ಜ್ಞಾನವಾಪಿ ಮಸೀದಿಯಲ್ಲಿ ಸಿಕ್ಕಿದ್ದು ಶಿವಲಿಂಗವಲ್ಲ; ಅದು ಫೌಂಟನ್: ಮಸೀದಿಯ ಆಡಳಿತ ಮಂಡಳಿ ವಾದ
Team Udayavani, May 17, 2022, 10:03 AM IST
ವಾರಾಣಸಿ: ಮೂರು ದಿನಗಳ ಜ್ಞಾನವಾಪಿ ಮಸೀದಿ ಸಮೀಕ್ಷೆ ಸೋಮವಾರ ಮುಕ್ತಾಯಗೊಂಡ ನಂತರ, ಹಿಂದೂ ಪರ ವಕೀಲರು ಮಸೀದಿ ಸಂಕೀರ್ಣದ ವಝುಖಾನಾ ಅಥವಾ ಜಲಾಶಯದಲ್ಲಿ ಶಿವಲಿಂಗ ಕಂಡುಬಂದಿದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಈ ಕೊಳಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಮಸೀದಿ ಒಳಗಡೆ ಶಿವಲಿಂಗ ಪತ್ತೆಯಾಗಿದೆ ಎಂಬ ವಕೀಲರ ಹೇಳಿಕೆ ದೇಶಾದ್ಯತ ಸಂಚಲನಕ್ಕೆ ಕಾರಣವಾಗಿದೆ. ಇನ್ನೊಂದೆಡೆ ಮಸೀದಿಯ ಆಡಳಿತ ಮಂಡಳಿ, ಹಿಂದೂ ಅರ್ಜಿದಾರರ ಪರ ವಕೀಲರ ವಾದವನ್ನು ತಳ್ಳಿಹಾಕಿದ್ದಾರೆ. ಕೊಳದಲ್ಲಿ ಶಿವಲಿಂಗ ಪತ್ತೆಯಾಗಿಲ್ಲ. ಅಲ್ಲಿರುವುದು ಫೌಂಟನ್. ಇದನ್ನೇ ಅವರು ಶಿವಲಿಂಗ ಎಂದು ಅಂದುಕೊಂಡಿದ್ದಾರೆ ಎಂದಿದ್ದಾರೆ. ಹಾಗೆಯೇ, ಕೊಳಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿದ್ದನ್ನು ವಿರೋಧಿಸಿದ್ದಾರೆ.
ಏನಿದು ವಝುಖಾನ?
ವಝುಖಾನ ಎಂದರೆ ಕೊಳ. ಮಸೀದಿಯಲ್ಲಿ ನಮಾಜ್ ಮಾಡುವ ಮುನ್ನ ಕೈಕಾಲು ತೊಳೆದುಕೊಂಡು ಹೋಗುತ್ತಾರೆ. ಅಂದರೆ, ಇದೊಂದು ಶುದ್ಧೀಕರಣದ ಸ್ಥಳ. ಈಗ ಇಲ್ಲಿಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಜತೆಗೆ, ಈ ಜಾಗಕ್ಕೆ ಪೊಲೀಸರು ಮತ್ತು ಕೆಎಸ್ಆರ್ಪಿ ಸಿಬ್ಬಂದಿಯಿಂದ ಭದ್ರತೆ ನೀಡಬೇಕು ಎಂದೂ ಕೋರ್ಟ್ ಸೂಚನೆ ನೀಡಿದೆ.
ಇದನ್ನೂ ಓದಿ:ಮಾಜಿ ಕೇಂದ್ರ ಸಚಿವ ಚಿದಂಬರಂ ಆಸ್ತಿ ಮೇಲೆ ಸಿಬಿಐ ದಾಳಿ; ಪುತ್ರನ ವಿರುದ್ಧ ಹೊಸ ಕೇಸ್
ವಿವಾದದ ಸ್ಥಳ ಯಾವುದು?
ಕಾಶಿ ವಿಶ್ವನಾಥ ದೇಗುಲದ ಬಳಿಯಲ್ಲೇ ಈ ಜ್ಞಾನವಾಪಿ ಮಸೀದಿ-ಶೃಂಗಾರ ಗೌರಿ ಸಂಕೀರ್ಣ ಇದೆ. ಮಸೀದಿ ಹಿಂಭಾಗದಲ್ಲಿ ಹಿಂದೂ ದೇವತೆಗಳಿವೆ, ಇಲ್ಲಿ ಪೂಜೆಗೆ ಅವಕಾಶ ಮಾಡಿಕೊಡಬೇಕು ಎಂಬುದು ಐವರು ಮಹಿಳೆಯರ ಗುಂಪೊಂದರ ವಾದ. ಅಲ್ಲದೆ, ಕಾಣಿಸುವ ಅಥವಾ ಕಾಣಿಸದೇ ಇರುವ ಮೂರ್ತಿಗಳೂ ಇರಬೇಕು ಎಂದು ಅವರು ಅನುಮಾನಿಸಿದ್ದರು. ಇವರು ವರ್ಷಕ್ಕೂ ಹಿಂದೆಯೇ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ಮಸೀದಿಯೊಳಗೆ ವಿಡಿಯೋಗ್ರಫಿ ಮಾಡಬೇಕು ಎಂದು ಮನವಿ ಮಾಡಿದ್ದರು.