ಖುಲಾಸೆ ಪ್ರಕರಣಗಳ ಮರು ಪರಿಶೀಲನೆ: ವಿವರ ಕೇಳಿದ ಹೈ
Team Udayavani, Jan 9, 2020, 3:03 AM IST
ಬೆಂಗಳೂರು: ಖುಲಾಸೆಗೊಂಡ ಎಲ್ಲಾ ಬಗೆಯ ಕ್ರಿಮಿನಲ್ ಪ್ರಕರಣಗಳ ಮರುಪರಿಶೀಲನೆಗೆ ಸಂಬಂಧಿಸಿದಂತೆ 2014ರ ಅ.20ರಿಂದ ಈವರೆಗೆ ರಾಜ್ಯ, ವಲಯ ಹಾಗೂ ಜಿಲ್ಲಾ ಮಟ್ಟದ ಖುಲಾಸೆ ಮರುಪರಿಶೀನಾ ಸಮಿತಿಗಳು ಎಷ್ಟು ಸಭೆಗಳನ್ನು ನಡೆಸಿ, ಎಷ್ಟು ಪ್ರಕರಣಗಳ ಮರುಪರಿಶೀಲಿಸಿದೆ ಎಂಬ ವಿವರ ನೀಡುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಈ ಕುರಿತು ವಕೀಲ ಎಸ್. ಉಮಾಪತಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾ. ಎ.ಎಸ್. ಓಕಾ ಹಾಗೂ ನ್ಯಾ. ಹೇಮಂತ್ ಚಂದನಗೌಡರ್ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಕೆಲ ಕಾಲ ವಾದ ಆಲಿಸಿದ ನ್ಯಾಯಪೀಠ, ಜಿಲ್ಲಾ ಮತ್ತು ವಲಯ ಮಟ್ಟದ ಖುಲಾಸೆ ಮರುಪರಿಶೀಲನಾ ಸಮಿತಿಗಳು ಪ್ರತಿ ತಿಂಗಳು ಸಭೆ ನಡೆಸಿ, ಮರುಪರಿಶೀಲಿಸಿದ ಪ್ರಕರಣಗಳು ಹಾಗೂ ಆ ಸಂಬಂಧದ ಶಿಫಾರಸುಗಳನ್ನು ಒಳಗೊಂಡ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು.
ಅದೇ ರೀತಿ ರಾಜ್ಯ ಮಟ್ಟದ ಖುಲಾಸೆ ಮರುಪರಿಶೀಲನಾ ಸಮಿತಿಯು ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಬೇಕು. ಅದರಂತೆ, 2014ರ ಅ.20ರಿಂದ ಇಲ್ಲಿವರೆಗೆ ಎಷ್ಟು ಸಭೆಗಳನ್ನು ನಡೆಸಿ, ಎಷ್ಟು ಪ್ರಕರಣಗಳ ಮರುಪರಿಶೀಲನೆ ನಡೆಸಲಾಗಿದೆ ಎಂದು ಮಾಹಿತಿ ನೀಡಲು ಸರ್ಕಾರಿ ವಕೀಲರಿಗೆ ನಿರ್ದೇಶನ ನೀಡಿ, ವಿಚಾರಣೆಯನ್ನು ಫೆ.19ಕ್ಕೆ ಮುಂದೂಡಿತು.