“ರಾಷ್ಟ್ರೀಯ ವಿಪತ್ತು ನಿಧಿಯಿಂದ ಜಿಲ್ಲೆಗೆ 10 ಕೋ.ರೂ.’
ಸಮುದ್ರ ಕೊರೆತ ಪ್ರದೇಶಕ್ಕೆ ಉಸ್ತುವಾರಿ ಸಚಿವರ ಭೇಟಿ
Team Udayavani, Aug 12, 2020, 5:36 AM IST
ಹೆಬ್ರಿ ತಾ| ಕಚೇರಿಯಲ್ಲಿ ನಡೆದ ಸಾರ್ವಜನಿಕರ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿದರು.
ಪಡುಬಿದ್ರಿ: ರಾಷ್ಟ್ರೀಯ ವಿಪತ್ತು ನಿಧಿಯಿಂದ ಉಡುಪಿ ಜಿಲ್ಲೆಗೆ 10 ಕೋಟಿ ರೂ. ಗಳನ್ನು ಬಿಡುಗಡೆಗೊಳಿಸಲು ಈಗಾಗಲೇ ಬೇಡಿಕೆ ಸಲ್ಲಿಸಲಾಗಿದೆ. ಮುಂದಿನ 3 – 4 ದಿನಗಳಲ್ಲಿ ಇದನ್ನು ಬಿಡುಗಡೆಗೊಳಿಸ ಲಾಗುವ ನಿರೀಕ್ಷೆ ಇದ್ದು ಜಿಲ್ಲೆಯಲ್ಲಿನ ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ತುರ್ತು ಕಾಮಗಾರಿಗಳಿಗಾಗಿ ಇದನ್ನು ಬಳಸಿಕೊಳ್ಳಲಾಗುವುದು ಎಂದು ರಾಜ್ಯ ಗೃಹ ಸಚಿವ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಆ. 11ರಂದು ಉಡುಪಿ ಜಿಲ್ಲೆಯಲ್ಲಿ ಮಳೆ ಹಾನಿಗೊಳಗಾಗಿರುವ ಪಡುಬಿದ್ರಿ ಬೀಚ್ ಪ್ರದೇಶವನ್ನು ವೀಕ್ಷಿಸಿ ಪತ್ರಕರ್ತರೊಂದಿಗೆ ಮಾತನಾಡಿದರು. ಕರಾವಳಿ ಪ್ರದೇಶದಲ್ಲಿನ ಎರಡು ಮುಖ್ಯ ವಿಷಯಗಳಾದ ಕಡಲ್ಕೊರೆತ ಮತ್ತು ನದಿ ಪಾತ್ರ ಉಕ್ಕಿ ಹರಿದು ಆಗುತ್ತಿರುವ ತೊಂದರೆಗಳ ವಿಚಾರ ವಾಗಿ ಆ. 10ರಂದು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ನಡೆಸಲಾದ ವೀಡಿಯೋ ಸಂವಾದದಲ್ಲಿ ಪ್ರಸ್ತಾವಿಸಿ
ದ್ದೇನೆ.ಪಶ್ಚಿಮಘಟ್ಟ ಪ್ರದೇಶಗಳಲ್ಲಿನ ಸೂಕ್ಷ್ಮ ಪ್ರದೇಶಗಳಲ್ಲಿನ ಭೂ ಕುಸಿತದ ಬಗೆಗೂ ಉಲ್ಲೇಖೀಸಿದ್ದೇನೆ. ಭೂಕುಸಿತದ ಕುರಿತಾಗಿ ಜಿಯಾಲಾಜಿಕಲ್ ಸರ್ವೇ ಆಫ್ ಇಂಡಿಯಾ ಮೂಲಕ ಸರ್ವೇ ನಡೆಸಿ ಆ ಪ್ರದೇಶದ ನಕ್ಷೆಯನ್ನು ತಯಾರಿಸಿಕೊಳ್ಳಲಾಗುವುದು. ಜನರ ಸ್ಥಳಾಂತರಕ್ಕಾಗಿ ಕ್ರಮಗಳನ್ನು ಕೈಗೊಳ್ಳುವ ಕುರಿತಾಗಿಯೂ ಪ್ರಧಾನಿ ಯೊಂದಿಗೆ ಚರ್ಚಿಸಲಾಗಿದೆ ಎಂದರು.
ಸರಳ ಸ್ವಾತಂತ್ರ್ಯೋತ್ಸವ ಆಚರಣೆ
ಈ ಬಾರಿ ಸ್ವಾತಂತ್ರ್ಯೋತ್ಸವವನ್ನು ಕೊರೊನಾ ಮಾರ್ಗದರ್ಶಿ ಸೂಚನೆ ಯಂತೆ ಸಾರ್ವಜನಿಕರ ಪ್ರವೇಶ ನಿಬಂಧಿಸಿ ಸರಳವಾಗಿ ಆಚರಿಸಲಾಗು ವುದು. ಉಡುಪಿ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಉಡುಪಿ ಜಿಲ್ಲಾಡಳಿತವು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತದೆ ಎಂದವರು ತಿಳಿಸಿದರು.
ಸಚಿವರೊಂದಿಗೆ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್, ಉಡುಪಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ವಿಷ್ಣುವರ್ಧನ್, ಉಡುಪಿ ಜಿ. ಪಂ. ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹಲೋಟ್, ಉಡುಪಿ ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಕುಂದಾಪುರದ ಸಹಾಯಕ ಕಮಿಶನರ್ ಕೆ ರಾಜು, ಕಾಪು ತಹಶೀಲ್ದಾರ್ ಮಹಮ್ಮದ್ ಐಸಾಕ್, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಜಿ. ಪಂ. ಸದಸ್ಯರಾದ ಗೀತಾಂಜಲಿ ಸುವರ್ಣ, ಶಶಿಕಾಂತ್ ಪಡುಬಿದ್ರಿ, ಉಡುಪಿ ತಾ. ಪಂ. ಮಾಜಿ ಅಧ್ಯಕ್ಷೆ ನೀತಾ ಗುರುರಾಜ್, ಬಿಜೆಪಿ ರಾಜ್ಯ ಕಾರ್ಯದರ್ಶಿ ಉದಯಕುಮಾರ್ ಶೆಟ್ಟಿ, ಕಾಪು ಕ್ಷೇತ್ರ ಬಿಜೆಪಿ ಅಧ್ಯಕ್ಷ ಶ್ರೀಕಾಂತ್ ನಾಯಕ್, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ರಮಾಕಾಂತ ದೇವಾಡಿಗ, ಕಾಪು ಕಾಂದಾಯ ಪರಿವೀಕ್ಷಣಾಧಿಕಾರಿ ರವಿಶಂಕರ್, ಗ್ರಾಮಲೆಕ್ಕಿಗ ಶ್ಯಾಮ್ ಸುಂದರ್ ಮತ್ತಿತರರಿದ್ದರು.