ಅಂಗನವಾಡಿ ಕಾರ್ಯಕರ್ತೆಯರ ಪರಿಷ್ಕೃತ ಗೌರವಧನ ನ.1 ರಿಂದಲೇ ಜಾರಿ
Team Udayavani, Oct 25, 2019, 5:48 PM IST
ಬೆಂಗಳೂರು:ಅಂಗನವಾಡಿ ಕಾರ್ಯಕರ್ತೆಯರು, ಮಿನಿ ಅಂಗನವಾಡಿ ಕಾರ್ಯಕರ್ತೆಯರು, ಅಂಗನವಾಡಿ ಸಹಾಯಕಿಯರಿಗೆ ಗೌರವ ಧನ ಹೆಚ್ಚಳ ನ. 1 ರಿಂದಲೇ ಜಾರಿಯಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.
ವಿಕಾಸಸೌಧದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅಂಗನವಾಡಿ ಕಾರ್ಯಕರ್ತೆಯರಿಗೆ ಎರಡು ಸಾವಿರ ರೂ., ಮಿನಿ ಅಂಗನವಾಡಿ ಕಾರ್ಯಕರ್ತೆಯರಿಗೆ 1250 ರೂ. ಹಾಗೂ ಸಹಾಯಕಿಯರಿಗೆ 1 ಸಾವಿರ ರೂ. ಹೆಚ್ಚಳವಾಗಿದ್ದು ಅ.1 2018 ರಿಂದಲೇ ಪೂರ್ವಾನ್ವಯವಾಗಲಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರವು 1500 ರೂ. ಹೆಚ್ಚಳ ಮಾಡಿತ್ತು. ರಾಜ್ಯ ಸರ್ಕಾರ 500 ರೂ. ಹೆಚ್ಚಳ ಮಾಡಿತ್ತು. ಹಿಂದೆಯೇ ಘೋಷಣೆ ಮಾಡಿದ್ದರೂ ಇನ್ನೂ ಕೊಟ್ಟಿರಲಿಲ್ಲ. ಇದೀಗ ಆರ್ಥಿಕ ಇಲಾಖೆಯ ಅನುಮತಿಯೂ ದೊರೆತಿದೆ ಎಂದು ತಿಳಿಸಿದರು.
ಅಂಗನವಾಡಿ ಕಾರ್ಯಕರ್ತೆಯರು ಪ್ರಸ್ತುತ 8 ಸಾವಿರ ಗೌರವ ಧನ ಪಡೆಯುತ್ತಿದ್ದು ಇದೀಗ 10 ಸಾವಿರ ರೂ. ಸಿಗಲಿದೆ. ಅದೇ ರೀತಿ ಮಿನಿ ಅಂಗನವಾಡಿ ಕಾರ್ಯಕರ್ತೆಯರು ಪ್ರಸ್ತು 4750 ರೂ. ಪಡೆಯುತ್ತಿದ್ದು ಇದೀಗ ಆರು ಸಾವಿರ ರೂ. ಸಿಗಲಿದೆ. ಸಹಾಯಕಿಯರು ನಾಲ್ಕು ಸಾವಿರ ಪಡೆಯುತ್ತಿದ್ದು ಐದು ಸಾವಿರ ರೂ. ಸಿಗಲಿದೆ ಎಂದು ವಿವರಿಸಿದರು.
ಸುಮಾರು 1,28,491 ಅಂಗನವಾಡಿ ಕಾರ್ಯಕರ್ತೆಯರು , ಮಿನಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಕಾರ್ಯನಿರ್ವಹಿಸುತ್ತಿದ್ದು, ಗೌರವ ಧನ ಹೆಚ್ಚಳಕ್ಕಾಗಿ ಒಟ್ಟು 98.30 ಕೋಟಿ ರೂ. ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ಇಲಾಖೆಯಲ್ಲಿ ಶೇ.50 ರಷ್ಟು ಹುದ್ದೆಗಳ ಖಾಲಿ ಇದ್ದ ಕಾರಣ ಸಮಸ್ಯೆಯಾಗಿದೆ. ಇದೇ ಕಾರಣಕ್ಕಾಗಿ ಆಡಳಿತ ಸುಧಾರಣೆಗೆ ಇಲಾಖೆಯಿಂದ ಒತ್ತು ನೀಡಲಾಗುತ್ತಿದ್ದು 48 ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳನ್ನು ನೇಮಿಸಿ ಸ್ಥಳ ನಿಯುಕ್ತಿಗೊಳಿಸಿ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ.
33 ಸಹಾಯಕ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳನ್ನು ನೇಮಿಸಿಕೊಳ್ಳಲಾಗಿದ್ದು ಇವರಿಗೂ ಸ್ಥಳ ನಿಯುಕ್ತಿಗೊಳಿಸಲಾಗುತ್ತಿದೆ.
