ನೀರಿನ ಅಭಾವಕ್ಕೆ ಆಧುನಿಕ ಕೃಷಿ ಕಾರಣ: ಗಜೇಂದ್ರ ಸಿಂಗ್
Team Udayavani, Mar 6, 2022, 6:25 AM IST
ಬೆಂಗಳೂರು: ಸಾಂಪ್ರದಾಯಿಕ ಕೃಷಿ ದೂರವಾಗಿ ಆಧುನಿಕ ಕೃಷಿ ಹತ್ತಿರವಾಗುತ್ತಿರುವುದು ನೀರಿನ ಅಭಾವಕ್ಕೆ ಮೂಲ ಕಾರಣವಾಗಿದೆ. ಈ ಬಗ್ಗೆ ನಾವು ಎಚ್ಚೆತ್ತುಕೊಳ್ಳದೆ ಹೋದರೆ ಮುಂದಿನ ದಿನದಲ್ಲಿ ನೀರಿಗಾಗಿ ಮೂರನೇ ಯುದ್ಧವೇ ನಡೆಯಲಿದೆ ಎಂದು ಕೇಂದ್ರ ಜಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಎಚ್ಚರಿಸಿದರು.
ಕನಕಪುರದಲ್ಲಿ ಶನಿವಾರ ಆಯೋಜಿಸಿದ್ದ ಕಿಸಾನ್ ಸಮೃದ್ಧಿ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಪೂರ್ವಿಕರು ನದಿ ಹಾಗೂ ಕೃಷಿಯಲ್ಲಿ ದೇವರನ್ನು ಕಾಣುತ್ತಿದ್ದರು. ಇಂದು ಆಧುನಿಕತೆಯ ಹೆಸರಿನಲ್ಲಿ ನೀರಿನ ಪಥ ಬದಲಾಯಿಸಿ ರೈತರ ಕೃಷಿಗೆ ನೀರು ನೀಡಲಾಗುತ್ತಿದೆ.
ರೈತರು ಅಕಾಲಿಕ ಬೆಳೆಯನ್ನು ಬೆಳೆಸಲು ಮುಂದಾಗುತ್ತಿದ್ದು, ನೀರಿನ ಬಳಕೆಯಲ್ಲಿ ಎಡವುತ್ತಿದ್ದಾರೆ. ಇದರಿಂದಾಗಿ ನೀರಿನ ಅಭಾವ ಎದುರಾಗಿದೆ. ಸಮಸ್ಯೆ ಹೀಗೇ ಮುಂದುವರಿದರೆ ಮುಂದಿನ 10 ವರ್ಷದೊಳಗೆ ನದಿ ಮೂಲಗಳು ಬತ್ತಿ ಹೋಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.