![Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ](https://www.udayavani.com/wp-content/uploads/2024/07/shi1-415x229.jpg)
ಬಣ್ಣ ಬಣ್ಣದ ಕಲ್ಲುಗಳ ಲೋಕ : ಮರುಭೂಮಿಯ ಮಧ್ಯದಲ್ಲಿ ಮ್ಯಾಜಿಕ್ ಪರ್ವತಗಳು
ವರ್ಷ ವರ್ಷವೂ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.
Team Udayavani, Dec 2, 2023, 5:55 PM IST
![ಬಣ್ಣ ಬಣ್ಣದ ಕಲ್ಲುಗಳ ಲೋಕ : ಮರುಭೂಮಿಯ ಮಧ್ಯದಲ್ಲಿ ಮ್ಯಾಜಿಕ್ ಪರ್ವತಗಳು](https://www.udayavani.com/wp-content/uploads/2023/12/Banna01-620x399.jpg)
ಮರುಭೂಮಿಯಲ್ಲಿ ನೀರು ಕಂಡರೆ ಅದೊಂದು ಅದ್ಭುತದಂತೆ ಭಾಸವಾಗುತ್ತದೆ. ಇನ್ನು ಮರಳು ಗಾಡಿನ ನಡುವೆ ಬಣ್ಣದ ಲೋಕವೇ ಕಾಣಿಸಿಬಿಟ್ಟರೆ……ಎಂಥಹಾ ವಿಸ್ಮಯವಿರಬಹುದು! ಮರುಭೂಮಿಯಲ್ಲಿ ನೋಡಲು ಏನಿದೆ? ಎಂದು ನಾವು ಅಂದುಕೊಳ್ಳಬಹುದು, ಆದರೆ ಇಲ್ಲಿಯೂ ಮನಸೆಳೆಯುವ ದೃಶ್ಯಗಳು ನಮಗೆ ಕಾಣಸಿಗುತ್ತವೆ. ಇಲ್ಲಿ ಹೋದರೆ ಮರಳಿನ ಮಧ್ಯೆ ನಮಗೆ ಕಾಣಿಸುವುದು ಉದ್ದವಾಗಿ ಜೋಡಿಸಿಟ್ಟ ಬಂಡೆಕಲ್ಲುಗಳು. ಹಾ…ಇವು ಬರೀ ಬಂಡೆಗಲ್ಲುಗಳಲ್ಲ, ಬಣ್ಣಬಣ್ಣದ ಬಂಡೆಗಳು. ಆಕರ್ಷಿತವಾದ ಬಣ್ಣ ಹಾಗೂ ಬಂಡೆಗಳ ಆಕಾರದಿಂದಲೇ ಈ ಜಾಗ ಹಲವು ಪ್ರವಾಸಿಗರ ನೆಚ್ಚಿನ ತಾಣವಾಗಿದೆ.
ಈಗೀಗ ಹೇಗಾಗಿ ಬಿಟ್ಟಿದೆಯೆಂದರೆ ಇನ್ಸ್ಟಾಗ್ರಾಂನಲ್ಲಿ ಯಾವುದಾದರೂ ಚೆಂದವಾದ ಜಾಗವನ್ನು ನೋಡಿದರೆ ಸಾಕು ಅಲ್ಲಿಗೆ ಹೋಗಬೇಕೆಂದು ಆಸೆಯಾಗುತ್ತದೆ. ಅದಕ್ಕೆಂದೇ ಈಗ ಇನ್ಸ್ಟಾಗ್ರಾಂ ಯೋಗ್ಯ ಜಾಗಗಳು ಹುಟ್ಟಿಕೊಳ್ಳುತ್ತಿವೆ. ಚೆಂದನೆಯ ಜಾಗಕ್ಕೆ ಇನ್ಸ್ಟಾಗ್ರಾಮೆಬಲ್ ಜಾಗ (Instagrammable spots)ವೆಂದು ಕರೆದು ಅವುಗಳನ್ನು ಪ್ರಮೋಟ್ ಮಾಡುವುದು ಸಹ ಪ್ರವಾಸೋದ್ಯಮದ ಕೆಲಸಗಳಲ್ಲಿ ಒಂದು. ಬಹಳಷ್ಟು ಜನ ಹೀಗೆ ವೀಡಿಯೋ ಅಥವಾ ಫೋಟೋಗಳಲ್ಲಿ ನೋಡಿದ ಜಾಗಗಳನ್ನು ಹುಡುಕಿಕೊಂಡು