ಕಾವೇರಿ ಪ್ರಾಧಿಕಾರ: ಇಂದು ಸಭೆ
Team Udayavani, Jul 22, 2022, 6:44 AM IST
ಹೊಸದಿಲ್ಲಿ: ಮೇಕೆದಾಟು ಯೋಜನೆ ಕುರಿತ ವಿಷಯವನ್ನೇ ಪ್ರಮುಖ ಅಜೆಂಡಾವಾಗಿಸಿಕೊಂಡ ಕಾವೇರಿ ನದಿ ನೀರು ನಿರ್ವಹಣ ಪ್ರಾಧಿಕಾರದ ಸಭೆ ಶುಕ್ರವಾರ ಹೊಸದಿಲ್ಲಿಯಲ್ಲಿ ನಡೆಯಲಿದೆ.
ಈ ಪ್ರಾಧಿಕಾರಕ್ಕೆ ಮೇಕೆದಾಟು ಡಿಪಿಆರ್ ಕುರಿತಂತೆ ಚರ್ಚಿಸುವ ಅಧಿಕಾರವೇ ಇಲ್ಲ ಎಂಬ ತಮಿಳುನಾಡು ಆಕ್ಷೇಪವನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿದ್ದು, ಹೀಗಾಗಿ ಶುಕ್ರವಾರದ ಸಭೆಯಲ್ಲಿ ರಾಜ್ಯದ ಅಧಿಕಾರಿಗಳು ಭಾಗಿಯಾಗಲಿದ್ದಾರೆ. ಸಭೆಯಲ್ಲಿ ಯಾವುದೇ ಅಭಿಪ್ರಾಯಕ್ಕೆ ಬರುವಂತಿಲ್ಲ ಎಂದು ಸುಪ್ರೀಂಕೋರ್ಟ್ ಸೂಚನೆ ನೀಡಿದ್ದು, ಯೋಜನೆ ಕುರಿತಂತೆ ಚರ್ಚೆಯಷ್ಟೇ ನಡೆಯುವ ಸಾಧ್ಯತೆ ಇದೆ.
ರಾಜ್ಯ ಸರಕಾರ ಈಗಾಗಲೇ ಮೇಕೆದಾಟು ಯೋಜನೆಗೆ ಡಿಪಿಆರ್ ಸಿದ್ಧಪಡಿಸಿದ್ದು, 9,000 ಕೋಟಿ ರೂ. ವೆಚ್ಚದ ಯೋಜನೆ ಇದಾಗಿದೆ. ಇದರಿಂದ 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮತ್ತು ಬೆಂಗಳೂರಿಗೆ ಕುಡಿಯುವ ನೀರನ್ನು ಒದಗಿಸುವ ಉದ್ದೇಶ ಹೊಂದಲಾಗಿದೆ. ಅಲ್ಲದೆ, ಪ್ರತಿ ಬಾರಿ ತಮಿಳುನಾಡು ವಿರೋಧಕ್ಕೂ ಸ್ಪಷ್ಟನೆ ನೀಡಿರುವ ಕರ್ನಾಟಕ, ಈ ಯೋಜನೆಯಿಂದ ತಮಿಳುನಾಡು ಪಾಲಿನ ನೀರಿನಲ್ಲಿ ಕಡಿಮೆಯಾಗುವುದಿಲ್ಲ ಎಂದಿದೆ. ಕ್ಯಾತೆ ಮುಂದುವರಿಸಿರುವ ತಮಿಳುನಾಡು ಸುಪ್ರೀಂಕೋರ್ಟ್ ಮೊರೆ ಹೋಗಿದೆ.
ಇದರ ನಡುವೆಯೇ ಮುಂದಿನ ಮಂಗಳವಾರ ರಾಜ್ಯದ ಅರ್ಜಿಯನ್ನು ಸುಪ್ರೀಂಕೋರ್ಟ್ ಕೈಗೆತ್ತಿ ಕೊಳ್ಳ ಲಿದೆ. ಅಂದೇ ಅಂತಿಮ ವಿಚಾರಣೆ ನಡೆಯಲಿದ್ದು, ನಮ್ಮ ವಕೀಲರು ಸಮರ್ಥವಾಗಿ ವಾದ ಮಂಡನೆ ಮಾಡಲಿ ದ್ದಾರೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.