ಕೋಟೇಶ್ವರ ಪರಿಸರದಲ್ಲಿ ಕೆ.ಟಿ.ಎಂ. ಸಿನಿಮಾ ಚಿತ್ರೀಕರಣ
ಬೀಜಾಡಿ, ಕೋಡಿ ಕಡಲ ತಡಿಯಲ್ಲಿ ಪ್ರೇಮ ಗೀತೆಯ ಶೂಟಿಂಗ್
Team Udayavani, Oct 10, 2020, 2:19 AM IST
ಕೋಟೇಶ್ವರ: ಮಹಾಸಿಂಹ ಬ್ಯಾನರ್ ಅಡಿ ತೆರೆ ಕಾಣಲಿರುವ “ಕೆ.ಟಿ.ಎಂ.’ ಚಲನಚಿತ್ರಕ್ಕಾಗಿ ಅ. 9ರಂದು ಕೋಟೇಶ್ವರ ಪೇಟೆಯಲ್ಲಿ ಬಿರುಸಿನ ಚಿತ್ರೀಕರಣ ನಡೆಯಿತು.
ಪ್ರೇಮ ಕಥಾ ಹಂದರ
ಎಳೆ ವಯಸ್ಸಿನಲ್ಲಿ ಪ್ರೇಮವೆಂಬ ಬಲೆಗೆ ಸಿಲುಕಿ ಆ ಮೂಲಕ ಪ್ರೇಯಸಿಯೊಡನೆ ಕಾಲ ಕಳೆಯುತ್ತಿದ್ದ ಯುವಕನಿಗೆ ಜೀವನದ ಮೌಲ್ಯ ಅರಿವಾದಾಗ ಆತ ಯಾವ ರೀತಿಯಲ್ಲಿ ಸಫಲತೆ ಕಂಡುಕೊಳ್ಳುತ್ತಾನೆ ಎಂಬ ಕಥಾ ಹಂದರವನ್ನು ಈ ಚಿತ್ರ ಹೊಂದಿದೆ. ಕೆ.ಟಿ.ಎಂ. ಚಿತ್ರದಲ್ಲಿ ನಾಗಿಣಿ ಧಾರಾವಾಹಿಯಲ್ಲಿ ಗುರುತಿಸಿಕೊಂಡಿರುವ ಮಂಗಳೂರಿನ ದೀಕ್ಷಿತ್ ಶೆಟ್ಟಿ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ.
ನಟಿಯಾಗಿ ಕಾಜಲ್ ಕುಂದರ್ ತೆರೆಗೆ ಪರಿಚಯಿಸಿಕೊಳ್ಳುತ್ತಿದ್ದಾರೆ. ಅರುಣ್ ಅವರ ನಿದೇರ್ಶನದಲ್ಲಿ ತೆರೆ ಕಾಣಲಿರುವ ಈ ಚಿತ್ರದ ನಿರ್ಮಾಪಕ ವಿನಯ್, ಕೆಮರಾಮೆನ್ ನವೀನ್ ಆಗಿರುತ್ತಾರೆ. ಕೋಟೇಶ್ವರದ ಶ್ರೀದೇವಿ ಫ್ಯಾನ್ಸಿ ಸ್ಟೋರ್, ರಿûಾ ತಂಗುದಾಣ, ರಥಬೀದಿ, ಶ್ರೀಕೋಟಿಲಿಂಗೇಶ್ವರ ದೇಗುಲದ ಪರಿಸರ, ಪಟ್ಟಾಭಿ ರಾಮಚಂದ್ರ ದೇವಸ್ಥಾನದ ಆಸುಪಾಸು, ಬೀಜಾಡಿ ಹಾಗೂ ಕೋಡಿ ಕಡಲ ತಡಿಯಲ್ಲಿ ಪ್ರೇಮ ಗೀತೆಯ ಚಿತ್ರೀಕರಣ ಬಿರುಸಿನಿಂದ ನಡೆಯುತ್ತಿದೆ.
ಗ್ರಾಮಸ್ಥರಿಗೆ ಹೊಸ ಅನುಭವ
ಸಿನೆಮಾ ಶೂಟಿಂಗ್ ಬಗ್ಗೆ ಕುತುಹಲ ಹೊಂದಿರುವ ಕೋಟೇಶ್ವರ, ಬೀಜಾಡಿ, ಗೋಪಾಡಿಯ ಅನೇಕ ಚಿತ್ರ ಪ್ರೇಮಿಗಳು ಸಿನೇಮ ಚಿತ್ರೀಕರಣ ನೋಡಿ ಖುಷಿ ಪಟ್ಟರು.
ಸ್ಥಳೀಯರಾದ ಸುರೇಶ್ ಜೋಗಿ, ಶೈಲಜಾ ಸುರೇಶ್, ರಿಕ್ಷಾ ಮಾಲಕರಾದ ಪ್ರಭಾಕರ ಕುಂದರ್, ನಾಗರಾಜ ಲಾಲಿ, ಶಂಕರ ಪೂಜಾರಿ, ಶ್ರೀಧರ ಬಂಡಿಕಡು ಸಹಕರಿಸಿದರು.