ಹೋಗುತ್ತಾರೆ. ಕೆಲವು ಜಾಗಗಳಿಗೆ ಇನ್ಸ್ಟಾಗ್ರಾಂನಲ್ಲಿ ಲಕ್ಷಗಟ್ಟಲೇ ಹಿಂಬಾಲಕರನ್ನು ಹೊಂದಿದ ಇನ್ಫ್ಲು ಯೆನ್ಸ್ರ್ಗಳನ್ನು ಕರೆಸಿ ಅವರು ತಮ್ಮ ಅಕೌಂಟ್ನಲ್ಲಿ ಫೋಟೊ ಅಥವಾ ವೀಡಿಯೋ ಹಾಕಲಿಕ್ಕೆ ಇಂತಿಷ್ಟು ದುಡ್ಡು ಕೊಟ್ಟು ಆ ಜಾಗವನ್ನು ಜನಪ್ರಿಯವಾಗಿಸುತ್ತಾರೆ. ಇನ್ಸ್ಟಾಗ್ರಾಂನಲ್ಲಿ ಫೋಟೋ ಹಾಕಲಿಕ್ಕೆಂದೇ ಪ್ರವಾಸ ಮಾಡುವ ಜನರೂ ಇದ್ದಾರೆ. ಅದೇನೂ ತಪ್ಪಲ್ಲ. ಕಾಲದ ಪ್ರಕಾರ ನಾವು ಹೆಜ್ಜೆ ಹಾಕಬೇಕು. ಕಾಲಕ್ಕೆ ತಕ್ಕಂತೆ ನಡೆಯಬೇಕು, ಕಾಲಕ್ಕೆ ತಕ್ಕಂತೆ ನುಡಿಯಬೇಕು ಎಂದು ನಮ್ಮ ಡಾ| ರಾಜಕುಮಾರ್ ಹಾಡಿನಲ್ಲಿ ಹೇಳಿದ್ದಾರಲ್ಲ. ನಾವೆಲ್ಲ ಕಾಲವೆಂಬ ನದಿಯಲ್ಲಿ ಸಾಗುತ್ತಿರುವ ಪುಟ್ಟ ಪುಟ್ಟ ತೊರೆಗಳು.
ಇದನ್ನೆಲ್ಲ ಯಾಕೆ ಹೇಳುತ್ತಿದ್ದೇನೆಂದರೆ ಈಗ ನಾನು ಹೇಳ ಹೊರಟಿರುವ ಜಾಗವನ್ನು ನಾನು ಸಹ ಹೀಗೆಯೇ ಇನ್ಸ್ಟಾಗ್ರಾಂ ನಲ್ಲಿ ನೋಡಿದ್ದು!
ಮೊದಲ ಸಲ ನೋಡಿದಾಗ ಎಷ್ಟು ಚೆಂದವಾಗಿದೆಯಲ್ಲ ಎಂದೆನ್ನಿಸಿತ್ತು. ಬಣ್ಣಗಳು ಕಣ್ಣು ಸೆಳೆದಿದ್ದವು. ಎಲ್ಲ ಬಗೆಯ ಬಣ್ಣಗಳು ಅಲ್ಲಿದ್ದವು. ಅವು ನಿಜವಾದ ಕಲ್ಲುಗಳ್ಳೋ ಅಥವಾ ಕಲ್ಲುಗಳ ಹಾಗೆ ಕಾಣುವಂತೆ ಜೋಡಿಸಿದ ಮತ್ತೆಂತದೋ ಎಂದು ತಿಳಿಯಲಿಲ್ಲ. ನನಗೆ ಆ ಸಮಯದಲ್ಲಿ ಫೋಟೋ ಮಾತ್ರ ಕಂಡಿತ್ತಾದ್ದರಿಂದ ಆ ಜಾಗದ ಬಗ್ಗೆ ಮಾಹಿತಿ ಸಿಗಲಿಲ್ಲ. ಆ ಜಾಗವನ್ನು ತಲುಪುವ ಬಗೆ, ಖಚಿತವಾದ ವಿಳಾಸ ಇತ್ಯಾದಿಗಳನ್ನೆಲ್ಲ ಹುಡುಕಿ ಅವು ಸಿಗದೇ ಪೆಚ್ಚಾಗಿ ದಿನಗಳು ಉರುಳಿ ಆ ಜಾಗದ ಚಿತ್ರ ಮನಸ್ಸಿನಿಂದ ಮರೆಯಾಗಿ ಹೋಗಿತ್ತು. ಅದು ಮತ್ತೂಮ್ಮೆ ಕಂಡಿದ್ದು ಒಂದಿಷ್ಟು ತಿಂಗಳುಗಳ ಅನಂತರ. ಹೀಗೆ ಮತ್ತೆ ಕಾಣಿಸಿದೆಯೆಂದ ಮೇಲೆ ಅದು ನಿಜವಾಗಿಯೂ ದೈವ ಅನುಗ್ರಹವೇ ಇರಬೇಕು, ನನ್ನನ್ನು ಆ ಜಾಗಕ್ಕೆ ಕರೆಯುತ್ತಿರಬೇಕು ಎಂದೆಲ್ಲ ಲೆಕ್ಕ ಹಾಕಿದ ನಾನು ಪಟ್ಟಾಗಿ ಕೂತು ಆ ಜಾಗದ ಬಗ್ಗೆ ಹುಡುಕಿದ್ದೆ. ಅಂತೂ ನನಗೆ ಆ ಜಾಗದ ಹೆಸರು ಗೊತ್ತಾಗಿತ್ತು!
