ಸಿದ್ದರಾಮಯ್ಯ ಗೋಸುಂಬೆ ರಾಜಕಾರಣಿ : ಛಲವಾದಿ ನಾರಾಯಣಸ್ವಾಮಿ ಕಿಡಿ
ಪ್ರಿಯಾಂಕ್, ಮಹದೇವಪ್ಪ ಕೂಡ ಅವರ ತಾಳಕ್ಕೆ ತಕ್ಕಂತೆ ಕುಣಿಯುವವರು
Team Udayavani, Dec 12, 2022, 8:11 PM IST
ಬೆಂಗಳೂರು: ಸಿದ್ದರಾಮಯ್ಯ ಒಬ್ಬ ಗೋಸುಂಬೆ ರಾಜಕಾರಣಿ ಎಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಟೀಕಿಸಿದರು. ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬೆಂಕಿ ಬಿದ್ದಾಗ ಕೈಕಾಯಿಸಿಕೊಳ್ಳುವ ಸಿದ್ದರಾಮಯ್ಯ ಅವರು ಒಬ್ಬ ಗೋಸುಂಬೆ ರಾಜಕಾರಣಿ ಎಂದು ಅವರು ನುಡಿದರು.
ಸಿದ್ದರಾಮಯ್ಯ ಅವರು ಯಾವತ್ತೂ ಒಳ ಮೀಸಲಾತಿ ಪರ ಇರಲಿಲ್ಲ. ಹುಬ್ಬಳ್ಳಿಯಲ್ಲಿ 2017ರಲ್ಲಿ ನಡೆದ ಮಾದಿಗ ಸಮುದಾಯದ ಮೀಸಲಾತಿ ಒತ್ತಾಯಿಸುವ ಸುಮಾರು 2 ಲಕ್ಷ ಜನರು ಸೇರಿದ್ದ ಬೃಹತ್ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಪಾಲ್ಗೊಂಡಿದ್ದರೂ ನ್ಯಾಯಮೂರ್ತಿ ಸದಾಶಿವ ಅವರ ಶಿಫಾರಸುಗಳನ್ನು ಜಾರಿ ಮಾಡುವ ಕುರಿತು ಮಾತನಾಡಲಿಲ್ಲ ಎಂದು ಆಕ್ಷೇಪಿಸಿದರು.
ಸಮ್ಮಿಶ್ರ ಸರಕಾರವೂ ಸೇರಿ ಆರು ವರ್ಷಗಳ ಕಾಲ ಈ ವರದಿ ಚರ್ಚೆಗೆ ಬರಲಿಲ್ಲ. ನಮ್ಮ ಪಕ್ಷದ ಕೆಲವು ಶಾಸಕರು ಇದರ ಅನುಷ್ಠಾನ ಕುರಿತು ಕೇಳಿದಾಗ ಖರ್ಗೆ, ಪರಮೇಶ್ವರ್, ಎಚ್.ಸಿ.ಮಹದೇವಪ್ಪ ವಿರೋಧ ಇದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದ್ದರು. ನಾವು ಅಧಿಕಾರಕ್ಕೆ ಬಂದರೆ ಅದನ್ನು ಜಾರಿಗೊಳಿಸುತ್ತೇವೆ ಎನ್ನುತ್ತಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಪ್ರಿಯಾಂಕ್ ಖರ್ಗೆ, ಎಚ್.ಸಿ.ಮಹದೇವಪ್ಪ ಅವರು ಕೂಡ ಸಿದ್ದರಾಮಯ್ಯ ಅವರ ತಾಳಕ್ಕೆ ತಕ್ಕಂತೆ ಕುಣಿಯುವವರು. ಇವರಿಗೆ ದಲಿತ ಪ್ರೇಮ ಇಲ್ಲ, ದಲಿತರ ಪರವಾಗಿ ಇವರು ಇಲ್ಲ ಎಂದು ತಿಳಿಸಿದರು.