ಮಣಿಪುರದಲ್ಲಿ ಬಿಕ್ಕಟ್ಟು? ಸಚಿವ ರಾಜೀನಾಮೆ
Team Udayavani, Apr 16, 2017, 12:47 PM IST
ಇಂಫಾಲ್: ಈಶಾನ್ಯ ರಾಜ್ಯ ಮಣಿಪುರದಲ್ಲಿ ಅಧಿಕಾರಕ್ಕೇರಿ ಒಂದು ತಿಂಗಳಲ್ಲೇ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ನೇತೃತ್ವದ ಮೈತ್ರಿ ಸರಕಾರದಲ್ಲಿ ಬಿಕ್ಕಟ್ಟು ಕಾಣಿಸಿಕೊಂಡಿದೆ. ಮುಖ್ಯಮಂತ್ರಿ ಹಸ್ತಕ್ಷೇಪ ನಡೆಸುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ, ಡಿಸಿಎಂ ಎಲ್.ಜಯಂತ ಕುಮಾರ್ ಸಿಂಗ್ ರಾಜೀನಾಮೆ ನೀಡಿದ್ದಾರೆ.
ಮಣಿಪುರ ಆರೋಗ್ಯ ಸೇವೆಗಳ ನಿರ್ದೇಶಕರನ್ನು ವಜಾಗೊಳಿಸುವುದಕ್ಕೂ ಮುನ್ನ ಸಿಎಂ ತಮ್ಮನ್ನು ಸಂಪರ್ಕಿಸಿಲ್ಲ ಎನ್ನುವುದು ಸಚಿವ ಜಯಂತ ಕುಮಾರ್ ಆರೋಪ. ಸಿಎಂ ನಡೆಸಿದ ಕ್ರಮ ನೇರವಾಗಿ ತಮ್ಮ ಇಲಾಖೆಯಲ್ಲಿ ನಡೆಸಿದ ಹಸ್ತಕ್ಷೇಪ ಎಂದು ಬಿರೇನ್ ಸಿಂಗ್ಗೆ ಬರೆದ ಪತ್ರದಲ್ಲಿ ಆರೋಪಿಸಿದ್ದಾರೆ.
ಈ ಬೆಳವಣಿಗೆಯಿಂದಾಗಿ ಕಂಗೆಟ್ಟಿರುವ ಸಿಎಂ ಶನಿವಾರ ಹೊಸದಿಲ್ಲಿಗೆ ದೌಡಾಯಿಸಿದ್ದಾರೆ. ಬಿಜೆಪಿ ಅಧ್ಯಕ್ಷ ಶಾ ಮತ್ತು ಪ್ರಧಾನಿ ಮೋದಿ ಜತೆ ಮಾತುಕತೆ ನಡೆಸಿದ್ದಾರೆ. ಆರೋಗ್ಯ ಸೇವೆಗಳ ನಿರ್ದೇಶಕ, ನಿಕಟಪೂರ್ವ ಸಿಎಂ ಒಕ್ರಂ ಇಬೊಬಿ ಸಿಂಗ್ ಸಂಬಂಧಿಯಾಗಿದ್ದಾರೆ. ಡಿಸಿಎಂ ರಾಜೀನಾಮೆ ಯಿಂದ ನಾಗಾ ಪೀಪಲ್ಸ್ ಪಾರ್ಟಿ ಕೂಡ ಅತೃಪ್ತಿಗೊಂಡಿದೆ.