ಸೆವೆನ್ ಮ್ಯಾಜಿಕ್ ಮೌಂಟೆನ್ಸ್ ಎಂಬ ಹೆಸರಿನ ಈ ಜಾಗ ಲಾಸ್ ವೇಗಾಸ್ಗೆ ಹೋಗುವಾಗ ದಾರಿಯಲ್ಲಿ ಕಾಣಿಸುತ್ತದೆ. ಲಾಸ್ ವೇಗಾಸ್ ನೆವಾಡಾ ರಾಜ್ಯದಲ್ಲಿದೆ. ನೆವಾಡಾ ರಾಜ್ಯ ಬಹುತೇಕ ಮರುಭೂಮಿ. ಬೇಸಗೆಯಲ್ಲಿ ರಣರಣ ಬಿಸಿಲು ಹೊಡೆಯುತ್ತದೆ. ಮೂವತ್ತು, ಮೂವತ್ತೈದು ಸೆಲ್ಸಿಯಸ್ಗಳಷ್ಟು ಏರುವ ತಾಪಮಾನ ಮೈ ಚರ್ಮ ಸುಟ್ಟು ಬಿಡುತ್ತದೇನೋ ಎನ್ನುವಷ್ಟು ಮಾರಣಾಂತಿಕವಾಗಿರುತ್ತದೆ. ಹಾಗಾಗಿ ಈ ಕಡೆಯಲ್ಲಿ ನೋಡೆನೆಂದರೂ ಒಂದು ಮರ ಸಿಗುವುದಿಲ್ಲ. ಕಲ್ಲುಗಳು, ಮುಳ್ಳು ಗಿಡಗಳು ತುಂಬಿರುತ್ತವಾದ್ದರಿಂದ ಈ ರಾಜ್ಯ ಪ್ರವಾಸೋದ್ಯಮಕ್ಕಾಗಿ ಕಸಿನೋಗಳನ್ನು ನೆಚ್ಚಿಕೊಂಡಿದೆ. ಕಸಿನೋಗಳೇ ತುಂಬಿರುವ ಲಾಸ್ ವೇಗಾಸ್ನ ಕಣ್ಣು ಕುಕ್ಕುವಂತಹ ಬೆಳಕಿನಿಂದ ಪ್ರವಾಸಿಗರನ್ನು ಆಕರ್ಷಿಸಿ ಅದರ ಮೂಲಕ ರಾಜ್ಯದ ಬೊಕ್ಕಸಕ್ಕೆ ಹಣ ತುಂಬಿಸಿಕೊಳ್ಳುತ್ತದೆ. ಲಾಸ್ ವೇಗಾಸ್ಗೆ ಹೋದಾಗ ಸುತ್ತಮುತ್ತ ನೋಡಬಹುದಾದ ಇನ್ನೂ ಅನೇಕ ಸ್ಥಳಗಳಿವೆ ಮತ್ತು ಅದರಲ್ಲಿ ಈ ಸೆವೆನ್ ಮ್ಯಾಜಿಕ್ ಮೌಂಟೆನ್ಸ್ ಸಹ ಒಂದು. ಲಾಸ್ ವೇಗಾಸ್ನಿಂದ ದಕ್ಷಿಣಕ್ಕೆ ಸುಮಾರು ಹದಿನೈದು ಮೈಲಿಗಳಷ್ಟು ದೂರ ಬಂದರೆ ಜೀನ್ ಡ್ರೈ ಲೇಕ್ ಮತ್ತು ಇಂಟರಸ್ಟೇಟ್ ಹದಿನೈದರ ಮಧ್ಯದಲ್ಲಿ ಈ ಜಾಗವಿದೆ. ದೂರದಿಂದಲೇ ಬಣ್ಣಮಯವಾಗಿ ಕಾಣುವ ಈ ಜಾಗವನ್ನು ಸುಲಭವಾಗಿ ಪತ್ತೆ ಮಾಡಬಹುದು.
