ನೀರಿನ ಸಮಸ್ಯೆ ಪರಿಹರಿಸಲು ಒತ್ತಾಯ
Team Udayavani, May 4, 2019, 4:39 PM IST
ಜೋಯುಡಾ: ತಾಲೂಕಿನ ಕ್ಯಾಸ್ಟಲ್ರಾಕ್ ಗ್ರಾಪಂ ವ್ಯಾಪ್ತಿಯ ಜವಳಿ ಹಾಗೂ ಸುತ್ತಲ ಗ್ರಾಮಸ್ಥರಿಂದ ಕುಡಿಯುವ ನೀರಿಗಾಗಿ ಗ್ರಾಪಂಗೆ ಮುತ್ತಿಗೆ ಹಾಕಿದ ಘಟನೆ ನಡೆದಿದೆ.
ಜವಳಿ ಗ್ರಾಮದಲ್ಲಿ ಸುಮಾರು 150 ಮನೆಗಳಿದ್ದು, 500ಕ್ಕೂ ಹೆಚ್ಚು ಜನರಿದ್ದಾರೆ. ಇಲ್ಲಿ ಕಳೆದ ಒಂದು ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆ ಇದ್ದ ಬಗ್ಗೆ ಅನೇಕ ಸಾರಿ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಲಾಗಿದೆ. ಆದರೂ ನೀರು ಸರಬರಾಜು ಆಗದೆ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ನಡೆದಿತ್ತು. ಈ ಬಗ್ಗೆ ಸ್ಥಳೀಯ ಗ್ರಾ.ಪಂ ಸದಸ್ಯರು ಕೂಡಾ ಸಮಸ್ಯೆ ಪರಿಹಾರಕ್ಕೆ ಬಾರದೆ ಸಮಸ್ಯೆ ಉದ್ಭವಗೊಂಡು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ರೊಚ್ಚಿಗೆದ್ದ ಗ್ರಾಮಸ್ಥರು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ.
ಪಿಡಿಒ ಯೋಗಿತಾ ದೇಸಾಯಿ ಸ್ಥಳೀಯ ಸಮಸ್ಯೆಗಳನ್ನು ಆಲಿಸಿ, ಗ್ರಾಮಸ್ಥರೊಂದಿಗೆ ಚರ್ಚಿಸಿದಾಗ ಗ್ರಾಮದಲ್ಲಿ ಗ್ರಾ.ಪಂ.ದಿಂದ ನೇಮಕಗೊಂಡ ವಾಟರ್ಮನ್ನಿಂದಾಗಿ ಈ ಸಮಸ್ಯೆ ಉದ್ಭವವಾಗಿದೆ ಎನ್ನುವುದು ತಿಳಿದಿದೆ. ನೀರಿನ ಕೊರತೆ ಇಲ್ಲ. ಆದರೆ ಸಾರ್ವಜನಿಕರಿಗೆ ಪ್ರತಿನಿತ್ಯ ನೀರು ಬಿಡುವ ಕೆಲಸಮಾಡದ ವಾಟರ್ವೆುನ್ನಿಂದಾಗಿ ನೀರಿನ ಸಮಸ್ಯೆ ಉದ್ಭವಿಸಿದ್ದನ್ನು ಮನಗಂಡ ಅಕಾರಿಗಳು ಆತನಿಗೆ ಥರಾಟೆ ತೆಗೆದುಕೊಂಡು ಸಮಯಕ್ಕೆ ಸರಿಯಾಗಿ ನೀರು ಬಿಡುವ ವ್ಯವಸ್ಥೆ ಮಾಡದಿದ್ದರೆ, ಕೆಲಸದಿಂದ ತೆಗೆದುಹಾಕುವುದಾಗಿ ಪಿಡಿಒ ಎಚ್ಚರಿಕೆ ನೀಡಿದ್ದು, ನಂತರ ಸಾರ್ವಜನಿಕರು ಪ್ರತಿಭಟನೆ ಹಿಂಪಡೆದಿದ್ದಾಗಿ ತಿಳಿದುಬಂದಿದೆ.
ಪಾಯಸವಾಡಿ-ಬರಲಕೋಡ ನೀರಿಗಾಗಿ ಹಾಹಾಕಾರ: ಇದೇ ಗ್ರಾ.ಪಂ ವ್ಯಾಪ್ತಿಯ ಪಾಯಸವಾಡಿಯಲ್ಲೂ ನೀರಿಗಾಗಿ ಹಾಹಾಕಾರ ಎದ್ದಿದ್ದು, ಇಲ್ಲಿ ಈಗಾಗಲೇ ನಿರ್ಮಿಸಿದ ನೀರಿನ ಯೋಜನೆಯಿಂದ ಜನಸಾಮಾನ್ಯರಿಗೆ ನೀರು ಸಿಗದೆ ನೀರಿಗಾಗಿ ಪರದಾಡುವಂತೆ ಮಾಡಿದೆ. ಬರಲಕೋಡ ಹಾಗೂ ಪಾಯಸವಾಡಿ ಗ್ರಾಮದಲ್ಲಿ ಸುಮಾರು 500 ರಿಂದ 550 ಮನೆಗಳಿವೆ. ಸಾವಿರಾರು ಜನಸಂಖ್ಯೆ ಇರುವ ಈ ಗ್ರಾಮಗಳಿಗೆ ಸೂಕ್ತ ಕುಡಿಯುವ ನೀರಿನ ವ್ಯವಸ್ಥೆ ಮಾಡುವಲ್ಲಿ ತಾಲೂಕಾ ಆಡಳಿತ ಹಾಗೂ ಕುಡಿಯುವ ನೀರಿನ ಇಲಾಖೆ ವೈಫಲ್ಯಕಂಡಿದೆ.
ಇಲ್ಲಿನ ನೀರಿನ ಸಮಸ್ಯೆ ಬಗ್ಗೆ ತಾಲೂಕಿನ ಕುಡಿಯುವ ನೀರು ಹಾಗೂ ಸರಬರಾಜು ಇಲಾಖೆ ಅಧಿಕಾರಿಗಳಿಗೆ, ಗ್ರಾ.ಪಂ. ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ನಿರ್ಲಕ್ಷಿಸಿದ ಅಧಿಕಾರಿಗಳ ಹೊಣೆಗೇಡಿತನದ ಪರಿಣಾಮ ಈಗ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಮುಂದಿನ ಒಂದು ವಾರದೊಳಗಾಗಿ ಕೂಡಲೇ ಪರಿಹಾರ ಕೈಗೊಳ್ಳದಿದ್ದರೆ ಗ್ರಾ.ಪಂ.ಗೆ ಮುತ್ತಿಗೆ ಹಾಕಿ ಅನಿರ್ದಿಷ್ಟಾವಧಿ ಧರಣಿ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಜವಳಿ ಗ್ರಾಮದಲ್ಲಿ ನೀರಿನ ಸಂಗ್ರಹ ಇದ್ದರೂ ಇದನ್ನು ಸರಿಯಾಗಿ ಪೂರೈಸದೇ ಕುಡಿಯುವ ನೀರಿನ ಸಮಸ್ಯೆಗೆ ಕಾರಣವಾಗಿದ್ದರೆ, ಪಾಯಸವಾಡಿ ಹಾಗೂ ಬರಲಕೋಡನಲ್ಲಿ ನೀರಿನ ವ್ಯವಸ್ಥೆ ಮಾಡುವಲ್ಲಿ ತಾಲೂಕು ಆಡಳಿತ ವೈಫಲ್ಯಕಂಡಿದೆ. ಕೂಡಲೇ ಇಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಮೂಲಕ ಜನರ ಸಮಸ್ಯೆಗೆ ಸ್ಪಂದಿಸಬೇಕು.
• ಗುರಪ್ಪ ಹಣಬರ,ಬಿಜೆಪಿ ಯುವ ಮುಖಂಡ ಅಖೇತಿ