ಪಡುತಿರುಪತಿಯಲ್ಲಿ ಧನುರ್ಮಾಸ ವಿಶೇಷ ಪೂಜೆ
ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನ
Team Udayavani, Jan 4, 2020, 11:08 PM IST
ಕಾರ್ಕಳ: ಅವಿಭಜಿತ ದ.ಕ. ಜಿಲ್ಲೆಯ ಪ್ರಸಿದ್ಧ ಕೇತ್ರಗಳಲ್ಲಿ ಒಂದಾದ ಕಾರ್ಕಳ ಪಡುತಿರುಪತಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಧನುರ್ಮಾಸದ ಅಂಗವಾಗಿ ವಿಶೇಷ ಪೂಜೆ ನಡೆಯುತ್ತಿದೆ.
ದಿನವೂ ನೂರಾರು ಮಂದಿ ಪೂಜೆಯಲ್ಲಿ ಭಾಗವಹಿಸುತ್ತಿದ್ದು, ದೇವರ ಆರ್ಶೀವಾದ ಪಡೆಯುತ್ತಿದ್ದಾರೆ.ಚಪ್ಪರ ಶ್ರೀನಿವಾಸ ಹಾಗೂ ಶ್ರೀ ವೆಂಕಟರಮಣ ದೇವರ ಸಾನ್ನಿಧ್ಯವಿರುವ ಈ ಕ್ಷೇತ್ರ ಬಹಳ ವಿಶಿಷ್ಟವಾದುದು. ಜತೆಗೆ ಅತ್ಯಂತ ಪುರಾತನ
ದೇವಸ್ಥಾನವಾಗಿದೆ. 1537 ರ ಸಂದರ್ಭದಲ್ಲಿ ಈ ದೇವಸ್ಥಾನವನ್ನು ನಿರ್ಮಿಸಲಾಯಿತು ಎಂಬ ಮಾಹಿತಿ ಇದೆ. ದೇಶ ವಿದೇಶಗಳಲ್ಲಿ ಈ ದೇವರ ಭಕ್ತರಿದ್ದು, ದೇವಸ್ಥಾನದ ವಿಶೇಷ ಉತ್ಸವಗಳಲ್ಲಿ ಭಾಗಿಯಾಗುತ್ತಿದ್ದಾರೆ. ದೇವಸ್ಥಾನವು ಗೌಡ ಸಾರಸ್ವತ ಸಮುದಾಯದವರಿಗೆ ಸಂಬಂಧಿಸಿದ್ದಾಗಿದೆ.
ಲಕ್ಷ ದೀಪೋತ್ಸವ
ಕೆರೆದೀಪ, ಕಾರ್ತಿಕ ಮಾಸದಲ್ಲಿ ನಡೆಯುವ ವಿಶ್ವರೂಪ ದರ್ಶನ ಮತ್ತು ಲಕ್ಷದೀಪೋತ್ಸವ, ಅಂದು ನಡೆಯುವ ವನಭೋಜನ ಬಹಳ ವಿಶೇಷ. ವಿಶ್ವರೂಪ ದರ್ಶನದ ದಿನದಂದು ದೇವರನ್ನು ಕಣ್ತುಂಬಿಕೊಳ್ಳುವುದೇ ಒಂದು ಭಾಗ್ಯ.
ವೈಶಾಖ ಮಾಸದಲ್ಲಿ ಜರಗುವ ರಥೋತ್ಸವವೂ ಬಹಳ ಪ್ರಸಿದ್ಧ. ಇದರೊಂದಿಗೆ ಪ್ರತಿಷ್ಠಾ ವರ್ಧಂತ್ಯುತ್ಸವ ಅತ್ಯಂತ ಅದ್ಧೂರಿಯಾಗಿ ನಡೆಯುವುದು ಇಲ್ಲಿ ಅನೂಚಾನವಾಗಿ ನಡೆದು ಬಂದ ಸಂಪ್ರದಾಯ. ಈ ಉತ್ಸವಗಳಿಗೆ ತಪ್ಪದೇ ಎಲ್ಲೆಡೆಯಿಂದ ಭಕ್ತರು ಭಾಗವಹಿಸುತ್ತಾರೆ.
