ಗೋರೆಗಾಂವ್ ಕರ್ನಾಟಕ ಸಂಘದ 59ನೇ ವಾರ್ಷಿಕ ನಾಡಹಬ್ಬ
Team Udayavani, Feb 14, 2017, 12:31 PM IST
ಮುಂಬಯಿ: ಗೋರೆಗಾಂವ್ ಕರ್ನಾಟಕ ಸಂಘವು ವಿಶೇಷ ರಚನಾತ್ಮಕ ಸಂಘಟನೆ. ಅತ್ಯಂತ ಕ್ರೀಯಾಶೀಲವಾದ ಈ ಸಂಘ ಮಹಾನಗರದಲ್ಲಿನ ಅನೇಕ ಮಾದರಿ ಸಂಘಯಾಗಿದೆ. ಜೀವನದಲ್ಲಿ ಸಂಘಗಳಿಂದ ಬಹಳಷ್ಟು ಅನುಭವ ಪಡೆಯಬಹುದು. ಪ್ರಸಕ್ತ ಸಂಘ ಸಂಸ್ಥೆಗಳಲ್ಲಿ ಹಳೆಯ ಸೇವಾನುಭವ ಕಾಣುತ್ತಿಲ್ಲ. ಹೆಚ್ಚಿನ ಸಂಘ-ಸಂಸ್ಥೆಗಳಲ್ಲಿ ಪ್ರಚಾರಕ್ಕಾಗಿ, ವೈಯಕ್ತಿಕ ವ್ಯಾಮೋಹಕ್ಕಾಗಿ ಸಂಘಟನೆಗಳನ್ನು ಬಳಸಿಕೊಳ್ಳುವುದು ವಿಷಾಧನೀಯ. ಸಂಘ ಸಂಸ್ಥೆಗಳ ಸೇವೆ ನಿಷ್ಕಲ್ಮಶವಾಗಿರಬೇಕು. ಅಂತಹ ಸೇವಾ ಯಜ್ಞಭಾವದಿಂದ ಮಾತ್ರ ಫಲಪ್ರದ ಕರ್ಮಸಿದ್ಧಿ ಆಗುವುದು. ಪೂಜೆಗಿಂತ ಜನಸೇವೆಯೇ ದೇವರಿಗೆ ಸಲ್ಲುವ ಪರಮ ಪೂಜೆಯಾಗಿದ್ದು, ಅಂತಹ ಸ್ಥಾನಮಾನಕ್ಕೆ ಪಾತ್ರವಾದ ಈ ಸಂಘವು ಸಾಂಪ್ರದಾಯಿಕವಾಗಿ ಮುನ್ನಡೆಯಲಿ ಎಂದು ಸೇವಾ ಭಾರತಿ ಮುಂಬಯಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಜಯ ಕೆ. ಶೆಟ್ಟಿ ಮುಲುಂಡ್ ತಿಳಿಸಿದರು.
ಫೆ. 12ರಂದು ಬೆಳಗ್ಗೆ ಗೋರೆಗಾಂವ್ ಕರ್ನಾಟಕ ಸಂಘವು ಮಲಾಡ್ ಪಶ್ಚಿಮ ಬಜಾಜ್ ಸಭಾಗೃಹದಲ್ಲಿ ಆಯೋಜಿಸಿದ್ದ 59ನೇ ನಾಡಹಬ್ಬ ಉದ್ಘಾಟಿಸಿ ಅವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ನಡೆದ ವರ್ತಮಾನ ಭಾರತ ಎಂಬ ವಿಷಯದ ಮೇಲೆ ಸಾಹಿತ್ಯ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ನ್ಯಾಯವಾದಿ ಪ್ರಕಾಶ್ ಎಲ್. ಶೆಟ್ಟಿ ಅವರು, ದೇಶ ಯಾವಾಗ ಭ್ರಷ್ಟಾಚಾರದಿಂದ ಮುಕ್ತವಾಗುತ್ತದೆಯೋ ಅಂದೇ ದೇಶ ಪ್ರಗತಿ ಪಥದಿಂದ ಸಾಗುವುದು. ಭ್ರಷ್ಟಾಚಾರ ಮುಕ್ತ ಭಾರತ ಕಾಣಬೇಕಾದರೆ ಯುವ ಜನಾಂಗಕ್ಕೆ ಸಾಮಾಜಿಕ ಮೌಲ್ಯಗಳನ್ನು ತಿಳಿಸಬೇಕಾಗುತ್ತದೆ. ಇತ್ತೀಚೆಗೆ ನಮ್ಮ ನಡೆದ ಅಪನಗಧಿಕರಣದಿಂದ ರಾಜಕಾರಣಿಗಳಿಗೆ ಮಾತ್ರ ಕಷ್ಟವಾಗಿದೆ ಹೊರತು ಜನಸಾಮಾನ್ಯರಿಗೆ ಕಷ್ಟವಾಗಿಲ್ಲ. ಭೂಮಸೂದೆ ನೀತಿ ಬಂದಾಗ ಹಲವಾರು ಮಂದಿ ಮನೆಮಠಗಳನ್ನು ಕಳೆದು ಕೊಂಡವರಿದ್ದಾರೆ. ಆವಾಗ ಯಾರು ಆದನ್ನು ವಿರೋಧಿಸಿಲ್ಲ. ಆ ಸಮಯದಲ್ಲಿ ನಿಜವಾಗಿ ಕಷ್ಟವಾಗಿತ್ತು. ಈ ಎರಡೂ ಕಾನೂನುಗಳು ಒಳ್ಳೆಯದ್ದಾಗಿತ್ತು ಎಂದು ಹೇಳಿದರು.
ಸಂಘದ ಅಧ್ಯಕ್ಷ ದೇವಲ್ಕುಂದ ಭಾಸ್ಕರ್ ಶೆಟ್ಟಿ ಪ್ರಾಸ್ತವಿಕ ಮಾತನಾಡಿ, 1958 ರಲ್ಲಿ ಮುಳೂರು ಸಂಜೀವ ಶೆಟ್ಟಿ ಅವರ ನೇತೃತ್ವದಲ್ಲಿ ಸ್ಥಾಪನೆಗೊಂಡ ಈ ಸಂಘವು ಕ್ರೀಯಾಶಿಲ ಚಟುವಟಿಕೆಗಳಿಂದ ಕರ್ತವ್ಯ ಪೂರೈಸಿ ಅಂಬೆಗಾಲಿಡುತ್ತ ಸಾಗಿ, ಯೌವ್ವನದ ಮಹತ್ತರ ಘಟ್ಟ ದಾಟಿ ಇದೀಗ 60ರ ಹರೆಯದ ಉತ್ಸಾಹಕ್ಕೆ ಸಜ್ಜುಗೊಳ್ಳುತ್ತಿದೆ. ಸಂಘದ ವೈಶಿಷ್ಟವೇನೆಂದರೆ ಜಾತಿಯವಾಗಿ ಅಲ್ಲ ನೀತಿಯ ಸಂಸ್ಥೆಯಾಗಿ ಬೆಳೆದಿದೆ. ರಾಜಕೀಯದ ಸುನಾಮಿಯಿಲ್ಲದೆ, ವೈಮನಸ್ಸಿಲ್ಲದೆ ನಿಸ್ವಾರ್ಥ ಸೇವೆಯ ಸಂಘವೆಂದೇ ಗುರುತಿಸಿಕೊಂಡಿದೆ. ಮುಂಬಯಿ ಯಲ್ಲಿನ ಮಾದರಿ ಸಂಘಗಳಲ್ಲಿ ಒಂದಾಗಿ ಮುಂಚೂಣಿ ಯಲ್ಲಿದೆ ಎನ್ನಲೂ ಹೆಮ್ಮೆ ಪಡುತ್ತೇವೆ ಎಂದರು.
ಗೋಷ್ಠಿಯಲ್ಲಿ ಭಾರತ್ ಬ್ಯಾಂಕ್ನ ಉಪ ಕಾರ್ಯಾಧ್ಯಕ್ಷೆ ನ್ಯಾಯವಾದಿ ರೋಹಿಣಿ ಜೆ. ಸಾಲ್ಯಾನ್ ಅವರು “ನ್ಯಾಯಾಂಗದ ಔನ್ನತ್ಯ’ ವಿಚಾರವಾಗಿ ಮತ್ತು ಪ್ರಶಸ್ತಿ ಪುರಸ್ಕೃತ ರಂಗತಜ್ಞ ಡಾ| ಭರತ್ಕುಮಾರ್ ಪೊಲಿಪು “ಯುವ ಜನಾಂಗದ ದಿಕ್ಕು ದೆಸೆ’ ಬಗ್ಗೆ ಉಪನ್ಯಾಸ ನೀಡಿದರು.
