ರಾಮ ಮಂದಿರಕ್ಕೆ ಕಾನೂನು ಜಾರಿ ಮಾಡಿ
Team Udayavani, Nov 1, 2018, 7:55 AM IST
ಮುಂಬಯಿ: ಸುಪ್ರೀಂಕೋರ್ಟ್ಗೆ 1994ರಲ್ಲಿ ಕಾಂಗ್ರೆಸ್ ನೀಡಿದ ಭರವಸೆಯನ್ನು ಪೂರೈಸಿ ಎಂದು ಕೇಂದ್ರ ಸರಕಾರವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಬುಧವಾರ ಆಗ್ರಹಿಸಿದೆ. ಬಾಬ್ರಿ ಮಸೀದಿ ನಿರ್ಮಾಣ ಮಾಡಿದ ಸ್ಥಳದಲ್ಲಿ ರಾಮ ಮಂದಿರವಿತ್ತು ಎಂಬ ಬಗ್ಗೆ ಸಾಕ್ಷ್ಯವಿದ್ದರೆ, ಹಿಂದೂ ಸಮುದಾಯವನ್ನು ಬೆಂಬಲಿಸಲು ಸಿದ್ಧವಿದ್ದೇವೆ ಎಂದು 1994ರಲ್ಲಿ ಸುಪ್ರೀಂ ಕೋರ್ಟ್ನಲ್ಲಿ ಕಾಂಗ್ರೆಸ್ ಸರಕಾರ ಭರವಸೆ ನೀಡಿತ್ತು. ಹೀಗಾಗಿ ಇದಕ್ಕೆ ಈಗಿನ ಕೇಂದ್ರ ಸರಕಾರ ಬದ್ಧವಾಗಬೇಕು ಎಂದು ಆರೆಸ್ಸೆಸ್ ಸಹಸರಕಾರ್ಯವಾಹ ಮನೋಹನ ವೈದ್ಯ ಹೇಳಿದ್ದಾರೆ. ಅಲ್ಲದೆ, ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿ ಕಾನೂನು ರೂಪಿಸುವಂತೆಯೂ ಅವರು ಸರಕಾರಕ್ಕೆ ಆಗ್ರಹಿಸಿದ್ದಾರೆ.
ವಿವಾದಕ್ಕೆ ಸಂಬಂಧಿಸಿದಂತೆ ವಿಚಾರಣೆಯನ್ನು ಜನವರಿಯಿಂದ ನಡೆಸಲು ಸುಪ್ರೀಂ ಕೋರ್ಟ್ ನಿರ್ಧರಿಸಿದ್ದರಿಂದಾಗಿ, ಲೋಕಸಭೆ ಚುನಾವಣೆಗೂ ಮುನ್ನ ರಾಮಮಂದಿರ ನಿರ್ಮಾಣದ ವಿಚಾರದಲ್ಲಿ ಕ್ರಮ ಕೈಗೊಳ್ಳುವಂತೆ ಹಿಂದೂ ಸಂಘಟನೆಗಳು ಸರಕಾರವನ್ನು ಆಗ್ರಹಿಸಿವೆ.