ಅಮ್ಮ ಕೊಡುತ್ತಿದ್ದ ಪಾಕೆಟ್ ಮನಿ ದಾನ ಮಾಡಿದ ಪುಟಾಣಿಗಳು!
Team Udayavani, Apr 17, 2020, 5:08 AM IST
ಬೆಳ್ತಂಗಡಿ: ಲಾಕ್ಡೌನ್ನಿಂದ ಅಗತ್ಯ ಸಾಮಗ್ರಿ ಖರೀದಿಸಲು ಸಂಕಷ್ಟಕ್ಕೊಳಗಾದವರಿಗೆ ನೆರವಾಗುವ ದೃಷ್ಟಿಯಿಂದ ರಚನೆಗೊಂಡ “ಹಸಿವು ಮುಕ್ತ ಗ್ರಾಮಕ್ಕಾಗಿ’ ಎಂಬ ವಾಟ್ಸ್ಆ್ಯಪ್ ಬಳಗಕ್ಕೆ ಪುಟಾಣಿಗಳಿಬ್ಬರು ತಮ್ಮ ಪಾಕೆಟ್ ಮನಿಯನ್ನು ನೀಡಿದ್ದಾರೆ.
ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಕರಂಬಾರು ಬೀಟ್ ಪೊಲೀಸರ ನೇತೃತ್ವ ದಲ್ಲಿ ಪಂಚಾಯತ್ ನೌಕರರು, ಗ್ರಾಮದ ಸಮಾನ ಮನಸ್ಕ ಯುವಕರು ದಾನಿಗಳ ನೆರವಿನಿಂದ ಹಸಿವು ಮುಕ್ತ ಗ್ರಾಮಕ್ಕಾಗಿ ಎಂಬ ವಾಟ್ಸ್ಆ್ಯಪ್ ತಂಡ ಕಟ್ಟಿದ್ದರು. ಇದರಿಂದ ಪ್ರೇರಿತರಾದ 6ನೇ ತರಗತಿಯ ನಿಜಾ, 2ನೇ ತರಗತಿಯ ಮೃದುಲಾ ಇಬ್ಬರೂ ಅಮ್ಮ ಕೊಡುತ್ತಿದ್ದ ಪಾಕೆಟ್ ಮನಿಯಲ್ಲಿ 500 ರೂ. ಉಳಿಸಿದ್ದು, ಅದನ್ನು ದೇಣಿಗೆ ನೀಡಿದ್ದಾರೆ. ಶಿರ್ಲಾಲು ಗ್ರಾಮದ ಆರೋಗ್ಯ ಸಹಾಯಕಿ ಜಯಲಕ್ಷ್ಮೀ ಅವರ ಮಕ್ಕಳಾದ ಈ ಇಬ್ಬರೂ ಬೆಳ್ತಂಗಡಿ ಚರ್ಚ್ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿದ್ದಾರೆ.