ನೇಹಾ ಪಾಲಕರಿಗೆ ಕರೆ ಮಾಡಿ ಸಾಂತ್ವನ ಹೇಳಿದ ಡಿಸಿಎಂ ಡಿ.ಕೆ.ಶಿವಕುಮಾರ್
ಚುನಾವಣೆ ಬಳಿಕ ಮನೆಗೆ ಬರುವುದಾಗಿ ಭರವಸೆ
Team Udayavani, Apr 21, 2024, 11:03 PM IST
ಬೆಂಗಳೂರು: ಹುಬ್ಬಳ್ಳಿಯ ಕಾಲೇಜೊಂದರ ಆವರಣದೊಳಗೆ ಹತ್ಯೆಗೀಡಾದ ನೇಹಾ ಹಿರೇಮಠ ಅವರ ತಂದೆ ನಿರಂಜನ ಹಿರೇಮಠ ಅವರಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರವಿವಾರ ದೂರವಾಣಿ ಕರೆ ಮಾಡಿ ಸಾಂತ್ವನ ಹೇಳಿದ್ದಾರೆ.
ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಸಹೋದರ ಡಿ.ಕೆ.ಸುರೇಶ್ ಅವರ ಪರ ಆನೇಕಲ್ನಲ್ಲಿ ಪ್ರಚಾರ ರ್ಯಾಲಿ ಕೈಗೊಂಡಿದ್ದ ಸಂದರ್ಭದಲ್ಲಿ ಅವರು ನಿರಂಜನ ಹಿರೇಮಠ ಅವರಿಗೆ ದೂರವಾಣಿ ಕರೆ ಮಾಡಿದರು. ಈ ದುರಂತದಿಂದ ನಮಗೂ ಆಘಾತವಾಗಿದೆ. ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಆಗಿರುವ ದುಃಖದಲ್ಲಿ ನಾವೂ ಭಾಗಿಯಾಗಿದ್ದೇವೆ. ಸರಕಾರ ನಿಮ್ಮ ಜತೆಗಿದೆ. ತಪ್ಪಿತಸ್ಥರಿಗೆ ಶಿಕ್ಷೆ ಖಂಡಿತ. ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
ಪೂರ್ವನಿಗದಿತ ಚುನಾವಣೆ ಪ್ರಚಾರ ಕಾರ್ಯದಲ್ಲಿ ನಿರತನಾಗಿದ್ದ ಕಾರಣ ಹುಬ್ಬಳ್ಳಿಗೆ ಖುದ್ದು ಬರಲು ಆಗಲಿಲ್ಲ. ಚುನಾವಣೆ ಮುಗಿದ ಬಳಿಕ ಖಂಡಿತವಾಗಿಯೂ ಬರುತ್ತೇನೆ. ಮಗಳ ಅಗಲಿಕೆಯಿಂದ ನಿಮಗೆ ಆಗಿರುವ ನೋವು ಎಂಥದ್ದು ಎಂಬುದು ನನಗೆ ಅರ್ಥವಾಗುತ್ತದೆ. ನೋವು ಭರಿಸುವ ಶಕ್ತಿಯನ್ನು ನಿಮಗೆ, ನಿಮ್ಮ ಕುಟುಂಬ ಸದಸ್ಯರಿಗೆ ಆ ಭಗವಂತ ನೀಡಲಿ ಎಂದು ಹೇಳಿದ್ದಾರೆ.