ದುಬಾರಿ ಮದುವೆಗೆ ಈಗ ಸಂಸತ್ತಿನಿಂದಲೇ ಬ್ರೇಕ್?
Team Udayavani, Feb 16, 2017, 3:45 AM IST
ನವದೆಹಲಿ: ದುಬಾರಿ ಮದುವೆಗಳ ವಿರುದ್ಧ ಕಾಯ್ದೆ ತರಲು ಈ ಹಿಂದೆ ಕರ್ನಾಟಕ ಸರ್ಕಾರ ಪ್ರಯತ್ನ ಮಾಡಿತ್ತು. ಇದೀಗ ಸಂಸತ್ತಲ್ಲೇ ಇಂತಹುದೇ ಪ್ರಯತ್ನ ನಡೆದಿದ್ದು, ಮಸೂದೆ ಮಂಡಿಸುವ ಪ್ರಯತ್ನ ನಡೆಸಲಾಗುತ್ತಿದೆ. ಒಂದು ವೇಳೆ ಇದು ಕಾರ್ಯರೂಪಕ್ಕೆ ಬಂದಿದ್ದೇ ಅದ್ಧೂರಿ ಮದುವೆಗಳಿಗೆ ಬ್ರೇಕ್ ಬೀಳಲಿದೆ. ಸರ್ಕಾರ ನಿರ್ದೇಶನದನ್ವಯವೇ ಮದುವೆಗಳು ನಡೆಯಲಿವೆ! ಸಂಸದ ಪಪ್ಪು ಯಾದವ್ ಅವರ ಪತ್ನಿ, ಸಂಸದೆ ರಂಜೀತ್ ರಂಜನ್ ಅವರು ದುಬಾರಿ ವಿವಾಹ ವಿರುದ್ಧ ಖಾಸಗಿ ಮಸೂದೆಯನ್ನು ಮಂಡಿಸಿದ್ದಾರೆ. ಮುಂದಿನ ಲೋಕಸಭೆ ಕಲಾಪದ ವೇಳೆಗೆ ವಿವಾಹ (ಕಡ್ಡಾಯ ನೋಂದಣಿ ಮತ್ತು ದುಂದುವೆಚ್ಚ ನಿಯಂತ್ರಣ )ಮಸೂದೆ 2016 ಮಂಡನೆಯಾಗುವ ನಿರೀಕ್ಷೆ ಇದೆ.
“ಬಡವರ ಮೇಲೆ ಒತ್ತಡ’: ವಿವಾಹದ ಹೆಸರಲ್ಲಿ ಅನಗತ್ಯ ದುಂದುವೆಚ್ಚವನ್ನು ತಡೆಯಲು ಈ ಮಸೂದೆ ನೆರವಾಗಲಿದೆ ಎಂದು ರಂಜೀತ್ ಹೇಳಿದ್ದಾರೆ. “ವಿವಾಹ ಇಬ್ಬರನ್ನೂ ಒಂದು ಸೇರಿಸುವ ಒಂದು ಮಹತ್ವದ ಕಾರ್ಯಕ್ರಮ. ಆದರೆ ಇಂದಿನ ದಿನಗಳಲ್ಲಿ ವಿವಾಹ ತಮ್ಮ ಸಂಪತ್ತನ್ನು, ಅದ್ಧೂರಿತನವನ್ನು ಸಮಾಜದೆದುರು ಪ್ರದರ್ಶಿಸಲು ಇರಲು ಒಂದು ಕಾರಣವಾಗುತ್ತಿದೆ ಎಂದು ಅವರು ಹೇಳಿದ್ದಾರೆ. “ವಿವಾಹಗಳು ಸಂಪತ್ತಿನ ಪ್ರದರ್ಶನದ ಕಾರ್ಯಕ್ರಮಗಳಾಗುತ್ತಿರುವುದರಿಂದ ಬಡ ಕುಟುಂಬಗಳು ವಿಪರೀತ ಖರ್ಚು ಮಾಡುವಂತೆ ಒತ್ತಡ ಬೀಳುತ್ತಿದೆ.
ಆದ್ದರಿಂದ 5 ಲಕ್ಷ ರೂ. ಖರ್ಚು ಮಾಡುವವರು ಮೊತ್ತದ ಶೇ.10ರಷ್ಟನ್ನು ಬಡ ಕುಟುಂಬದ ಹೆಣ್ಮಕ್ಕಳ ವಿವಾಹಕ್ಕೆ ಉಪಯೋಗಿಸುವಂತೆ ಮಾಡಬೇಕು. ಇದಕ್ಕಾಗಿ ಸರ್ಕಾರ ಪ್ರತ್ಯೇಕ ನಿಧಿಯೊಂದನ್ನು ಸ್ಥಾಪಿಸಿ ಕ್ರಮಕೈಗೊಳ್ಳಬೇಕು’ ಎಂದು ರಂಜೀತ್ ಹೇಳಿದ್ದಾರೆ.
ಮಸೂದೆಯಲ್ಲಿ ಏನಿದೆ?: ಮಸೂದೆ ಪ್ರಕಾರ, 5 ಲಕ್ಷ ರೂ. ಮೀರಿ ವಿವಾಹಕ್ಕೆ ಖರ್ಚು ಮಾಡಿದರೆ, ಅದರ ಶೇ.10ರಷ್ಟು ಹವನ್ನು ಬಡ ಕುಟುಂಬದ ಹೆಣ್ಣುಮಕ್ಕಳ ವಿವಾಹಕ್ಕೆ ದೇಣಿಗೆಯಾಗಿ ನೀಡಬೇಕು. ಜೊತೆಗೆ ವಿವಾಹವಾದ 60 ದಿನಗಳ ಒಳಗೆ ಕಡ್ಡಾಯ ನೋಂದಣಿ ಅಗತ್ಯ. ಇದರೊಂದಿಗೆ ಅತಿಥಿಗಳ ಸಂಖ್ಯೆ, ಮದುವೆ ಭೋಜನದ ಕುರಿತಾಗಿ ಸರ್ಕಾರ ನಿರ್ದೇಶನ ನೀಡುವ ಬಗ್ಗೆ ಹೇಳಲಾಗಿದೆ.