ಸಂಘದ ಪಾರುಪತ್ಯಗಾರರುಗಳಾದ ರವಿ ರಾ. ಅಂಚನ್, ಮುಂಡ್ಕೂರು ಸುರೇಂದ್ರ ಸಾಲಾನ್, ಸಂಘದ ಮಾಜಿ ಅಧ್ಯಕ್ಷರುಗಳಾದ ವಿ. ಪಿ. ಕೋಟ್ಯಾನ್, ಶಕುಂತಳಾ ಆರ್. ಪ್ರಭು, ಎಸ್. ಎಂ. ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಸಂಘವು ವಾರ್ಷಿಕವಾಗಿ ಸ್ಥಳಿಯ ಮುನ್ಸಿಪಾಲಿಟಿ ಶಾಲಾ ಮಕ್ಕಳಿಗೆ ಹಾಗೂ ಸಂಘದ ಸದಸ್ಯರ ಮಕ್ಕಳಿಗೆ ಪ್ರದಾನಿಸುವ ವಿದ್ಯಾರ್ಥಿಗಳ ಆರ್ಥಿಕ ನೆರವನ್ನು ಅತಿಥಿಗಳು ಹಸ್ತಾಂತರಿಸಿ ಶುಭಾರೈಸಿದರು. ಭಾಸ್ಕರ ಟಿ. ಅಮೀನ್, ಪದ್ಮಜಾ ಮಣ್ಣೂರು, ಲಕ್ಷಿ¾à ಆರ್. ಶೆಟ್ಟಿ, ವಿದ್ಯಾ ದೇಶಪಾಂಡೆ, ಸಚ್ಚೀಂದ್ರ ಕೆ. ಕೋಟ್ಯಾನ್, ಗುಣೋದಯ ಎಸ್. ಐಲ್, ಸುಗುಣಾ ಎಸ್. ಬಂಗೇರ ಮತ್ತಿತರರು ಅತಿಥಿಗಳನ್ನು, ಕಲಾವಿದರುಗಳನ್ನು ಗೌರವಿಸಿದರು.
ಸೀಮಾ ಕುಲ್ಕರ್ಣಿ, ವೇದ ಶೆಟ್ಟಿ ಮತ್ತು ಶಾಂತಾ ಶೆಟ್ಟಿ ಪ್ರಾರ್ಥನೆಗೈದರು. ವಸಂತಿ ಕೋಟೆಕರ್, ಮೋಹಿನಿ ಎಲ್. ಪೂಜಾರಿ ಮತ್ತು ವೇದಾ ಸುವರ್ಣ ಸ್ವಾಗತ ಗೀತೆ ಹಾಡಿದರು. ಸಂಘದ ಉಪ ವಿಭಾಗಗಳ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಶಿವಾನಂದ ಶೆಟ್ಟಿ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿದರು. ವಿಶಾಲಾಕ್ಷಿ ವೂಲವಾರ, ಮೀನಾ ಬಿ. ಕಾಳಾವರ್, ಸುಜಾತಾ ಪೂಜಾರಿ ಮತ್ತು ವಸಂತಿ ಕೋಟೆಕರ್ ಅತಿಥಿಗಳನ್ನು ಪರಿಚಯಿಸಿದರು. ಸಂಘದ ಗೌರವ ಕೋಶಾಧಿಕಾರಿ ನಾರಾಯಣ ಆರ್. ಮೆಂಡನ್, ಸಂಘದ ಮಾಜಿ ಅಧ್ಯಕ್ಷರುಗಳಾದ ಜಿ. ಟಿ. ಆಚಾರ್ಯ, ಪಯ್ನಾರು ರಮೇಶ್ ಶೆಟ್ಟಿ, ಸುಮಿತ್ರಾ ಗುಜರನ್ ಅತಿಥಿಗಳಿಗೆ ಸ್ಮರಣಿಕೆಗಳನ್ನಿತ್ತು ಗೌರವಿಸಿದರು. ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಜಯಕರ ಡಿ. ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು.
