ಯಮುನೆ ಸರಿಪಡಿಸಲು ಕನಿಷ್ಠ 10 ವರ್ಷ ಬೇಕು!
Team Udayavani, Apr 13, 2017, 10:51 AM IST
ನವದೆಹಲಿ: ಕಳೆದ ವರ್ಷ ಯಮುನಾ ನದಿ ದಂಡೆಯಲ್ಲಿ ಶ್ರೀ ಶ್ರೀ ರವಿಶಂಕರ ಗುರೂಜಿ ಅವರ ಆರ್ಟ್ಆಫ್ ಲಿವಿಂಗ್ ಆಯೋಜಿಸಿದ್ದ ವಿಶ್ವ ಸಂಸ್ಕೃತಿ ಉತ್ಸವದಿಂದ ನದಿಯ ಭೌತಿಕ ಪಾತ್ರ ಮತ್ತು ನೀರ ಹರಿವಿಗೆ ತೊಂದರೆಯಾಗಿದೆ. ಅದನ್ನು ಸರಿಪಡಿಸಲು 42.02 ಕೋಟಿ ರೂ. ಬೇಕು. ಜತೆಗೆ ಕನಿಷ್ಠ 10 ವರ್ಷ ಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಾಕರಣ ರಚಿಸಿದ ಸಮಿತಿ ಹೇಳಿದೆ.
ಕೇಂದ್ರ ಜಲಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿ ಶಶಿಶೇಖರ್ ನೇತೃತ್ವದ ತಜ್ಞರ ಸಮಿತಿ ಸಲ್ಲಿಸಿರುವ 31
ಪುಟಗಳ ವರದಿಯಲ್ಲಿ ಹೇಳಲಾಗಿದೆ. ಈ ಬಗ್ಗೆ 7 ಮಂದಿ ತಜ್ಞರ ಸಮಿತಿ, ಮಾಡಬೇಕಾದ ಕಾರ್ಯ ಮತ್ತು ಅದರ ಅವಧಿ ಬಗ್ಗೆಯೂ ಹೇಳಿದೆ. ಆ ಪ್ರಕಾರ, ಭೌತಿಕವಾಗಿ ನದಿ ದಂಡೆ ಸರಿಪಡಿಸುವ ಕೆಲಸ ಕೂಡಲೇ ಆಗಬೇಕಿದ್ದು, 2 ವರ್ಷದೊಳಗೆ ಮುಕ್ತಾಯಗೊಳಿ ಸಬೇಕು. ಜೊತೆಗೆ ಜೈವಿಕವಾಗಿ ಪುನಃ ಸ್ಥಾಪನೆ ಕೆಲಸವನ್ನೂ ಕೈಗೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟಿದೆ.
ವರದಿ ಪೂರ್ವಗ್ರಹದ್ದು: ಎನ್ಜಿಟಿಗೆ ಸಲ್ಲಿಸಿದ ವರದಿ ಪೂರ್ವಗ್ರಹದ್ದು ಎಂದು ಆರ್ಟ್ ಆಫ್ ಲಿವಿಂಗ್ ಹೇಳಿದೆ. ನಮ್ಮದು ಪರಿಸರದ ಬಗ್ಗೆ ಕಾಳಜಿ ಹೊಂದಿರುವ ಸರ್ಕಾರೇತರ ಸಂಘಟನೆ. ನಾವು ಪರಿಸರಕ್ಕೆ ಎಲ್ಲಿಯೂ ಹಾನಿ ಮಾಡಿಲ್ಲ. ಹಲವು ವರ್ಷಗಳಿಂದ ಪರಿಸರಕ್ಕೆ ಪೂರಕವಾದ ಯೋಜನೆಗಳನ್ನು ಹಮ್ಮಿಕೊಂಡಿದ್ದೇವೆ ಎಂದಿದೆ.