ಜಾಧವ ಮಗಳು ಫೇಲಾಗಲು ನಾವು ಕಾರಣರೇ?: ಖರ್ಗೆ
Team Udayavani, May 12, 2019, 3:04 AM IST
ಕಲಬುರಗಿ: “ನಮಗೆ ಮೋಸ ಮಾಡಿ ಬೆನ್ನಿಗೆ ಚೂರಿ ಹಾಕಿದ ನಿಮಗೆ ಒಳ್ಳೆಯದಾಗುವುದಿಲ್ಲ’ ಎಂದು ಸಂಸದ ಡಾ| ಮಲ್ಲಿಕಾರ್ಜುನ ಖರ್ಗೆ ಅವರು ಉಮೇಶ ಜಾಧವ ವಿರುದ್ಧ ಕಿಡಿಕಾರಿದ್ದಾರೆ.
ಚಿಂಚೋಳಿ ಮತಕ್ಷೇತ್ರದ ಅರಣಕಲ್, ಕೊಡ್ಲಿ ಹಾಗೂ ಇತರ ಕಡೆಗಳಲ್ಲಿ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿ, ಚಿಂಚೋಳಿ, ಕುಂದಗೋಳ ಉಪ ಚುನಾವಣೆಯು ರಾಜ್ಯದ ಆರು ಕೋಟಿ ಜನರ ಭವಿಷ್ಯ ನಿರ್ಧರಿಸುವ ಚುನಾವಣೆಯಾಗಿದೆ.
ಈ ಚುನಾವಣೆ ಏಕೆ ಎದುರಾಗಿದೆ ಎಂದು ಜನತೆ ಆಲೋಚಿಸಿ ಮತ ನೀಡಬೇಕು. ಒಬ್ಬ ವ್ಯಕ್ತಿ ಪಕ್ಷಕ್ಕೆ ಮುಖ್ಯ ಅಲ್ಲ. ನಾನು ಕಾಂಗ್ರೆಸ್ ಸೇರಿ 50 ವರ್ಷ ಆಯಿತು. ತತ್ವ ಪಾಲನೆಯಿಂದ ರಾಜಕೀಯ ಅಸ್ತಿತ್ವ ರೂಪಿಸಿಕೊಂಡಿದ್ದೇನೆ. ಜಾಧವ ಮಗಳು ಫೇಲಾದರೆ ನಾವು ಕಾರಣರಂತೆ. ನಮಗೆ ಮೋಸ ಮಾಡಿ ಬೆನ್ನಿಗೆ ಚೂರಿ ಹಾಕಿದ ನಿಮಗೆ ಒಳ್ಳೆಯದಾಗುವುದಿಲ್ಲ.
ಕಾಂಗ್ರೆಸ್ ವಿಚಾರಧಾರೆ ಒಪ್ಪಿಕೊಂಡು ಬಂದಿದ್ದರೂ ಈಗ ಪಕ್ಷ ಏಕೆ ಬಿಟ್ಟರು? 2013, 2018ರಲ್ಲಿ ಎರಡು ಸಲ ಬಿಜೆಪಿ ವಿರುದ್ಧ ಟೀಕೆ ಮಾಡಿ ಗೆದ್ದರು. ಈಗ ನನ್ನ ವಿರುದ್ಧ ಬಯ್ಯುವುದೇ ಕಾಯಕ ಮಾಡಿಕೊಂಡಿದ್ದಾರೆ. ಇದನ್ನೆಲ್ಲ ಜನ ಅರ್ಥ ಮಾಡಿಕೊಳ್ಳುತ್ತಾರೆ ಹಾಗೂ ತಕ್ಕ ಉತ್ತರ ನೀಡುತ್ತಾರೆ ಎಂದು ಹೇಳಿದರು.