ಮೀಸಲಾತಿ ಕಿತ್ತು ಹಾಕುವ ಹಕ್ಕು ಯಾರಿಗೂ ಇಲ್ಲ; ಬಿಹಾರ ಸಿಎಂ ನಿತೀಶ್
Team Udayavani, Nov 1, 2018, 4:22 PM IST
ಗಯಾ : ”ದಮನಕ್ಕೆ, ತುಳಿತಕ್ಕೆ ಒಳಗಾದವರಿಗೆ ಇರುವ ಮೀಸಲಾತಿಯನ್ನು ತೆಗೆದು ಹಾಕುವ ಹಕ್ಕು ಯಾರೊಬ್ಬರಿಗೂ ಅಲ್ಲ; ಮೀಸಲಾತಿಯನ್ನು ತೆಗೆದು ಹಾಕುವುದಾಗಿ ಹೇಳುವವರು ಸಮಾಜದಲ್ಲಿ ಉದ್ರಿಕ್ತತೆ ಸೃಷ್ಟಿಯಾಗುವುದನ್ನು ಮಾತ್ರವೇ ಬಯಸುತ್ತಾರೆ” ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.
ತಮ್ಮ ಜೆಡಿಯು ಪಕ್ಷವು ಮಗಧ ಪ್ರಾಂತ್ಯದಲ್ಲಿನ ಪಕ್ಷದ ಎಸ್ಸಿ/ಎಸ್ಟಿ ಕಾರ್ಯಕರ್ತರಿಗಾಗಿ ಏರ್ಪಡಿಸಿದ್ದ ಸಮಾವೇಶದಲ್ಲಿ ನೀತಿಶ್ ಕುಮಾರ್ ಮಾತನಾಡುತ್ತಿದ್ದರು.
“ಕೆಲವು ವ್ಯಕ್ತಿಗಳು ಸಮಾಜದಲ್ಲಿ ಉದ್ರಿಕ್ತತೆಯನ್ನು ಸೃಷ್ಟಿಸುವ ಸಲುವಾಗಿ ಮೀಸಲಾತಿಯನ್ನು ತೆಗೆದು ಹಾಕುವ ಮಾತುಗಳನ್ನು ಆಡುತ್ತಾರೆ. ಅಂಬೇಡ್ಕರ್ ಅವರು ಸಿದ್ಧಪಡಿಸಿದ್ದ ಸಂವಿಧಾನದ ಕರಡನ್ನು ಸಂವಿಧಾನ ಸಭೆಯು ಅನುಮೋದಿಸಿದೆ. ಸಂವಿಧಾನದಲ್ಲಿ ಮೀಸಲಾತಿ ಸೌಲಭ್ಯವನ್ನು ದಮನಕ್ಕೆ ಮತ್ತು ತುಳಿತಕ್ಕೆ ಒಳಗಾದ ಜನರು ಸಾಮಾಜಿಕ ಮುಖ್ಯ ವಾಹಿನಿಯನ್ನು ಸೇರಿಕೊಳ್ಳುವುದಕ್ಕಾಗಿ ಕಲ್ಪಿಸಲಾಗಿದೆ’ ಎಂದು ಸಿಎಂ ನಿತೀಶ್ ಹೇಳಿದರು.