ಮತ್ಸ್ಯ ಬೇಟೆಗೆ ಲಾಕ್ಡೌನ್ ವಿರಾಮ?
Team Udayavani, May 18, 2020, 5:27 AM IST
ಬೆಂಗಳೂರು: ಸುದೀರ್ಘ ಲಾಕ್ಡೌನ್ ಹಲವು ರೀತಿಯ ಅವಾಂತರ ಸೃಷ್ಟಿಸಿರಬಹುದು. ಬಹುತೇಕರು ಇದಕ್ಕೆ ಹಿಡಿಶಾಪವನ್ನೂ ಹಾಕುತ್ತಿರಬಹುದು. ಆದರೆ, ನಗರದ ಹೊರ ವಲಯಗಳಲ್ಲಿರುವ ಕೆರೆ-ಕುಂಟೆ, ನದಿಪಾತ್ರ ದಲ್ಲಿರುವ ಮೀನುಗಳ ಪಾಲಿಗೆ ಮಾತ್ರ ಈ ಅವಧಿ ಅಕ್ಷರಶಃ ಸ್ವರ್ಗ. ಕೆಲವೆಡೆ ಜಲ್ಲಿ ಕ್ರಷರ್, ಕಲ್ಲು ಗಣಿಗಾರಿಕೆ ಆಸುಪಾಸಿ ನಲ್ಲೇ ಮೀನುಗಳ ಸಾಕಾಣಿಕೆ ನಡೆದಿದೆ. ಅಲ್ಲಿ ಅಧಿಕ ಡೆಸಿಬಲ್ ಇರುವ ಡೈನಾಮೈಟ್ ಗಳನ್ನು ಸ್ಫೋಟಿಸುವುದ ರಿಂದ ಹೃದಯಾಘಾತ ದಿಂದ ಸಾವನ್ನಪ್ಪುತ್ತವೆ. ಅಥವಾ ಪ್ರಜ್ಞಾಹೀನ ಸ್ಥಿತಿ ತಲುಪುತ್ತವೆ. ಇನ್ನು ಕೆಲ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಹಳ್ಳ-ಕೊಳ್ಳ, ನದಿಪಾತ್ರ ಗಳಲ್ಲಿ ಡೈನಮೈಟ್ಗಳನ್ನು ಸ್ಫೋಟಿಸಿ ಮತ್ಸ್ಯಬೇಟೆ ನಡೆಸು ತ್ತಿದ್ದರು.
ಲಾಕ್ಡೌನ್ನಿಂದ ತಕ್ಕಮಟ್ಟಿಗೆ ಈ ಪ್ರಕ್ರಿಯೆಗೆ ಬ್ರೇಕ್ ಬಿದ್ದಿದ್ದು, ಪರೋಕ್ಷವಾಗಿ ಮೀನುಗಳು ನಿಶ್ಚಿಂತವಾಗಿರಲು ಪೂರಕ ವಾತಾವರಣ ಸೃಷ್ಟಿಸಿವೆ. ಮೀನುಗಾರಿಕೆ ಇಲಾಖೆಯಿಂದ ಗ್ರಾಪಂ ಕೆರೆ ಹಾಗೂ ನಿಗದಿತ ಮೀನು ಉತ್ಪಾದನಾ ಕೆರೆ ಅಥವಾ ಪಾಂಡ್, ಖಾಸಗಿ ಮೀನು ಸಾಕಾಣಿಕೆ ಕಲ್ಲು ಗಣಿಗಾರಿಕೆ ಮತ್ತು ಜಲ್ಲಿ ಕ್ರಷರ್ಗಳಿಂದ ಸಾಕಷ್ಟು ಸಮಸ್ಯೆಯಾಗು ತ್ತಿದ್ದವು. ಕಲ್ಲು ಗಣಿಗಾರಿಕೆಯಲ್ಲಿ ಬಳಸುವ ಸ್ಫೋಟಕ ದಿಂದ ಮೀನುಗಳು ಬೆಳವಣಿಗೆ ಪೂರ್ವದಲ್ಲೇ ಸಾಯುತ್ತಿದ್ದವು. ಈಗ ಕಲ್ಲು ಗಣಿಗಾರಿಕೆ ಕಡಿಮೆಯಾಗಿ ರುವು ದರಿಂದ ಬೆಂಗಳೂರಿನ ಹೊರವಲಯಗಳ ಮೀನು ಸಾಕಾಣಿಕೆದಾರಿಗೆ ಹೆಚ್ಚು ಅನುಕೂಲವಾಗಿದೆ ಎಂದು ಒಳನಾಡು ಮೀನು ಸಾಕಾಣಿಕೆದಾರ ಮಂಜುನಾಥ್ ಮಾಹಿತಿ ನೀಡಿದರು.
