ಮಕ್ಕಳ ಆತ್ಮವಿಶ್ವಾಸ ಕುಗ್ಗಿಸುವಂತಿಲ್ಲ: ಶಾಲಾ ಶಿಕ್ಷಕರಿಗೆ ಇಲಾಖೆ ಎಚ್ಚರ
Team Udayavani, Jan 11, 2020, 3:05 AM IST
ಬೆಂಗಳೂರು: ಶಾಲೆಗಳಲ್ಲಿ ಮಕ್ಕಳ ಆತ್ಮವಿಶ್ವಾಸ ಕುಗ್ಗಿಸುವ ಅಥವಾ ಇಂತಹ ಯಾವುದೇ ಕ್ರಿಯೆಗಳನ್ನು ಶಾಲೆಯಲ್ಲಿನ ಶಿಕ್ಷಕರು ಮಾಡಿದಲ್ಲಿ ಆದರ ವಿರುದ್ಧ ಶಿಕ್ಷಣ ಇಲಾಖೆ ಶಿಸ್ತು ಕ್ರಮದ ಜತೆಗೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕೊಳ್ಳಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಶಾಲಾ ಶಿಕ್ಷಕರಿಗೆ ಎಚ್ಚರಿಕೆ ನೀಡಿದೆ.
ಮಕ್ಕಳ ಕಲಿಕೆಯಲ್ಲಿನ ಅಂಶ ಗಳನ್ನು ವ್ಯಂಗ್ಯವಾಗಿ ತೋರಿ ಸುವಂತಹ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊಗಳನ್ನು ಹರಿಯಬಿಡುವಂತಹ ಶಿಕ್ಷಕರ ವಿರುದ್ಧ ಕ್ರಮ ತೆಗೆದುಕೊಳ್ಳಲಿದ್ದೇವೆ. ಶಾಲೆಯಲ್ಲಿ ಮಗುವೊಂದು ಶಿಕ್ಷಕರೊಬ್ಬರು ಹೇಳಿ ಕೊಡುತ್ತಿರುವ ಪಕ್ಕೆಲುಬು ಎಂಬ ಪದವನ್ನು ಸರಿಯಾಗಿ ಉಚ್ಚರಿಸಲು ಬಾರದೇ ಪದೇಪದೆ ತಪ್ಪು ಹೇಳುತ್ತಿರುವ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ಆಗಿದೆ.
ಕಲಿಕೆಯ ಹಂತದಲ್ಲಿರುವ ಮಕ್ಕಳು ತಪ್ಪು ಉಚ್ಚಾರ ಮಾಡುವುದು ಸಹಜ. ಆದರೆ, ಅದನ್ನು ವಿಡಿಯೋದಲ್ಲಿ ಪ್ರಸಾರ ಮಾಡಿದಲ್ಲಿ ಅದು ಮಕ್ಕಳ ಆತ್ಮವಿಶ್ವಕ್ಕೆ ಧಕ್ಕೆಯಾಗಿ ಕಲಿಕೆಯಲ್ಲಿ ಹಿಂದುಳಿ ಯುತ್ತಾರೆ. ಹೀಗಾಗಿ ಈ ರೀತಿಯ ಯಾವುದೇ ಕೃತ್ಯ ಮಾಡ ಬಾರದು ಎಂದು ಸೂಚನೆ ನೀಡಿದೆ.
ಶಿಕ್ಷಕರು ಮಕ್ಕಳಿಗೆ ಸರಿಯಾಗಿ ಉಚ್ಚಾರ ಮಾಡುವುದನ್ನು ಕಲಿಸಬೇಕೇ ವಿನಃ ಅದನ್ನು ಅಪರಾಧವೆಂಬಂತೆ ಬಿಂಬಿಸುದಾಗಲಿ, ಅದರ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಲಿ ಮಾಡಿದಲ್ಲಿ ಮಕ್ಕಳಲ್ಲಿ ಕೀಳರಿಮೆ ಉಂಟಾಗುತ್ತದೆ. ಹೀಗಾಗಿ ಮಕ್ಕಳ ಆತ್ಮವಿಶ್ವಾಸ ಕುಗ್ಗಿಸುವ, ಇಂತಹ ಯಾವುದೇ ಕ್ರಿಯೆಗಳನ್ನು ಶಾಲೆಯಲ್ಲಿನ ಶಿಕ್ಷಕರು ಮಾಡಿದಲ್ಲಿ, ಅದರ ವಿರುದ್ಧ ಇಲಾಖೆ ಶಿಸ್ತು ಕ್ರಮದ ಜತೆಗೆ ಕ್ರಿಮಿನಲ್ ಮೊಕದ್ದಮೆಯನ್ನು ಹೂಡಲಾಗುವುದು ಎಂದು ಎಚ್ಚರಿಕೆ ನೀಡಿ, ಆದೇಶ ಹೊರಡಿಸಿದೆ.