ಮೌಂಟೆನ್ಸ್ ಎಂದಾಕ್ಷಣ ದೊಡ್ಡ ದೊಡ್ಡ ಪರ್ವತಗಳಿವೆ ಎಂದುಕೊಳ್ಳಬೇಡಿ. ಇದರ ಹೆಸರು ಮಾತ್ರ ಮೌಂಟೆನ್.
ಇಲ್ಲಿರುವುದು ಒಂದರ ಮೇಲೊಂದರಂತೆ ಪೇರಿಸಿಟ್ಟ ಬಣ್ಣ ಬಣ್ಣದ ಕಲ್ಲುಗಳು. ಹೀಗೆ ಒಟ್ಟು ಏಳು ಕಂಬಗಳನ್ನು ನಿರ್ಮಿಸಿ¨ªಾರೆ. ಮರುಭೂಮಿಯ ಮಧ್ಯದಲ್ಲಿ ಈ ಕಲ್ಲುಗಳು ಬಣ್ಣಮಯವಾದ ರಂಗೋಲಿಯಂತೆ ಕಾಣಿಸುತ್ತವೆ. ಇದನ್ನು ಕಲೆ ಅಥವಾ ವಿನ್ಯಾಸವೆಂದು ಕರೆಯಬಹುದು. ಒಂದರ ಮೇಲೊಂದು ಪೇರಿಸಿಟ್ಟಿರುವ ಕಲ್ಲುಗಳು ಸಹ ಕಲಾತ್ಮಕವಾಗಿ ಒಂದಕ್ಕೊಂದು ಬೆಸೆದು ನಿಂತಿವೆ. ಹಿಂದಿನ ಅಂಕಣದಲ್ಲಿ ಇಂಗ್ಲೆಂಡಿನ ವಿಶ್ವದ ಅದ್ಭುತಗಳಲ್ಲಿ ಒಂದಾದ ಸ್ಟೋನ್ ಹೆಂಜ್ ಬಗ್ಗೆ ಬರೆದಿದ್ದೆ. ಇದನ್ನು ಸಹ ಅದಕ್ಕೆ ಹೋಲಿಸಬಹುದು. ಸ್ವಿಸ್ ಕಲಾವಿದ “ಯೂಗೋ ರೊಂಡಿನೋನ್’ (Ugo Rondinone) ಎಂಬಾತ ನಿರ್ಮಿಸಿರುವ ಈ ಕಲ್ಲಿನ ಕಲಾಕೃತಿ ಇಷ್ಟು ಪ್ರಖ್ಯಾತವಾಗುತ್ತದೆಂದು ಯಾರೂ ಊಹಿಸಿರಲಿಲ್ಲ. ನಿರ್ಮಾಣದ ಅನಂತರ ಇಲ್ಲಿ ಬಂದ ಜನಸಾಗರವನ್ನು ಕಂಡು ಯೂಗೋನಿಗೂ ಸಹ ಆಶ್ಚರ್ಯವಾಯಿತಂತೆ. ಪ್ರತೀ ವರ್ಷವೂ ಕಲ್ಲುಗಳನ್ನಿಡುವ ಈ ಜಾಗದ ಕಾಂಟ್ರಾಕ್ಟ್ ಅನ್ನು ವಿಸ್ತರಿಸುತ್ತಲೇ ಬಂದಿದ್ದಾರೆ. ವರ್ಷ ವರ್ಷವೂ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.
