Belthangady ಹೊಸ ವರ್ಷದ ಪಾರ್ಟಿ: ಮೂಗು ಕಚ್ಚಿ ತುಂಡರಿಸಿದ ಸ್ನೇಹಿತ!
Team Udayavani, Jan 2, 2024, 6:55 AM IST
ಬೆಳ್ತಂಗಡಿ: ಹೊಸ ವರ್ಷದ ಪಾರ್ಟಿಯಲ್ಲಿ ಯುವಕರ ನಡುವೆ ಗಲಾಟೆಯಾಗಿ ಓರ್ವ ತನ್ನ ಗೆಳೆಯ ಮೂಗನ್ನೇ ಕಚ್ಚಿ ತುಂಡರಿಸಿದ ಘಟನೆ ಪಿಲ್ಯದಲ್ಲಿ ರವಿವಾರ ರಾತ್ರಿ ಸಂಭವಿಸಿದೆ. ಪಿಲ್ಯ ಗ್ರಾಮದ ಉಲ್ಪೆ ಎಂಬಲ್ಲಿನ ನಿವಾಸಿ ದೀಕ್ಷಿತ್ (28) ಯುವಕ ಮೂಗು ತುಂಡರಿಸಿಕೊಂಡ ವ್ಯಕ್ತಿ.
ಸ್ನೇಹಿತ ರಾಕೇಶ್ ಕೃತ್ಯ ಎಸಗಿದಾತ. ಮೂಲತಃ ಮೂಡಿಗೆರೆ ತಾಲೂಕಿ ನವನಾಗಿರುವ ರಾಕೇಶ್ ಪ್ರಸ್ತುತ ಪಿಲ್ಯದ ಸಂಬಂಧಿಕರ ಮನೆಯಲ್ಲಿ ವಾಸವಿದ್ದು, ಸ್ಥಳೀಯ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಡಿಸೆಂಬರ್ 31ರ ರಾತ್ರಿ ಹೊಸ ವರ್ಷದ ಸಂದರ್ಭದಲ್ಲಿ ಯುವಕರ ತಂಡ ಮದ್ಯ ಸೇವಿಸಿ ಕ್ಷುಲ್ಲಕ ವಿಚಾರದಲ್ಲಿ ಗಲಾಟೆ ಮಾಡಿದ್ದಾರೆ. ಗಲಾಟೆ ವಿಕೋಪಕ್ಕೆ ತಿರುಗಿ ರಾಕೇಶ್ ಎಂಬಾತ ದೀಕ್ಷಿತ್ ಎಂಬಾತನ ಮೂಗನ್ನು ಕಚ್ಚಿ ತುಂಡರಿಸಿದ್ದಾನೆ.
ಗಂಭೀರ ಗಾಯಗೊಂಡ ದೀಕ್ಷಿತ್ನನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ವೆನ್ಲಾಕ್ ಗೆ ದಾಖಲಿಸಲಾ ಗಿದೆ. ವೇಣೂರು ಪೊಲೀಸರು ಗಾಯಾಳುವಿನ ಹೇಳಿಕೆ ಪಡಕೊಂಡಿದ್ದಾರೆ.