ಮುದ್ರಾಂಕ ಶುಲ್ಕ ಹೆಚ್ಚಳ ಇಲ್ಲ: ಸಚಿವ ಕೃಷ್ಣ ಬೈರೇಗೌಡ
Team Udayavani, Jul 13, 2023, 6:00 AM IST
ಬೆಂಗಳೂರು: ಮುದ್ರಾಂಕ ಶುಲ್ಕ ಹೆಚ್ಚಿಸುವ ಪ್ರಸ್ತಾವ ಸದ್ಯ ಸರಕಾರದ ಮುಂದಿಲ್ಲ. ಆದರೆ ಮಾರ್ಗಸೂಚಿ ದರವನ್ನು ಪರಿಷ್ಕರಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಪ್ರಶ್ನೋತ್ತರ ಕಲಾಪ ದಲ್ಲಿ ಬಿಜೆಪಿಯ ಪಿ.ಎಂ. ಮುನಿರಾಜು ಗೌಡ ಅವರು, ನಾಲ್ಕು ವರ್ಷಗಳ ಹಿಂದೆ ಪರಿಷ್ಕರಣೆ ಆಗಿದ್ದ ಮಾರ್ಗಸೂಚಿ ದರ ಅವೈಜ್ಞಾನಿಕವಾಗಿದ್ದು, ಅದನ್ನು ಸರಿಪಡಿಸ ಬೇಕೆಂದು ಮನವಿ ಮಾಡಿದರು.
ಇದಕ್ಕೆ ಉತ್ತರಿಸಿದ ಸಚಿವರು, ಸದಸ್ಯರು ಹೇಳಿರುವ ವಿಷಯ ಸರಿ ಇದೆ. ಆಸ್ತಿಗಳ ಕ್ರಯ ಮತ್ತು ನೋಂದಣಿಯಲ್ಲಿ ಮಾರ್ಗಸೂಚಿ ದರ ತೋರಿಸಿ ಉಳಿದ ಮೊತ್ತಕ್ಕೆ ನಗದು ವಹಿವಾಟು ನಡೆಸಲಾಗುತ್ತದೆ. ಇದು ಕಪ್ಪು ಹಣಕ್ಕೆ ದಾರಿ ಮಾಡಿಕೊಡುತ್ತದೆ. ಆದ್ದರಿಂದ ಮಾರ್ಗಸೂಚಿ ದರಗಳನ್ನು ಪರಿಷ್ಕರಿಸಿ ಕಟ್ಟುನಿಟ್ಟಾಗಿ ಜಾರಿಗೆ ತಂದಲ್ಲಿ ಕಪ್ಪು ಹಣವನ್ನೂ ನಿಯಂತ್ರಿಸಬಹುದು. ಮಾರ್ಗಸೂಚಿ ದರ ಪರಿಷ್ಕರಣೆ ಆಗದ ಕಾರಣ ಆಸ್ತಿ ಮಾಲಕರಿಗೂ ಸಮಸ್ಯೆ ಆಗುತ್ತಿದೆ ಎಂದು ಹೇಳಿದರು.