ವಾಹನ ಚಾಲಕರಿಗೆ ಕಂಟಕ
Team Udayavani, Mar 27, 2018, 7:05 AM IST
ಬೆಳ್ಮಣ್: ವಾರದ ಹಿಂದೆ ಮಂಜರಪಲ್ಕೆ ಬೋಳ ಸಚ್ಚೇರಿಪೇಟೆಗೆ ಸಂಧಿಸುವ ರಸ್ತೆ ಕುದ್ರೋಟ್ಟು ಎಂಬಲ್ಲಿ ಕುಸಿತ ಕಂಡಿದ್ದು ಸಂಬಂಧ ಪಟ್ಟವರು ದುರಸ್ತಿ ಮಾಡದ ಕಾರಣ ವಾಹನ ಸವಾರರಿಗೆ ಕಂಟಕವಾಗಿ ಪರಿಣಮಿಸಿದೆ.
ಕಳೆದ ವಾರ ನೀರಿನ ಪೈಪ್ಒಡೆದು ಹೋದ ಪರಿಣಾಮ ಹಾಗೂ ಕಾಮಗಾರಿಯ ಕಳಪೆಯಿಂದಾಗಿ ರಸ್ತೆಯ ನಡು ಮಧ್ಯದಲ್ಲಿ ದಿಢೀರ್ ಕುಸಿತ ಉಂಟಾಗಿ ಆತಂಕ ಮೂಡಿತ್ತು. ಹಲವು ದಿನಗಳೆದರೂ ರಸ್ತೆಯನ್ನು ದುರಸ್ತಿ ಮಾಡದ ಕಾರಣ ಈ ಭಾಗದಲ್ಲಿ ವಾಹನ ಚಾಲಕರು ಅಪಾಯಕಾರಿಯಾಗಿ ಸಂಚರಿಸಬೇಕಾದ ಪ್ರಮೇಯ ಒದಗಿ ಬಂದಿದೆ. ರಾತ್ರಿ ಸಮಯದಲ್ಲಿ ರಸ್ತೆ ಕುಸಿತದ ಅರಿವಿರದ ಬೈಕ್ ಸವಾರನೋರ್ವ ಬಿದ್ದು ಗಂಭೀರ ಗಾಯಗೊಂಡ ಘಟನೆ ಕೂಡ ನಡೆದಿದೆ.
ಈ ರಸ್ತೆಯಲ್ಲಿ ದಿನಂಪ್ರತಿ ನೂರಾರೂ ವಾಹನಗಳು ಸಂಚಾರ ಮಾಡುತ್ತಿದ್ದು, ರಾತ್ರಿ ಹೊತ್ತು ಈ ದಿಬ್ಬ ಭಾರಿ ಅಪಾಯ ತಂದೊಡ್ಡುತ್ತಿದ್ದು, ದುರಸ್ತಿಯ ವಿಳಂಬ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಸಂಬಂಧ ಪಟ್ಟವರು ಈ ಜಾಗದಲ್ಲಿ ಯಾವುದೇ ಎಚ್ಚರಿಕೆಯ ಸೂಚನ ಫಲಕವನ್ನೂ ಅಳವಡಿಸದಿರುವುದೂ ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇದರಿಂದಾಗಿ ಅಪಾಯವನ್ನರಿಯದ ವಾಹನ ಚಾಲಕರು ಅಪಘಾತಕ್ಕೀಡಾಗಿ ಗಾಯಗೊಳ್ಳುತ್ತಿದ್ದಾರೆ ಎಂದು ಸ್ಥಳಿಯರಾದ ಶರತ್ ಶೆಟ್ಟಿ ಸಚ್ಚೇರಿಪೇಟೆ ತಿಳಿಸಿದ್ದಾರೆ.
ಭಾರೀ ಅನಾಹುತ ತಪ್ಪಿಸುವಲ್ಲಿ ಸಂಬಂಧಪಟ್ಟವರು ಕೂಡಲೇ ಕ್ರಮ ಕೈಗೊಳ್ಳಬೇಕಾಗಿದೆ ಎಂದೂ ಅವರು ಆಗ್ರಹಿಸಿದ್ದಾರೆ.