Tragic: ಗೆಲುವಿನ ಸಂಭ್ರಮಾಚರಣೆ ವೇಳೆ ಕುಸಿದು ಬಿದ್ದು ಕರ್ನಾಟಕ ತಂಡದ ಮಾಜಿ ಆಟಗಾರ ಮೃತ್ಯು
Team Udayavani, Feb 24, 2024, 1:38 PM IST
ಬೆಂಗಳೂರು: ಹೃದಯಘಾತದಿಂದ ಕುಸಿದು ಬಿದ್ದು ಯುವ ಕ್ರಿಕೆಟಿಗರೊಬ್ಬರು ಮೃತಪಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಕರ್ನಾಟಕ ತಂಡದ ಮಾಜಿ ಕ್ರಿಕೆಟಿಗ ಕೆ. ಹೊಯ್ಸಳ (34) ಮೃತ ಆಟಗಾರ.
ಬೆಂಗಳೂರಿನ ಆರ್ಎಸ್ಐ ಕ್ರಿಕೆಟ್ ಮೈದಾನದಲ್ಲಿ ಏಜಿಸ್ ದಕ್ಷಿಣ ವಲಯ ಐಎ ಹಾಗೂ ಎಡಿ ಟೂರ್ನಿಯಲ್ಲಿ ತಮಿಳುನಾಡು ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸಿದ ಬಳಿಕ ಹೊಯ್ಸಳ ಅವರು ತಂಡದ ಆಟಗಾರರೊಂದಿಗೆ ಸಂಭ್ರಮಾಚರಣೆ ಮಾಡುತ್ತಿದ್ದಾಗ, ಇದ್ದಕ್ಕಿದ್ದಂತೆ ಅವರಿಗೆ ಎದೆನೋವು ಕಾಣಿಸಿಕೊಂಡು ಕುಸಿದುಬಿದಿದ್ದಾರೆ. ಕೂಡಲೇ ಅವರಿಗೆ ಸಿಪಿಆರ್ ನೀಡಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಂಬ್ಯುಲೆನ್ಸ್ ಮೂಲಕ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಹೃದಯಾಘಾತದಿಂದ ಅವರು ನಿಧನರಾಗಿದ್ದಾರೆ.
ಈ ಘಟನೆ ಗುರುವಾರ(ಫೆ.22 ರಂದು) ನಡೆದಿದ್ದು, ಶುಕ್ರವಾರ(ಫೆ.23 ರಂದು) ಬೆಳಕಿಗೆ ಬಂದಿದೆ.
ಹೊಯ್ಸಳ ಅವರು, ಮಧ್ಯಮ ಕ್ರಮಾಂಕದ ಬ್ಯಾಟರ್ ಮತ್ತು ಬೌಲರ್ ಆಗಿ 25 ವರ್ಷದೊಳಗಿನವರ ವಿಭಾಗದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು. ಕರ್ನಾಟಕ ಪ್ರೀಮಿಯರ್ ಲೀಗ್ ನಲ್ಲೂ ಆಡಿದ್ದರು.