ಉಳ್ಳಾಲ ಸೇತುವೆಯಲ್ಲಿ ಸೋಮವಾರ ತಡ ರಾತ್ರಿ ನಡೆದದ್ದೇನು?
Team Udayavani, Jul 31, 2019, 6:19 AM IST
ಮಂಗಳೂರು: ಸಿದ್ಧಾರ್ಥ್ ಹೆಗ್ಡೆ ಉಳ್ಳಾಲ ಸೇತುವೆ ಬಳಿಯಿಂದ ನಿಗೂಢವಾಗಿ ನಾಪತ್ತೆಯಾಗಿ 36 ತಾಸು ಕಳೆದಿದ್ದರೂ, ಯಾವುದೇ ಸುಳಿವು ಸಿಗದ ಕಾರಣ ದೇಶದ ಗಮನ ಸೆಳೆದಿರುವ ಈ ಗಣ್ಯ ವ್ಯಕ್ತಿಯ ಪ್ರಕರಣವನ್ನು ಭೇದಿಸುವುದು ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ.
ಸಿದ್ಧಾರ್ಥ್ ನಾಪತ್ತೆಯಾದ ಸಂಗತಿ ಸೋಮವಾರ ರಾತ್ರಿ ಪೊಲೀಸರಿಗೆ ತಿಳಿಯುತ್ತಿದ್ದಂತೆ, ಹಿರಿಯ ಅಧಿಕಾರಿಗಳು, ಸ್ಥಳೀಯ ಮುಖಂಡರು ಮತ್ತು ಅಗ್ನಿ ಶಾಮಕ ತಂಡ ಸ್ಥಳಕ್ಕೆ ದೌಡಾಯಿಸಿದ್ದರು. ಪ್ರಾರಂಭದಲ್ಲಿ ಅಪರಿಚಿತ ವ್ಯಕ್ತಿ ಸೇತುವೆ ಮೇಲಿಂದ ನದಿಗೆ ಹಾರಿದ್ದಾರೆ ಎನ್ನಲಾಗಿತ್ತು. ಅನಂತರ ಹಾರಿದ ವ್ಯಕ್ತಿ ಒಬ್ಬರು ಅಧಿಕಾರಿ ಎಂದು ಹೇಳಲಾಯಿತು. ಸ್ವಲ್ಪವೇ ಹೊತ್ತಿನ ಬಳಿಕ ಗಣ್ಯ ವ್ಯಕ್ತಿಯೊಬ್ಬರು ಹಾರಿರುವ ಸಾಧ್ಯತೆಯಿದೆ ಎಂಬ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದರು.
ಆ ಬಳಿಕ ಸಿದ್ಧಾರ್ಥ್ ಕಾರು ಚಾಲಕ ಬಸವರಾಜರನ್ನು ವಿಚಾರಣೆಗೆ ಒಳಪಡಿಸಿದಾಗ ನಾಪತ್ತೆಯಾದ ವ್ಯಕ್ತಿ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಅಳಿಯ ಎನ್ನುವುದು ಪೊಲೀಸರಿಗೆ ಖಚಿತವಾಯಿತು. ಕೂಡಲೇ ನಗರ ಉಪ ಪೊಲೀಸ್ ಆಯುಕ್ತರು ಮತ್ತು ಸಿಬಂದಿ ಪರಿಶೀಲನೆ ನಡೆಸುತ್ತಿದ್ದರು. ಶ್ವಾನದಳವೂ ಆಗಮಿಸಿ ಸುಳಿವು ಹುಡುಕುವ ಪ್ರಯತ್ನ ನಡೆಸಿತು. ಪೊಲೀಸ್ ಅಧಿಕಾರಿಗಳು ಬೆಂಗಳೂರಿನಲ್ಲಿರುವ ಎಸ್.ಎಂ. ಕೃಷ್ಣ ಮನೆಯವರನ್ನು ಸಂಪರ್ಕಿಸಿ ಸಿದ್ಧಾರ್ಥ್ ನಾಪತ್ತೆ ಬಗ್ಗೆ ಖಚಿತಪಡಿಸಿದರು. ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ಬಸವರಾಜ ಅವರನ್ನು ಕಂಕನಾಡಿ ಠಾಣೆಗೆ ಕರೆದೊಯ್ದರು.
ಸ್ಥಳಕ್ಕಾಗಮಿಸಿದ ಜಿಲ್ಲಾಧಿಕಾರಿ
ಸಿದ್ಧಾರ್ಥ್ ಆಯತಪ್ಪಿ ಬಿದ್ದಿರುವ ಅನುಮಾನದ ಹಿನ್ನೆಲೆಯಲ್ಲಿ ನದಿಯಲ್ಲಿ ಹುಡುಕಾಟ ನಡೆಸಲು ಇಬ್ಬರು ಮುಳುಗು ತಜ್ಞರನ್ನು ತಡರಾತ್ರಿಯೇ ಕರೆಸಲಾಗಿತ್ತು. ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್ ಕೂಡ ಆಗಮಿಸಿ ಪೊಲೀಸರಿಂದ ವಿವರಣೆ ಪಡೆದರು. ಆದರೆ ತಡರಾತ್ರಿ ಸುಮಾರು 2 ಗಂಟೆಯಾಗಿದ್ದರಿಂದ ಮತ್ತು ನದಿಯಲ್ಲಿ ನೀರಿನ ಮಟ್ಟ ಹೆಚ್ಚಿದ್ದ ಕಾರಣ ಹುಡುಕಾಟವನ್ನು ಮಂಗಳವಾರ ಮುಂಜಾನೆ ಪುನರಾರಂಭಿಸಲು ಪೊಲೀಸರು ಮತ್ತು ಅಗ್ನಿಶಾಮಕದವರು ತೀರ್ಮಾನಿಸಿದರು. ಸೇತುವೆ ಬಳಿ ನೆರೆದಿದ್ದ ಸಾರ್ವಜನಿಕರು ಮತ್ತು ವಾಹನಗಳನ್ನು ತೆರವುಗೊಳಿಸುವಂತೆ ಸೂಚಿಸಿ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಅಧಿಕಾರಿಗಳು ನಿರ್ಗಮಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
CD ಮಾಡುವುದರಲ್ಲಿ ಡಿಕೆಶಿ ನುರಿತವರು: ಬಿಜೆಪಿ ಅಭ್ಯರ್ಥಿ ರಾಜುಗೌಡ ವ್ಯಂಗ್ಯ
Rae Bareli ರಣಕಣ; ನಾಮಪತ್ರ ಸಲ್ಲಿಸಿದ ರಾಹುಲ್ ಗಾಂಧಿ: ಗೆಲುವು ಸುಲಭವೇ?
Water scarcity; ಮಂಗಳೂರು ನಗರಕ್ಕೆ ಎರಡು ದಿನಕ್ಕೊಮ್ಮೆ ನೀರು
Prajwal Case; ಮೊದಲು ರಾಹುಲ್ ಗಾಂಧಿಗೆ ನೋಟಿಸ್ ಕೊಡಬೇಕು: ಎಚ್ ಡಿಕೆ ಆಗ್ರಹ
Pakistan ಜಿಂದಾಬಾದ್ ಅಂದವರನ್ನು ಡಿಶ್ಯುಂ ಡಿಶ್ಯುಂ ಎಂದು ಶೂಟ್ ಮಾಡಬೇಕು: ಜಮೀರ್