ಕೆರೆ ಅಥವಾ ಮೀನು ಸಾಕಾಣಿಕೆ ಹೊಂಡಗಳ ಗಾತ್ರಕ್ಕೆ ಅನುಗುಣವಾಗಿ ಕಾಟ್ಲಾ, ರೋಹು, ಮೃಗಾಲ್, ಸಾಮಾನ್ಯ ಗೆಂಡೆ, ಬೆಳ್ಳಿಗೆಂಡೆ, ಹುಲ್ಲುಗಂಡೆ ಮೊದಲಾದ ತಳಿಗಳ ಮೀನಿನ ಮರಿ ಬಿಡಲಾಗುತ್ತದೆ. ಕೆರೆ ಅಥವಾ ಕೊಳಗಳಿಗೆ ಬಿಡುವ ಮೀನಿನ ಮರಿಗಳು 3.5ರಿಂದ 4 ಸೆಂ.ಮೀ. ಇರುತ್ತವೆ. ಇನ್ನು ಕೆಲವು ಕೆರೆ, ಕೊಳಗಳಿಗೆ 7ರಿಂದ 8 ಸೆಂ.ಮೀ. ಉದ್ದದ ಮೀನಿನ ಮರಿ ಬಿಡಬೇಕಾಗುತ್ತದೆ. ಕೊಳದ ಸುತ್ತಲಿನ ಪ್ರದೇಶ ಪ್ರಶಾಂತವಾಗಿರಬೇಕು. ದೊಡ್ಡ ಶಬ್ಧ ಅಥವಾ ನೀರಿನಲ್ಲಿ ದೊಡ್ಡ ಪ್ರಮಾಣದ ಅಲೆಗಳು ಸದಾ ಉಂಟಾಗುತ್ತಿದ್ದರೆ, ಪ್ರತಿಕೂಲ ಪರಿಣಾಮ, ಬೆಳವಣಿಗೆ ಕುಗ್ಗಬಹುದು ಅಥವಾ ಸಾಯಲೂಬಹುದು.
ಈಗ ಲಾಕ್ಡೌನ್ನಿಂದ ಸಹಜವಾಗಿ ಮೀನುಗಳಿಗೆ ಅನುಕೂಲವಾಗಿದೆ ಎಂದು ಮೀನು ಗಾರಿಕೆ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು. ಕಲ್ಲುಕ್ವಾರಿ ಅಥವಾ ಕಲ್ಲುಗಣಿಗಾರಿಕೆಯಲ್ಲಿ ನಡೆಸುವ ಸ್ಫೋಟದಿಂದ ಸ್ವಾಭಾವಿಕ ಕೆರೆ ಆಥವಾ ಕೊಳದ ಮೀನುಗಳಿಗೆ ಅಷ್ಟೇನೂ ಪರಿಣಾಮ ಆಗದು. ರಾಸಾಯನಿಕ ನೀರು ಅಥವಾ ಪುಡಿ ಮೀನು ಸಾಕಾಣಿಕೆ ನೀರಿಗೆ ಸೇರದಂತೆ ಎಚ್ಚರ ವಹಿಸಬೇಕಾಗುತ್ತದೆ. ಜತೆಗೆ ಕಲ್ಲು ಗಣಿಗಾರಿಕೆ ಪ್ರದೇಶದಿಂದ ಕನಿಷ್ಠ 1ರಿಂದ 2 ಕಿ.ಮೀ. ದೂರದಲ್ಲಿ ಸಾಕಾಣಿಕೆ ಮಾಡುವುದು ಉತ್ತಮ ಎಂದು ಅಧಿಕಾರಿಯೊಬ್ಬರು ಸಲಹೆ ನೀಡಿದರು.