ಈಗಾಗಲೇ 628 ಮಹಿಳಾ ಮೆಲ್ವಿಚಾರಕಿಯರಿಗೆ ಸ್ಥಳ ನಿಯುಕ್ತಿಗೊಳಿಸಲು ಕ್ರಮ ವಹಿಸಲಾಗುತ್ತಿದೆ. ಇದರಲ್ಲಿ 374 ಮೇಲ್ವಿಚಾರಕರಿಗೆ ತರಬೇತಿ ಪೂರ್ಣಗೊಂಡಿದ್ದು ಬಾಕಿ 254 ಮೇಲ್ವಿಚಾರಕರಿಗೆ ತರಬೇತಿ ನೀಡುವ ಪ್ರಕ್ರಿಯೆ ಜಾರಿಯಲ್ಲಿದೆ.
ಐದು ವಿವಿಧ ವೃಂದದ ಅದಿಕಾರಿಗಳಿಗೆ ಮುಂಬಡ್ತಿ ನೀಡಿ ಇಲಾಖೆಯು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಕ್ರಮ ವಹಿಸಲಾಗಿದ್ದು 104 ಅಧಿಕಾರಿಗಳಿಗೆ ಮುಂಬಡ್ತಿ ಸಲುವಾಗಿ ಇಲಾಖಾ ಮುಂಬಡ್ತಿ ಸಮಿತಿಯಿಂದ ಡಿಪಿಸಿ ಪ್ರಕ್ರಿಯೆ ಪೂರ್ಣಗೊಂಡಿದ್ದು ಸ್ಥಳ ನಿಯುಕ್ತಿ ಬಾಕಿಯಿದೆ. ಇನ್ನೂ 80 ವಿವಿಧ ಹಂತದ ಅಧಿಕಾರಿಗಳಿಗೆ ಮುಂಬಡ್ತಿ ಸಂಬಂಧ ಡಿಪಿಸಿ ಪ್ರಕ್ರಿಯೆ ಪ್ರಾರಂಭಿಸಿದ್ದು ಪದೋನ್ನತಿ ಶೀಘ್ರದಲ್ಲಿಯೇ ನೀಡಲಾಗುವುದು ಎಂದು ವಿವರಿಸಿದರು.
1000 ಅಂಗನವಾಡಿ ಕೇಂದ್ರಗಳ ದುರಸ್ಥಿಗೆ10 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಎರಡನೇ ಹಂತದಲ್ಲಿ ಇನ್ನೂ ದುರಸ್ಥಿ ಬಾಕಿ ಇರುವ ಅಂಗನವಾಡಿ ಕೇಂದ್ರಗಳಿಗೆ ಹಣ ಬಿಡುಗಡೆ ಮಾಡಲಾಗುವುದು. ನೆರೆ ಪೀಡಿತ ಪ್ರದೇಶಗಳಲ್ಲಿನ ಅಂಗನವಾಡಿ ಕೇಂದ್ರಗಳು ಮಳೆಯಿಂದ ಹಾನಿಯಾಗಿದ್ದರೆ ಶಾಲೆ, ದೇವಾಲಯ ಸೇರಿ ಬದಲಿ ಜಾಗದಲ್ಲಿ ನಡೆಸಲು ಸೂಚಿಸಲಾಗಿದೆ ಎಂದು ಹೇಳಿದರು.
ಬೆಳಗಾವಿಯಲ್ಲಿ 1 ಸಾವಿರ ಅಂಗನವಾಡಿ ಪೈಕಿ ಮೊದಲ ಹಂತದಲ್ಲಿ 100 ಅಂಗನವಾಡಿ ಕೇಂದ್ರಗಳನ್ನು ಹೈಟೆಕ್ ಕೇಂದ್ರಗಳಾಗಿ ರೂಪಿಸಲು ಕಾರ್ಯ ಯೋಜನೆ ರೂಪಿಸಲಾಗಿದೆ. ಮುಂದಿನ ಹಂತದಲ್ಲಿ ಇತರೆ ಜಿಲ್ಲೆಗಳಲ್ಲೂ ಹೈಟೆಕ್ ಅಂಗನವಾಡಿ ಕೇಂದ್ರ ಸ್ಥಾಪಿಸಿ ಅಲ್ಲಿ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆ, ಪೌಷ್ಠಿಕ ಆಹಾರ ಕಲ್ಪಿಸಲಾಗುವುದು ಎಂದು ವಿವರಿಸಿದರು. ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್, ನಿರ್ದೇಶಕ ದಯಾನಂದ್ ಉಪಸ್ಥಿತರಿದ್ದರು.