2015ರಲ್ಲಿ ಯೂಗೋ ಈ ಬಣ್ಣದ ಕಲ್ಲುಗಳನ್ನು ಪೇರಿಸಿಟ್ಟ. ಮೊದಲು ದೊಡ್ಡ ಬಂಡೆಗಲ್ಲುಗಳನ್ನು ಕತ್ತರಿಸಿ ಅವುಗಳ ಮಧ್ಯದಲ್ಲಿ ತೂತು ತೆಗೆದು ಒಂದರ ಮೇಲೊಂದರಂತೆ ಇಡತೊಡಗಿದಾಗ ಕಲ್ಲುಗಳು ಹೊಸ ಆಕಾರದಲ್ಲಿ ಭಿನ್ನವಾಗಿ ಕಂಡವು. ಅನಂತರ ಅವುಗಳಿಗೆ ಬಣ್ಣ ಕೊಡಲಾಯಿತು. 2016ರಲ್ಲಿ ನೆವಾಡಾ ಮ್ಯೂಸಿಯಮ್ ಆಫ್ ಆರ್ಟ್ ಈ ಕಲಾಕೃತಿಯನ್ನು ಇದೇ ಜಾಗದಲ್ಲಿ ಪ್ರದರ್ಶನಕ್ಕೆ ಇಟ್ಟಿತು. ಮೊದಲಿಗೆ ಕೇವಲ ಎರಡು ವರ್ಷಗಳವರೆಗೆ ಎಂದು ಮಾತಾಗಿತ್ತು. ಆದರೆ ಅವರ ಎಣಿಕೆಗೂ ಮೀರಿ ಜನರಿಂದ ಸ್ಪಂದನೆ ಸಿಕ್ಕು ಈಗ ಈ ತಾಣ ಶಾಶ್ವತವೇನೋ ಎಂಬಂತೆ ಮನೆಮಾತಾಗಿ ಹೋಗಿದೆ. ವೇಗಾಸ್ಗೆ ಹೋದವರು ಇಲ್ಲಿ ತಪ್ಪದೇ ಭೇಟಿ ನೀಡುತ್ತಾರೆ.
ಹತ್ತಿರ ಹೋಗಿ ನೋಡಿದರೆ ಒಂದೊಂದು ಕಲ್ಲು ಸಹ ಬೃಹತ್ತಾಗಿ ಕಾಣಿಸುತ್ತದೆ. ಅವುಗಳ ಮೇಲಿರುವ ಬಣ್ಣ ಎಂತಹ ಬಿಸಿಲಿಗೂ ಸಹ ಕುಂದಾಗದೇ ವರ್ಷಗಳೂ ಕಳೆದರೂ ಹೊಸದೇನೋ ಎಂಬಂತೆ ಥಳಥಳ ಹೊಳೆಯುತ್ತವೆ. ಈ ಜಾಗದಲ್ಲಿ ಪೇರಿಸಿಟ್ಟ ಈ ಏಳು ಕಲ್ಲುಗಳ ಕಂಬಗಳನ್ನು ಹೊರತು ಪಡಿಸಿದರೆ ಬೇರೇನೂ ಇಲ್ಲ. ಪ್ರತಿಯೊಬ್ಬ ಕಲಾವಿದ ತನ್ನ ಕಲಾಕೃತಿ ಹಲವಾರು ಜನರಿಗೆ ತಲುಪಲಿ, ಅವರಿಂದ ಮೆಚ್ಚುಗೆ ಸಿಗಲಿ ಎಂದು ಕಾಯುತ್ತಿರುತ್ತಾನೆ. ಕೆಲವೊಮ್ಮೆ ಅದೆಷ್ಟೇ ಶ್ರಮ ಹಾಕಿದರೂ, ಅದೆಷ್ಟೇ ಧನ್ಯತೆಯಲ್ಲಿ ಕಲೆಯನ್ನು ರಚಿಸಿದರೂ ಅದಕ್ಕೆ ತಕ್ಕನಾದಂತಹ ಗುರುತು ಸಿಗುವುದಿಲ್ಲ. ಆದರೆ ಯೂಗೋನ ಕಲಾಕೃತಿ ಅವನ ಎಣಿಕೆಯನ್ನು ಮೀರಿ ಜನರನ್ನು ತಲುಪಿದೆ. ಒಬ್ಬ ಕಲಾವಿದನಿಗೆ ಇದಕ್ಕಿಂತ ಹೆಚ್ಚಿನ ಮನ್ನಣೆ ಬೇರೆ ಏನಿರಲಿಕ್ಕೆ ಸಾಧ್ಯ ಅಲ್ಲವೇ?
ಟಾಪ್ ನ್ಯೂಸ್
![Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ](https://www.udayavani.com/wp-content/uploads/2024/07/shi1-415x229.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ](https://www.udayavani.com/wp-content/uploads/2024/07/shi1-150x83.jpg)
Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ
![2-chithapura](https://www.udayavani.com/wp-content/uploads/2024/07/2-chithapura-150x90.jpg)
Chittapur: ಪಟ್ಟಣದ ಹೊರವಲಯದಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ
![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-150x90.jpg)
Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ
![Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ](https://www.udayavani.com/wp-content/uploads/2024/07/BUILDING-1-150x84.jpg)
Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ
![Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು](https://www.udayavani.com/wp-content/uploads/2024/07/BIKE-7-150x86.jpg)
Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.