಜೀವಿಯೇ ಉತ್ಪತ್ತಿಯಾಗದಂತೆ ಸೊಳ್ಳೆ ಹೆಚ್ಚಿರುವ ಪ್ರದೇಶದಲ್ಲಿ ರಾಸಾಯನಿಕಯುಕ್ತ ಸ್ಪ್ರೇ ಬಳಸಲಾಗುತ್ತಿದೆ. ಸೊಳ್ಳೆ ಪರದೆ ವಿತರಿಸಲಾಗುತ್ತಿದೆ. ಕೊಳಚೆ ಪ್ರದೇಶದಲ್ಲಿ ಮೂಲಸೌಕರ್ಯ ಹೆಚ್ಚಬೇಕಿದೆ. ಕಟ್ಟಡ ನಿರ್ಮಾಣಕ್ಕೆ ಬರುವ ಎಲ್ಲ ಕಾರ್ಮಿಕರಿಗೂ ರಕ್ತ ಪರೀಕ್ಷೆ ಕಡ್ಡಾಯ ಮಾಡಬೇಕಿದೆ. ಎಲ್ಲವನ್ನೂ ಪರಿಣಾಮಕಾರಿಯಾಗಿ ಅನುಷ್ಟಾನಿಸಿದಲ್ಲಿ ಮಲೇರಿಯಾ ಸಂಪೂರ್ಣ ನಿಯಂತ್ರಣ ಸಾಧ್ಯವಿದೆ. ಕಳೆದ 12 ವರ್ಷಗಳಿಂದ ಮಲೇರಿಯಾದಿಂದ ಯಾವುದೇ ಸಾವು ಸಂಭವಿಸಿಲ್ಲ.
-ಡಾ| ಪ್ರೇಮಾನಂದ ಕೆ., ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ
— ಚೇತನ್ ಪಡುಬಿದ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್ ಹೊಂದಿರುವ ಕ್ಯಾನ್ಸರ್ ಚಿಕಿತ್ಸೆ ಕ್ರಮ
Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್
Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್ ಯಂತ್ರ ಕೊಡುಗೆ
Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್ ವಾಹನ ಅಪಘಾತ