ಕ್ವಾರಿಯಲ್ಲೂ ಮೀನುಗಾರಿಕೆ: ಕಲ್ಲು ಗಣಿಗಾರಿಕೆ ಶಬ್ಧ ಕಡಿಮೆಯಾದಷ್ಟು ಮೀನು ಸಾಕಾಣಿಕೆದಾರರಿಗೆ ಅನುಕೂಲವಾಗುತ್ತದೆ. ಸರ್ಕಾರದ ಅನೇಕ ಯೋಜನೆ ಪಡೆದು ಒಳನಾಡು ಮೀನುಗಾರಿಕೆ ನಡೆಸುವವರಿಗೆ ಸ್ವಲ್ಪ ನಷ್ಟವಾದರೂ ತಡೆದುಕೊಳ್ಳುವ ಸಾಮರ್ಥ್ಯ ಇರುವುದಿಲ್ಲ. ಹೀಗಾಗಿ ಅಗತ್ಯ ಮುನ್ನೆಚ್ಚರಿಕೆ ಇರ ಬೇಕು ಎಂದು ಮೀನುಗಾರ ಇಲಾಖೆ ಮೀನು ಸಾಕಾಣಿಕೆ ವಿಭಾಗದ ಅಧಿಕಾರಿ ಯೊಬ್ಬರು ಮಾಹಿತಿ ನೀಡಿದರು.
ಎಲ್ಲೆಲ್ಲೆ ಹೆಚ್ಚು ಮೀನುಗಾರಿಕೆ?: ಶಿವಮೊಗ್ಗ ವಲಯದ ತೀರ್ಥಹಳ್ಳಿ ಶಿಕಾರಿಪುರ, ಭದ್ರಾವತಿ, ಶಿವಮೊಗ್ಗ, ಸಾಗರ, ಹೊನ್ನಾಳಿ, ಚೆನ್ನಗಿರಿ, ದಾವಣಗೆರೆ ಹರಿಹರ, ಜಗಳೂರು, ಚಿಕ್ಕಮಗಳೂರಿನಲ್ಲಿ ಒಳನಾಡು ಮೀನುಗಾರಿಕೆ ವ್ಯಾಪಕವಾಗಿ ನಡೆಯುತ್ತಿದೆ. ಅಲ್ಲದೆ, ಬೆಂಗಳೂರು ವಲಯದ ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಪೂರ್ವ, ಆನೇಕಲ್, ತಿಪಟೂರು, ಗುಬ್ಬಿ, ಬಳ್ಳಾರಿ ವಲಯದ ರಾಯಚೂರು, ಕೊಪ್ಪಳ, ಯಾದಗಿರಿ, ಬೀದರ್, ಬೆಳಗಾವಿ ವಲಯದ ರಾಮದುರ್ಗ, ಬೈಲಹೊಂಗಲ, ಶಿರಹಟ್ಟಿ, ಬದಾಮಿ, ಬಾಗಲಕೋಟೆ, ಹುನಗುಂದ, ಹಾವೇರಿ,ಸವಣೂರು, ಬ್ಯಾಡಗಿ, ಹಾನಗಲ್, ರಾಣೇಬೆನ್ನೂರು, ಹಿರೇಕೇರೂರು, ಮೈಸೂರು ವಲಯದ ಎಚ್.ಡಿ. ಕೋಟೆ, ರಾಮನಗರ, ಮಾಗಡಿ, ಕುಣಿಗಲ್, ಕನಕಪುರ, ಚಿಂತಾಮಣಿ, ಚಿಕ್ಕಬಳ್ಳಾಪುರ ಮೊದಲಾದ ಕಡೆಗಳಲ್ಲಿ ಕೆರೆ ಹಾಗೂ ಕೊಳಗಳಲ್ಲಿ ಮೀನು ಸಾಕಾಣಿಕೆ ವ್ಯಾಪಕವಾಗಿ ನಡೆಯುತ್ತಿದೆ ಎಂದು ಅಧಿಕಾರಿಯೊಬ್ಬರು ವಿವರ ನೀಡಿದರು.
