Uppinangady ಮೂರು ಪವನ್ ತೂಕದ ಚಿನ್ನಾಭರಣವಿದ್ದ ಪರ್ಸ್ ಮರಳಿಸಿದ ಅರ್ಚಕ
Team Udayavani, Jan 17, 2024, 10:06 PM IST
ಸಾಂದರ್ಭಿಕ ಚಿತ್ರ.
ಉಪ್ಪಿನಂಗಡಿ: ಮೂರು ಪವನ್ ತೂಕದ ಚಿನ್ನಾಭರಣವಿದ್ದ ಪರ್ಸ್ವೊಂದನ್ನು ಮಹಿಳಾ ಭಕ್ತರೊಬ್ಬರು ಕಳೆದುಕೊಂಡಿದ್ದು, ಅದು ಸಿಕ್ಕಿದ ದೇಗುಲದ ಸಹಾಯಕ ಅರ್ಚಕರು, ಮಹಿಳಾ ಭಕ್ತರಿಗೆ ಹಿಂದಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.
ಮಂಜುಳಾ ಅವರು ಉಪ್ಪಿನಂಗಡಿಯ ಶ್ರೀ ಮಹಾಕಾಳಿ ದೇವಾಲಯಕ್ಕೆ ಭೇಟಿ ನೀಡಿ ಹಿಂದಿರುಗುವ ವೇಳೆ ತನ್ನ ಆಭರಣವನ್ನಿರಿಸಿದ್ದ ಪರ್ಸನ್ನು ಕಳೆದುಕೊಂಡಿದ್ದರು. ಭಾರೀ ಜನಸಂದಣಿ ಇದ್ದ ಆ ಸಮಯದಲ್ಲಿ ಪರ್ಸ್ ಕಳೆದುಕೊಂಡಿರುವುದು ಗೊತ್ತಾಗಿರಲಿಲ್ಲ. ಮನೆಗೆ ಬಂದಾಗ ವಿಷಯ ತಿಳಿದುಬಂದಿತ್ತು. ಅನಂತರ ದೇಗುಲಕ್ಕೆ ತೆರಳಿ ಹುಡುಕಾಟ ನಡೆಸಿದರೂ ಪರ್ಸ್ ಪತ್ತೆಯಾಗಿರಲಿಲ್ಲ.
ಅನಂತರ ಅಲ್ಲೇ ಇದ್ದ ದೇವಾಲಯದ ಸಹಾಯಕ ಅರ್ಚಕ ಅನಂತಕೃಷ್ಣ ಅವರು ಮಹಿಳೆಯನ್ನು ವಿಚಾರಿಸಿ, ದೇಗುಲದಲ್ಲಿ ಭಕ್ತರು ಸಮರ್ಪಿಸುವ ಎಳ್ಳೆಣ್ಣೆಯ ಬಳಿ ಸಣ್ಣ ಪರ್ಸ್ ಸಿಕ್ಕಿರುವುದಾಗಿ ಅವರಿಗೆ ತಿಳಿಸಿ, ಅದನ್ನು ಅವರಿಗೆ ನೀಡಿದ್ದಾರೆ. ಪರ್ಸ್ನೊಳಗೆ 3 ಪವನ್ ತೂಕದ ಚಿನ್ನಾಭರಣ ಯಥಾಸ್ಥಿತಿಯಲ್ಲಿತ್ತು.