ಬಂಟ್ವಾಳ ಕಂಟೈನ್ಮೆಂಟ್ ಝೋನ್ ಪರಿಷ್ಕರಣೆ
Team Udayavani, May 23, 2020, 11:15 AM IST
ಬಂಟ್ವಾಳ: ಕಂಟೈನ್ಮೆಂಟ್ ಪ್ರದೇಶದ ಮಣ್ಣನ್ನು ತೆರವುಗೊಳಿಸುತ್ತಿರುವುದು
ಬಂಟ್ವಾಳ: ಸರಕಾರದ ಹೊಸ ಆದೇಶದಂತೆ ಬಂಟ್ವಾಳ ಕಸ್ಬಾ ಗ್ರಾಮದ ಕಂಟೈನ್ಮೆಂಟ್ ಪ್ರದೇಶವನ್ನು ದ.ಕ.ಜಿಲ್ಲಾಡಳಿತ ಪರಿಷ್ಕರಣೆಗೊಳಿಸಿದೆ. ಬಂಟ್ವಾಳ ಪೇಟೆಯ ಮುಖ್ಯ ರಸ್ತೆಗಳಿಗೆ ಹಾಕಲಾಗಿದ್ದ ಬ್ಯಾರಿಕೇಡ್ ಹಾಗೂ ಮಣ್ಣನ್ನು ತೆರವುಗೊಳಿಸಲಾಗಿದ್ದು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.
ಪರಿಷ್ಕೃತ ಆದೇಶದ ಪ್ರಕಾರ ಪೂರ್ವದಲ್ಲಿ ಸದಾಶಿವ ಪ್ರಭು ಮನೆ, ಪಶ್ಚಿಮದಲ್ಲಿ ಸರಕಾರಿ ಘಟ್ಟ, ಉತ್ತರದಲ್ಲಿ ರವಿಚಂದ್ರ ಮನೆ, ದಕ್ಷಿಣದಲ್ಲಿ ಸುರೇಶ್ ದಾಮೋದರ ಬಾಳಿಗಾ ಮನೆ ಕಂಟೈನ್ಮೆಂಟ್ ವ್ಯಾಪ್ತಿಯಾಗಿರುತ್ತದೆ. ಜತೆಗೆ ಪೂರ್ವದಲ್ಲಿ ಬಂಟ್ವಾಳ ಪೇಟೆಯ ರಥಬೀದಿ ಮುಖ್ಯರಸ್ತೆ, ಪಶ್ಚಿಮದಲ್ಲಿ ಎಸ್.ವಿ.ಎಸ್.ಶಾಲಾ ಮೈದಾನ, ಉತ್ತರದಲ್ಲಿ ಶಶಿಕಲಾ ಮನೆ, ದಕ್ಷಿಣದಲ್ಲಿ ಬಾಲಾಜಿ ಸರ್ವೀಸ್ ಸ್ಟೇಷನ್ ಬಫರ್ ಝೋನ್ನಲ್ಲಿರುತ್ತದೆ. ಈ ವ್ಯಾಪ್ತಿಯಲ್ಲಿ 97 ಮನೆಗಳು, 12 ಅಂಗಡಿಗಳು, 3 ಕಚೇರಿಗಳು ಒಳಗೊಳ್ಳಲಿದ್ದು, ಒಟ್ಟು 388 ಜನಸಂಖ್ಯೆ ಇರುತ್ತದೆ. ತಹಶೀಲ್ದಾರ್ ಅವರು ಇನ್ಸಿಡೆಂಟ್ ಕಮಾಂಡರ್ ಆಗಿರುತ್ತಾರೆ ಎಂದು ದ.ಕ.ಜಿಲ್ಲಾಧಿಕಾರಿಯವರು ತಿಳಿಸಿದ್ದಾರೆ.
ಬಂಟ್ವಾಳ ಪೇಟೆ: 6 ಮಂದಿಯ ವಿರುದ್ಧ ಪ್ರಕರಣ
ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ವಾಳ ಪೇಟೆಯ ಕಸ್ಬಾ ಗ್ರಾಮದ ಕಂಟೈನ್ಮೆಂಟ್ ಝೋನ್ನಲ್ಲಿ ಮೇ 21ರಂದು ಆದೇಶ ಉಲ್ಲಂ ಸಿ ಸೇರಿದ್ದ 6 ಮಂದಿಯ ಗುಂಪಿನ ವಿರುದ್ಧ ಪ್ರಕರಣ ದಾಖಲಾಗಿದೆ. ಮೇ 21ರ ಮಧ್ಯಾಹ್ನ 12 ಗಂಟೆಯ ವೇಳೆಗೆ ಕಸ್ಬಾ ಗ್ರಾಮದ ಕಂಟೈನ್ಮೆಂಟ್ ಝೋನ್ ನ ಇನ್ಸಿಡೆಂಟ್ ಕಮಾಂಡರ್ ಆಗಿರುವ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್. ಅವರು ಪರಿಶೀಲನೆಗೆ ತೆರಳಿದಾಗ 6 ಮಂದಿಯ ಗುಂಪು ಸೇರಿದ್ದು, ಕಂಡುಬಂದಿದ್ದು, ಅದರ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳೀಯರು ಕಂಟೈನ್ಮೆಂಟ್ ಝೋನ್ ನ ಸಡಿಲಿಕೆಗೆ ಆಗ್ರಹಿಸಿ ಗುಂಪು ಸೇರಿದ್ದರು.