ಹೆಚ್ಚೇನೂ ಸಮಸ್ಯೆ ಆಗಿಲ್ಲ: ಚನ್ನಪಟ್ಟಣ, ಮಾಗಡಿ, ಆನೇಕಲ್, ತಿಪಟೂರು, ಕುಣಿಗಲ್, ಚಿಂತಾಮಣಿ, ಮಳವಳ್ಳಿ, ಮದ್ದೂರು, ರಾಮನಗರ ಸಹಿತವಾಗಿ ಬೆಂಗಳೂರಿನ ಹೊರ ವಲಯದ ಜಿಲ್ಲೆಗಳಲ್ಲಿ ಕಲ್ಲು ಗಣಿಗಾರಿಕೆ, ಜಲ್ಲಿ ಕ್ರಷರ್ ಹೆಚ್ಚಿರುವುದರಿಂದ ಮೀನುಸಾಕಾಣಿಕೆ ದಾರಿಗೆ ಅನಾನುಕೂಲ ಆಗುತ್ತಿತ್ತು. ಈಗ ಸ್ವಲ್ಪ ಕಾಲದಿಂದ ಸ್ಫೋಟಕ ಬಳಕೆ ನಿಂತಿರುವುದರಿಂದ ಹೆಚ್ಚೇನು ಸಮಸ್ಯೆ ಆಗಿರಲಿಕ್ಕಿಲ್ಲ ಎಂದು ಅಧಿಕಾರಿಯೊಬ್ಬರು ವಿವರಿಸಿದರು.
ಕಲ್ಲು ಕ್ವಾರಿ ಅಥವಾ ಗಣಿಗಾರಿಕೆ ಸ್ಫೋಟದಿಂದ 500 ಮೀಟರ್ ಒಳಗಿರುವ ಮೀನಿನ ಹೊಂಡ ಅಥವಾ ಮೀನು ಸಾಕಾಣಿಕೆ ಕೆರೆಯಲ್ಲಿರುವ ಮೀನುಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ನಿರಂತರ ಶಬ್ಧ ಹಾಗೂ ತರಂಗಗಳು ಉಂಟಾಗುತ್ತಿದ್ದರೆ ಮೀನುಗಳು ಬದುಕುವ ಸಾಧ್ಯತೆ ತುಂಬಾ ಕಡಿಮೆ ಇರುತ್ತದೆ. ಇದರಿಂದ ಎಷ್ಟೇ ಆರೋಗ್ಯ ಪೂರ್ಣ ಮೀನು ಆದರೂ ಸಾಯುತ್ತವೆ.
-ಡಾ.ರಾಮಲಿಂಗ, ಮಿನುಗಾರಿಕೆ ಸಹಾಯಕ ನಿರ್ದೇಶಕ, ಹೆಸರುಘಟ್ಟ ಮೀನುಮರಿ ಉತ್ಪಾದನಾ ಮತ್ತು ಪಾಲನಾ ಕೇಂದ್ರ
* ರಾಜು ಖಾರ್ವಿ ಕೊಡೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Borewell: ಬರದ ಮಧ್ಯೆ ಜಲಮಂಡಳಿ ಕೊರೆಸಿದ ಶೇ.90 ಬೋರ್ಗಳು ಸಕ್ಸಸ್
KEA ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯಾ ವಿರುದ್ದ ತನಿಖೆಗೆ ಆಗ್ರಹ
Bengaluru: ವಿವಾಹಕ್ಕೆ ಒಪ್ಪದ ಮಹಿಳೆ ಮನೆಗೆ ಬೆಂಕಿ ಹಚ್ಚಿದ
Bengaluru: ವಿಮಾನ ಹಾರಾಟದ ವೇಳೆ ತುರ್ತು ಬಾಗಿಲು ತೆರೆಯಲು ಯತ್ನಿಸಿದ ಯುವಕ ಸೆರೆ
Bengaluru: ಠಾಣೆಯಲ್ಲೇ ಮಹಿಳಾ ಪಿಎಸ್ಐಗೆ ಕಪಾಳಮೋಕ್ಷ, ಪೊಲೀಸರ ಮೇಲೆ ಹಲ್ಲೆ