ಸ್ವ ಉದ್ಯೋಗಕ್ಕೆ ವರವಾದ ಸೌರ ವಿದ್ಯುತ್ ವ್ಯವಸ್ಥೆ
Team Udayavani, Apr 21, 2018, 8:15 AM IST
ಕುಂದಾಪುರ: ವಿದ್ಯುತ್ ಕೊರತೆ ಬಗ್ಗೆ ಮಾತನಾಡುತ್ತೇವಾದರೂ ಪರ್ಯಾಯ ಇಂಧನ ಬಳಕೆ ಬಗ್ಗೆ ಯೋಚಿಸುವುದೇ ಇಲ್ಲ. ಆದರೆ ಸೌರವಿದ್ಯುತ್ತನ್ನೇ ಪ್ರಮುಖವಾಗಿ ಬಳಸಿ ಕೆಲಸ ಮಾಡಿ ಜೀವನದಲ್ಲೂ ಯಶಸ್ಸು ಕಂಡವರು ಕುಂದಾಪುರ ತಾಲೂಕಿನ ಬೀಜಾಡಿಯ ಅಭಿನಯ ರಮೇಶ್.
ಆದಾಯಕ್ಕೆ ಕಲ್ಲು
ಸ್ವೋದ್ಯೋಗವಾಗಿ ಟೈಲರಿಂಗ್, ಹೈನುಗಾರಿಕೆ ಮಾಡಿಕೊಂಡು ಕುಟುಂಬ ನಿರ್ವಹಣೆ ಮಾಡುತ್ತಿದ್ದು, ಉತ್ತಮ ಆದಾಯ ಸಂಪಾದಿಸುತ್ತಿದ್ದರು. ಆದರೆ ದುರದೃಷ್ಟವಶಾತ್ ನರದ ಸಮಸ್ಯೆಯಿಂದ ಕಣ್ಣಿನ ದೃಷ್ಟಿಯನ್ನು ಕಳೆದುಕೊಂಡು ಸಮಸ್ಯೆಗೀಡಾಗಿದ್ದರು. ಜತೆಗೆ ಯಾವುದೇ ಕಷ್ಟದ ಕೆಲಸ ಮಾಡದಂತೆ ವೈದ್ಯರ ಸೂಚನೆ ಮೇರೆಗೆ ದಿಕ್ಕೇ ತೋಚದಂತಾಗಿತ್ತು.
ನೆರವಿಗೆ ಬಂತು ಯೋಜನೆ
ಗ್ರಾಮಾಭಿವೃದ್ಧಿ ಯೋಜನೆಯ ಶ್ರದ್ಧಾ ಜ್ಞಾನ ವಿಕಾಸ ಕೇಂದ್ರದ ಸಂಯೋಜಕಿಯಾದ ಇವರು ಧ.ಗ್ರಾ. ಯೋಜನೆಯ ಸದಸ್ಯರೊಬ್ಬರ ಸೋಲಾರ್ ಜೆರಾಕ್ಸ್ ಮೆಶಿನ್ ನ ಯಶೋಗಾಥೆಯಿಂದ ಪ್ರೇರಿತರಾದರು. ಕಾರ್ಯಕರ್ತರ ಸಹಕಾರದೊಂದಿಗೆ 27 ಸಾವಿರ ರೂ. ಪ್ರಗತಿನಿಧಿ ಸಾಲ ಪಡೆದು ಸೋಲಾರ್ ಜೆರಾಕ್ಸ್ ಮಷೀನ್ ತಮ್ಮ ಮನೆಯಲ್ಲಿ ಅಳವಡಿಸಿಕೊಂಡರು. ಬದುಕಿನ ಕರಾಳ ಛಾಯೆ ಅಳಿಸಲು ಈ ಛಾಯಾಪ್ರತಿ ತೆಗೆಯುವ ಯುಂತ್ರ ನೆರವಾಯಿತು. ಇದರಿಂದ ಈಗ ದಿನಕ್ಕೆ ಕನಿಷ್ಠ 250ರೂ.ಯಂತೆ ದುಡಿಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸ್ಟೇಷನರಿ ಅಂಗಡಿ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ.
ಪ್ರಗತಿಗೆ ಯೋಜನೆ ಸದಾ ಬೆಂಬಲ
ಅಭಿನಯ ಅವರು ಗ್ರಾಮಾಭಿವೃದ್ಧಿ ಯೋಜನೆಯ ಶ್ರದ್ಧಾ ಜ್ಞಾನ ವಿಕಾಸ ಕೇಂದ್ರದ ಸಂಯೋಜಕಿಯಾಗಿದ್ದು ಧರ್ಮಸ್ಥಳ ಯೋಜನೆಯಿಂದ ವಿವಿಧ ಉದ್ದೇಶಗಳಿಗಾಗಿ ಸುಮಾರು 5 ಲ.ರೂ. ಪ್ರಗತಿನಿಧಿ ಪಡೆದುಕೊಂಡಿದ್ದಾರೆ. ಅವರ ಪ್ರಗತಿಗೆ ಯೋಜನೆಯ ಬೆಂಬಲ ಮಾರ್ಗದರ್ಶನ ಸದಾ ಇರುತ್ತದೆ.
– ಸುಶೀಲಾ, ಜ್ಞಾನವಿಕಾಸ ಸಮನ್ವಯಾಧಿಕಾರಿ, ಕುಂದಾಪುರ
ಕಷ್ಟದ ಗೂಡು
ಮಕ್ಕಳಾಗದ ಕೊರಗು ಒಂದೆಡೆಯಾದರೆ, ಆರೋಗ್ಯ ಸಮಸ್ಯೆ ಮತ್ತೂಂದೆಡೆ. ಈ ಸಂಕಷ್ಟಗಳ ನಡುವೆ ಕಡಿಮೆ ವೆಚ್ಚದಲ್ಲಿ ಸ್ವ ಉದ್ಯೋಗ ಮಾಡುತ್ತಿರುವುದು ನೆಮ್ಮದಿ ತಂದು ಕೊಟ್ಟಿದೆ. ಪತಿ ಗಾರೆ ಕೆಲಸ ಮಾಡುತ್ತಿದ್ದು ನನಗೆ ಬೆಂಬಲವಾಗಿದ್ದಾರೆ.
– ಅಭಿನಯ ರಮೇಶ್, ಬೀಜಾಡಿ