ವಿಷ ಪ್ರಸಾದ ಪ್ರಕರಣ: ದೋಷಾರೋಪ ಪಟ್ಟಿ ಸಲ್ಲಿಕೆ
Team Udayavani, May 16, 2019, 3:00 AM IST
ಚಿಕ್ಕಬಳ್ಳಾಪುರ: ಚಿಂತಾಮಣಿಯ ನಾರಸಿಂಪೇಟೆಯಲ್ಲಿರುವ ಗಂಗಮ್ಮ ಗುಡಿಯಲ್ಲಿ ಕಳೆದ ಜನವರಿ 25ರಂದು ವಿಷ ಪ್ರಸಾದ ಸೇವಿಸಿ ಇಬ್ಬರು ಅಮಾಯಕ ಮಹಿಳೆಯರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿರುವ ಚಿಂತಾಮಣಿ ನಗರ ಠಾಣೆ ಪೊಲೀಸರು, ಸ್ಥಳೀಯ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
ಪೊಲೀಸರ ತನಿಖೆ ವೇಳೆ ವಿಷ ಪ್ರಸಾದ ಹಂಚಿಕೆ ಮಾಡಿರುವ ಕುರಿತು ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣದ ಪ್ರಮುಖ ಸೂತ್ರದಾರಿ ಸ್ಥಳೀಯ ಸಾಲಿಪೇಟೆ ನಿವಾಸಿ ಲಕ್ಷ್ಮೀ ಮಂಜುನಾಥ (46), ಆಕೆಯ ಪ್ರಿಯಕರ ಲೋಕೇಶ್ (37), ವಿಷ ಪ್ರಸಾದ ಹಂಚಿಕೆಗೆ ಲಕ್ಷ್ಮೀಗೆ ಸಹಾಯ ಮಾಡಿದ ಆರೋಪಕ್ಕೆ ತುತ್ತಾಗಿರುವ ಅಮರವತಿ ಮುನಿರಾಜು (28) ಹಾಗೂ ದೇಗುಲದ ಬಳಿ ಹೂವಿನ ವ್ಯಾಪಾರ ಮಾಡುತ್ತಿದ್ದ ಪಾರ್ವತಮ್ಮ ರಾಮಚಂದ್ರಪ್ಪ (40) ಎಂಬಾಕೆ ಸೇರಿ ಒಟ್ಟು ನಾಲ್ವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.