ಇದ್ದದ್ದನ್ನು ಇದ್ದಂತೆ ಹೇಳಿದರೆ ಕೆಂಡದಂತೆ ಕೋಪಿಸುವ ಜನರಿಗೆ ನ್ಯಾಯಾಂಗದ ಅರಿವು ಇರಬೇಕು. ದೇಶದ ಪ್ರಜೆಗಳಿಗೆ ಸ್ವಾತಂತ್ರÂ ಧಕ್ಕಿಸಿ ನಮಗೋಸ್ಕರ ಜನತೆಯ ಅಶೋತ್ತರಗಳಿಗಾಗಿ ಸಂವಿಧಾನ ರಚಿಸಲ್ಪಟ್ಟಿದೆ. ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ವ್ಯವಸ್ಥೆ ಜನಹಿತಕ್ಕಾಗಿ ರಚಿಸಲಾಗಿದೆ. ನ್ಯಾಯಂಗ ಎಂದರೆ ಸವಿಂಧಾನಾತ್ಮಕ ನೆಲೆಯಲ್ಲಿ ಕಾನೂನಾತ್ಮಕವಾಗಿ ಬದುಕುವ ವ್ಯವಸ್ಥೆಯಾಗಿದೆ. ಅವುಗಳಿಗೆ ತಲೆಬಾಗುವುದು ಪ್ರತೀ ಪ್ರಜೆಯ ಕರ್ತವ್ಯ. ಇದು ನಮಗೆ ಸಂವಿಧಾನತ್ಮಕವಾಗಿ ಆಸ್ತಿತ್ವವನ್ನು ನೀಡಿದೆ. ಇಂತಹ ಕಾನೂನು ಚಿಂತನೆಯ ಅಂಧೋಲನ ನಮ್ಮಲ್ಲಾಗಬೇಕು. ಕಾನೂನನ್ನು ಗೌರವಿಸಿ ಮುನ್ನಡೆದಾಗ ಎಲ್ಲವೂ ಸುಗಮವಾಗಿ ಸಾಗುತ್ತದೆ
– ರೋಹಿಣಿ ಜೆ. ಸಾಲ್ಯಾನ್ ನ್ಯಾಯವಾದಿ
ಆಧುನಿಕ ಶಿಕ್ಷಣ ಮಕ್ಕಳನ್ನು ಸಾಮಾಜಿಕ ಮೌಲ್ಯಗಳಿಂದ ದೂರ ಇರಿಸುವಂತಿದೆ. ಆದ್ದರಿಂದಲೇ ಸಾಮಾಜಿಕ ಜವಾಬ್ದಾರಿಯಿಂದ ಯುವ ಜನಾಂಗ ದೂರವಾಗುತ್ತದೆ. ಯುವ ಪೀಳಿಯಲ್ಲಿ ವೈಚಾರಿಕ ಚಿಂತನೆ ಬೆಳೆಯಬೇಕು. ಹಣವೇ ಅಂತಿಮವಲ್ಲ, ಸಾಮಾಜಿಕ ಮೌಲ್ಯವು ಬದುಕನ್ನು ರೂಪಿಸುತ್ತದೆ. ಮಕ್ಕಳಲ್ಲಿ ಎಳವೆಯಿಂದ ಸಂಸ್ಕೃತಿ, ಸಂಸ್ಕಾರ, ಆಚಾರ, ವಿಚಾರ ಹಾಗೂ ಮಾನವೀಯತೆಯ ಮೌಲ್ಯಗಳನ್ನು ಬೆಳೆಸುವ ಅಗತ್ಯತೆಯಿದೆ. ಮಕ್ಕಳ ಅಭಿರುಚಿಗೆ ತಕ್ಕಂತೆ ಅವರನ್ನು ಶಿಕ್ಷಣ ಸಂಸ್ಥೆಗಳು ಹಾಗೂ ಪಾಲಕರು ಬೆಳೆಸಬೇಕು. ಕೇವಲ ಪಡೆದ ಅಂಕಗಳ ಮಾನದಂಡದಿಂದ ಮಕ್ಕಳನ್ನು ಗುರುತಿಸಲು ಸಾಧ್ಯವಿಲ್ಲ
– ಡಾ| ಭರತ್ಕುಮಾರ್ ಪೊಲಿಪು
ವಿಚಾರವಾಗಿ ಮತ್ತು ಪ್ರಶಸ್ತಿ ಪುರಸ್ಕೃತ ರಂಗತಜ್ಞ
ಚಿತ್ರ-ವರದಿ : ರೋನ್ಸ್ ಬಂಟ್ವಾಳ್