ಧನುರ್ಮಾಸ ವಿಶೇಷ
ಈಗ ಧನುರ್ಮಾಸ ವಿಶೇಷ ಪೂಜೆ ನಡೆಯುತ್ತಿದ್ದು, ಪ್ರತಿದಿನ ಬೆಳಗ್ಗೆ 5.30ರಿಂದ ಸುಪ್ರಭಾತ, ನಿರ್ಮಲ ವಿಸರ್ಜನೆ, ಬಳಿಕ ಪೂಜೆ ನಡೆಸಲಾಗುತ್ತಿದೆ. ಈ ಮಾಸದಲ್ಲಿ ವಿಶೇಷವಾಗಿ ದೇವರಿಗೆ ಬೆಳಗ್ಗೆ ಗಂಜಿದೋಸೆ, ಕಿಚಿಡಿಯನ್ನು ನೈವೇದ್ಯವನ್ನಾಗಿ ಸಮರ್ಪಿಸಲಾಗುತ್ತದೆ.
ಸಂಜೆ 6ರ ವೇಳೆ ದೀವಟಿಗೆ ನಮಸ್ಕಾರ, ಭಜನೆ, ರಾತ್ರಿ ಪೂಜೆ ಉತ್ಸವಾದಿ, ಏಕಾಂತ ಸೇವೆ ಇತ್ಯಾದಿಗಳು ದಿನಂಪ್ರತಿ ಜರಗುವುದು.
ದೇವಸ್ಥಾನದ ಟ್ರಸ್ಟ್ ಧಾರ್ಮಿಕ ಚಟುವಟಿಕೆಗಳಲ್ಲದೇ, ವಿವಿಧ ಶೈಕ್ಷಣಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ತನ್ನನ್ನು ತೊಡಗಿಸಿ ಕೊಂಡಿರುವುದು ವಿಶೇಷ.
ಹುಗ್ಗಿ ನೈವೇದ್ಯ ಸಮರ್ಪಣೆ
ಧನುರ್ಮಾಸದ ಸಮಯದಲ್ಲಿ ಪ್ರತಿನಿತ್ಯ ದೇವರಿಗೆ ಬೆಳಗ್ಗೆ ಪೂಜೆಯಾದ ಬಳಿಕ ಹೆಸರುಕಾಳು, ಅಕ್ಕಿ, ಉಪ್ಪು, ಬೆಲ್ಲ ಕಾಳು ಮೆಣಸು ಮುಂತಾದ ಪದಾರ್ಥಗಳಿಂದ ಮಾಡಿದ ಹುಗ್ಗಿ ನೈವೇದ್ಯ ಸಮರ್ಪಣೆ ಮಾಡಲಾಗು ತ್ತಿದೆ. ಈ ಸಂದರ್ಭ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇಗುಲಕ್ಕೆ ಆಗಮಿಸಿ, ದರುಶನ ಪಡೆದು ಸೇವೆಗೈಯುತ್ತಾರೆ.
-ಸುಮಂತ್ ಜೋಯಿಷಿ, ಅರ್ಚಕರು, ಪಡುತಿರುಪತಿ ಶ್ರೀ ವೆಂಕಟರಮಣ ದೇವಸ್ಥಾನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi ಇನ್ನೂ ನಡೆಯದ ಟೆಂಡರ್ ಪ್ರಕ್ರಿಯೆ; ರಾಜ್ಯದಲ್ಲಿ ಅಗ್ನಿಶಾಮಕ ವಾಹನ ಕೊರತೆ
Road Mishap ಮಣಿಪಾಲ: ಕಾರು ಢಿಕ್ಕಿಯಾಗಿ ಪಾದಚಾರಿ ಸಾವು
Malpe ದಕ್ಕೆಯಲ್ಲಿ ನೀರಿಗೆ ಬಿದ್ದು ಸಾವು: ದೂರು ದಾಖಲು
Theme Park Karkala ಅವಶೇಷ ತೆರವಿಗೆ ಕೋರ್ಟ್ ಆದೇಶ; ಜಿಲ್ಲಾಧಿಕಾರಿ ತಡೆ!
Parashurama Theme Park; ಕೊನೆಯ ಸಾಕ್ಷ್ಯವೂ ನಾಶಕ್ಕೆ ಯತ್ನ: ಉದಯ ಕುಮಾರ್ ಶೆಟ್ಟಿ ಆರೋಪ